, ,

ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

 

 

rumi6.jpg

-೧-

ನೀರೊಳಗೆ ತಿರುಗುತ್ತಿದೆ ನೀರ ಗಾಲಿ,

ತಾರೆ ತಿರುಗುತ್ತಿದೆ ಚಂದ್ರನೊಡನೆ.

ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ

 ಇಷ್ಟೊಂದು ಬೆಳಕು ಇಲ್ಲಿ !

-೨-

ನೀನೇನೆಂದು ನೀನು ನುಡಿದೆ,

ನಾನೇನೆಂದು ನಾನೂ.

ನಿನ್ನ ಚಲನೆ ನನ್ನ ಮಿದುಳೊಳಗೆ,

ಏನೋ ತಿರುಗುತ್ತಿದೆ ಒಳಗೆ.

ಇಡಲಾಗುತ್ತಿಲ್ಲ ಹೆಸರ,

ತಿರುಗುತ್ತಿದೆ ಅದು ಅಷ್ಟು

ಚಂದದಲ್ಲಿ.

-೩-rumi1.jpg

ಚಲಿಸು ನಡುವಿನೊಳಕ್ಕೆ,

ಸುತ್ತು ಭುವಿಯಂತೆ,ಚಂದ್ರನೂ ಸುತ್ತು.

ಸುತ್ತುವವು ಅವು ಅವುಗಳ ಒಲವಿನಂತೆ.

ಸುತ್ತು ತೊಡಗುವುದು ನಡುವಿನಿಂದಲೇ.

-೪-

ಈ ಇರುಳು ನಿನ್ನ ಗೂಡ ಸುತ್ತ  ಸುತ್ತುತ್ತಿರುವೆ,

ತಿರುತಿರುಗಿ ಬೆಳಕು ಹರಿವವರೆಗೆ.

ಗಾಳಿ ತಣ್ಣಗೆ ಆಗ ಅರಹುತ್ತದೆ,

ಅವನು ಮಧುಬಟ್ಟಲ ಎತ್ತುತ್ತಾನೆ,

ಅದು ಯಾರದೋ ತಲೆಯ ಬುರುಡೆ.

-೫-rumi7jpg.jpg

ನಡೆ ನಿಲ್ಲದೆ, ಇರದಿದ್ದರೂ ತಲುಪಲು ಎಡೆ.

ಕಲಿ ಗಮನಿಸದಿರಲು ದೂರವನ್ನು..

ಅದು ನಮಗಿರುವುದಲ್ಲ, ಚಲಿಸು ಒಳಗಡೆಗೇ,

ಚಲಿಸದಿರು ಭಯ ದೂಡುವ ಕಡೆಗೆ.

-೬-

ಈ ಹೊತ್ತು ಈ ಒಲವು ಬಂತು ನನ್ನೊಳಗೆ ಇರಲು,

ಹಲವು ಇರವುಗಳು ಈ ಒಂದರೊಳಗೆ.

ಅಕ್ಕಿಯ ಕಾಳಲ್ಲಿ  ಭತ್ತದ ಸಾವಿರ ಕಂತೆ,

ಸೂಜಿಯ ಕಣ್ಣಲ್ಲಿ ತಾರೆಗಳು ಕತ್ತಲೆ ತೆರೆ.

-೭-rumi5.jpg

ಅರಿಯದೊಂದು ಚಲಿಸುತ್ತಿದೆ ನಮ್ಮೊಳಗೆ,

ಅದು ಚಲಿಸುತ್ತಿದೆ ಈ ವ್ಯೋಮವನ್ನೇ,

ತಲೆಗೆ ಅರಿವಾಗದೆ ಪಾದ,

ಪಾದವರಿಯದೆ ಶಿರ-

ಬೇಕೂ ಇಲ್ಲ ಅವುಗಳಿಗೆ ಇದೆಲ್ಲ

ಸುಮ್ಮನೆ ಚಲಿಸುತ್ತಿದೆ.

-೮-

ಕೆಲವೊಮ್ಮೆ ಇರುಳು ಬೆಳಕವರೆಗೆ ಎದ್ದಿರುತ್ತದೆ;

ಚಂದ್ರ, ಸೂರ್ಯ ಬರುವವರೆಗೆ.

ನೀ ಬಾವಿಯ ಕತ್ತಲ ತಳದ ಕೊಡಪಾನ-

ಕಾಣುವೆ ಬೆಳಕು- ಜಗ್ಗಿದರೆ.

-೯-

rumi61.jpg

 ಇಷ್ಟು ಸಣ್ಣವ ನಾನು ತೀರಾ ಕಾಣಿಸದವನು

ಹೇಗೆ ಬಂತು ಇಷ್ಟೊಂದು ಪ್ರೀತಿ ನನ್ನ ಒಳಕ್ಕೆ?

ನೋಡು ನಿನ್ನ ಕಣ್ಣುಗಳು ಎಷ್ಟೊಂದು ಕಿರಿದು

ಕಾಣುವುದಲ್ಲ ಆದರೂ ಅಗಾಧವನು.

-೧೦-

ಏನೋ ನಮ್ಮ ರೆಕ್ಕೆಗಳ ಬಿಚ್ಚುವುದು, ಏನೋ ಈ

ನೀರಸವ,ಬೇಸರವ ಪರಿಹರಿಸುವುದು.

ಯಾರೋ ಎದುರಿನ ಈ ಮಧು ಬಟ್ಟಲ ತುಂಬಿಸುವರು

ನಾಲಗೆ ಕೇವಲ ದೈವದ ರುಚಿಯ ಅರಿಯುವುದು.

-೧೧-rumi2.jpg

ಬದುಕುವುದು ಭ್ರಾಂತಿಯ ತುಟಿಯ ತುದಿಯಲ್ಲಿ

ಕಾರಣಗಳ ಕಾಣಬೇಕೆಂದೆಣಿಸಿ.

ಕದವ ತಟ್ಟುತ್ತೇನೆ. ಅದು ತೆರೆಯುತ್ತದೆ.

ತಟ್ಟುತ್ತಿದ್ದೆ ಇಷ್ಟೂ ಹೊತ್ತು ಒಳಗಿನಿಂದಲೇ!

-೧೨-

ಕುಣಿ-ಮುರಿದಾಗ,

ಕುಣಿ-ಗಾಯ ತೆರಕೊಂಡಾಗ,

ಕುಣಿ-ಬಡಿದಾಟದ ನಡುವೆ,

ಕುಣಿ-ನಿನ್ನದೇ ನೆತ್ತರಲ್ಲಿ,

ಕುಣಿ-ಇಲ್ಲದಾದಾಗ.

——————–

“ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು” ಗೆ 8 ಪ್ರತಿಕ್ರಿಯೆಗಳು

  1. ವಂದನೆಗಳು ರೂಮೀದರಿಗೆ..

    ಸೂಫಿ ಕವಿಯ ಬೆಚ್ಚನೆ ಭಾವಾನುವಾದಗಳು ಸುತ್ತಲ ಚಳಿಯನ್ನ ದೂರ ತಳ್ಳಿ ಇಲ್ಲೆಲ್ಲ ಹೂಬಿಸಿಲು..

    ಎಲ್ಲ ಹನಿಗಳೂ ಬೆಚ್ಚಗಿವೆ.

    “ಕದವ ತಟ್ಟುತ್ತೇನೆ. ಅದು ತೆರೆಯುತ್ತದೆ.
    ತಟ್ಟುತ್ತಿದ್ದೆ ಇಷ್ಟೂ ಹೊತ್ತು ಒಳಗಿನಿಂದಲೇ!” ಯಂತೂ ಹಿತವಾದ ಸುಡುವಿಕೆ.

    ಪ್ರೀತಿಯಿಂದ
    ಸಿಂಧು

  2. ರಶೀದರೆ,
    ನಿಮ್ಮ ಪದಗಳ ಹರಿಯುವಿಕೆಗೆ, ಹಗುರತೆಗೆ, ಲಾಲಿತ್ಯಕ್ಕೆ ಯಾವಾಗಲೂ ನಾನು ಬೆರಗಾಗುವುದು. ಒಂದು ಪದವೂ ಮನಕ್ಕೆ ಭಾರವೆನಿಸದು. ಈ ಕವಿತೆಗಳನ್ನು ಆಂಗ್ಲದಲ್ಲಿ ಓದಲಿಕ್ಕೆ ಆಸೆಯೇ ಉಕ್ಕುತ್ತ ಇಲ್ಲ – ಅಷ್ಟು ಚೆಂದ ಕಾಣುತ್ತಿವೆ ಇವು. ಆದರೆ ನಿಮ್ಮ ಈ ದಿವ್ಯಮೌನ ದೇವರಾಣೆಗೂ ಸರಿಯಿಲ್ಲ. ನಾವು ಕಮೆಂಟು ಮಾಡುವುದನ್ನು ನಿಲ್ಲಿಸಬೇಕಾಗುತ್ತೆ ಅಷ್ಟೆ!

    – ಟೀನಾ

  3. ಸುಮ್ಮನೆ ಅಷ್ಟು ಚಂದದಲ್ಲಿ ತಿರುಗುವ ಆ ಅದಕ್ಕೆ ಹೆಸರಿಡುವ ಹಂಬಲ ನಮಗೆ ಬರುವುದಾದರೂ ಯಾಕೆ? ಅಥವಾ ಆ ಹಂಬಲದ ಬಲವೇ ಇಷ್ಟು ಚಂದದ ಕವಿತೆಗಳ ಹುಟ್ಟಿಗೂ ಕಾರಣವ?

    ಮೀರ.

  4. ರಶೀದ್ ಅವರಿಗೆ ನಮಸ್ಕಾರ,
    ನನಗೆ ರೂಮಿ ಹೊಸ ಪರಿಚಯ. ಇನ್ನೂ ಹೆಚ್ಚು ಕವಿತೆಗಳನ್ನು ಓದುವಂತೆ ಪ್ರೇರೇಪಿಸಿತು ನಿಮ್ಮ ಅನುವಾದ. ನಿಜಕ್ಕೂ ನಿಮ್ಮ ಅನುವಾದದಲ್ಲಿ ಎಷ್ಟೊಂದು ನಿರ್ಮಲತೆ, ಮುಂಜಾವಿನ ಹಿಮದಲ್ಲಿ ಶುಭ್ರಗೊಂಡಷ್ಟು ತಾಜಾ. ಈ ಸಾಲುಗಳು ಅಚ್ಚೊತ್ತಿದವು.

    ಬದುಕುವುದು ಭ್ರಾಂತಿಯ ತುಟಿಯ ತುದಿಯಲ್ಲಿ

    ಕಾರಣಗಳ ಕಾಣಬೇಕೆಂದೆಣಿಸಿ.

    ಕದವ ತಟ್ಟುತ್ತೇನೆ. ಅದು ತೆರೆಯುತ್ತದೆ.

    ತಟ್ಟುತ್ತಿದ್ದೆ ಇಷ್ಟೂ ಹೊತ್ತು ಒಳಗಿನಿಂದಲೇ!

    ಒಳ್ಳೆ ಪದ್ಯ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
    ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: