ನಾನು ಸಾಗರದ ಶಿಲಾಬಾಲಿಕೆ ಅಂತ ಹೇಳಿ ಒಬ್ಬರು ಕವಿತೆಗಳನ್ನು ಮೇಲ್ ಮಾಡಿದ್ದಾರೆ. ಓದಲು ಚೆನ್ನಾಗಿಯೇ ಇರುವ ಈ ಕವಿತೆಗಳು ನಿಮ್ಮ ಸಂತೋಷಕ್ಕಾಗಿ:

1
ಇದು ತೀರಾ ಖಾಸಗಿ ಸಂಗತಿ ಎಂಬಂತೆ
ಉರಿಯ ನಡುವೆ ಮಳೆ ಎರಡು ಹನಿ
ಬೀಳಿಸಿ ಹೋಯಿತು.ಮಣ್ಣೆಲ್ಲ ‘ಘಂ‘ ಅಂತ ಪುಲಕಗೊಂಡು
ನೀ ಬಂದಾಗ ನನಗೆ ಆಗುವ ಹಾಗೆ
ಬನದಲ್ಲಿ ನವಿಲುಗಳು ಕೇಕೆ ಹಾಕಲು ತೊಡಗಿತು.

2
ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ
ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ
ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ
ವರದಾ ನದಿಯ ನೀರು ನೀಲಿ
ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ!

3
ನೀನು ಸಣ್ಣಗಿದ್ದೀಯಆದರೂ ಚನ್ನಾಗಿದ್ದೀಯ
ಯಾಕೆ ಸಣ್ಣಗೆ ಕಂಪಿಸುತ್ತೀಯ?
ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ
ನೀನು ‘ಸಹೋದರೀ‘ಅಂದೆ
ಆದರೂ ನನಗೆ ಖುಷಿಯಾಯಿತು
ನೀ ಇನ್ನೆಂದು ಬರುವೆ?

4
ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು
ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್
ಸರಿಮಾಡಿಕೊಂಡು ಹೊರಟ
ಅಮ್ಮ ತುರಿಮಣೆ ಎಳಕೊಂಡು ಕುಳಿತಳು
ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ
ಕೃಷ್ಣ ಬಂಗಾರ ವರ್ಣ
ಜೋಕಾಲಿಯಾಡುತ್ತಿದ್ದ!

[ಬಹುಶಃ ನಿಮ್ಮ ಪ್ರತಿಕ್ರಿಯೆ ಈ ಕವಯತ್ರಿಯನ್ನು ಇನ್ನಷ್ಟು activate-motivate ಮಾಡಬಹುದು]