The Mysore Post

Thursday December 27, 2007

ಒಬ್ಬ ಐರಿಷ್ ಹುಡುಗನ ಅಲೆದಾಟ

white-blossom-tree.jpg

ಕತೆಯ ಆಶೆಯನ್ನು ಬಿಟ್ಟು ಮತ್ತೆ ಸುಮ್ಮನೇ ತಿರುಗಾಟ ಶುರು ಮಾಡಿದ್ದೆ. ಏನು ಬರೆಯಲು ಹೊರಟರೂ ಮತ್ತೆ ಅದೇ ಬಾಲ್ಯಾಕಾಲದ ಹಾವಳಿ ಜಾಸ್ತಿಯಾಗಿ. ಹಳೆಯದ್ದನ್ನೆಲ್ಲ ಮೂಟೆಕಟ್ಟಿ ಅಟ್ಟದಲ್ಲಿಟ್ಟು ಇಲ್ಲಿಗೆ ಬಂದರೂ ಬಾಲ್ಯದ ಕಾಟ ಕಡಿಮೆಯಾಗಲಿಲ್ಲವಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದೆ. ಊರಲ್ಲಿರುವ ಮಡದಿ ಕಾಗದ ಬರೆದು `ನೀನು ಗೊತ್ತೇ ಇಲ್ಲದ ಅಪರಿಚಿತ ಅಂತ ಅನ್ನಿಸುತ್ತಿದೆ. ನೀನು ಬೇರೆ ಯಾರೋ ಗಂಡಸು ಅಂತ ಅನ್ನಿಸಿ ಹೆದರಿಕೆಯಾಗುತ್ತಿದೆ. ನಿಜಕ್ಕೂ ನೀನು ಯಾರೂ ? ನನಗೆ ಯಾಕೋ ನೀನು ಎಲ್ಲೋ ಇರುವ ಬೇರೆ ಯಾರೋ ಮನುಷ್ಯ ಅಂತ ಅಳುಬರುತ್ತಿದೆ’ ಅಂತೆಲ್ಲಾ ಬರೆದಿದ್ದಳು. ಅವಳಿಗೆ ಸಮಾಧಾನ ಮಾಡಲು ಹೋಗದೆ ನಾನೂ ದುಷ್ಟನಂತೆ ಉತ್ತರ ಬರೆದಿದ್ದೆ. ಆಮೇಲೆ ನನ್ನೊಳಗೇ ಸಂಕಟಪಟ್ಟಿದ್ದೆ. ಹೆಂಡತಿಯೊಬ್ಬಳ ಹೆದರಿಕೆಗಳು, ಗಂಡನಾದವನ ದಿಕ್ಕು ದೆಸೆಯಿಲ್ಲದ ತಿರುಗಾಟ… ಇದರ ನಡುವೆಯೇ ಕಳೆದು ಹೋಗುತ್ತಿರುವ ಕಾಲ. ನಾವು ಇದನ್ನೆಲ್ಲ ಮರೆತು ಮಕ್ಕಳ ಹಾಗೆ ಮತ್ತೆ ಕೂಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೆ.

ಷಿಲ್ಲಾಂಗಿನಲ್ಲಿ ಈಗ ಚಳಿಯ, ಬೆಳದಿಂಗಳಿನ ಸಮಯ. ಎಲ್ಲರೂ ಬೆಚ್ಚಿನ ಬಟ್ಟೆಗಳನ್ನು ಹಾಕಿಕೊಂಡು ಬೇರೆಯದೇ ತರಹ ಕಾಣಿಸುತ್ತಿದ್ದಾರೆ. ಚಿರಾಪುಂಜಿಯ ಕಿತ್ತಳೆಯ ಹಣ್ಣು ಮಾರುಕಟ್ಟೆಗೆ ಬಂದಿದೆ. ಎಲ್ಲರೂ ಮನೆಗಳನ್ನು ತೊಳೆದು ಸಿಂಗರಿಸಲು ತೊಡಗಿದ್ದಾರೆ. ಎಲ್ಲರೂ ಕ್ರಿಸ್‌ಮಸ್ ಹಬ್ಬಕ್ಕಾಗಿ ಕಾಯುತ್ತಿದ್ದಾರೆ

ಈ ನಡುವೆ ಓವನ್ ಓ’ ಸಲ್ಲಿವನ್ ಎಂಬ ಅಯರ್ಲೆಂಡ್‌ನ ಗೆಳೆಯ ಕಾಗದ ಬರೆದಿದ್ದಾನೆ. ಸೈಕಲ್ಲು ಹತ್ತಿ ವಿಶ್ವವನ್ನೆಲ್ಲ ಸುತ್ತುತ್ತಿರುವ ಈತ ಈಗ ಯೂರೋಪಿನ ಗಡಿಯಲ್ಲಿರುವ ಟರ್ಕಿ ಗೆ ತಲುಪಿ ಅಲ್ಲಿಂದ ಕಾಗದ ಕಳಿಸಿದ್ದಾನೆ. ಕ್ರಿಸ್‌ಮಸ್ ಹಬ್ಬಕ್ಕೆ ಸರಿಯಾಗಿ ಆತ ಅಟ್ಲಾಂಟಿಕ್ ಕಡಲ ತೀರದಲ್ಲಿರುವ ತನ್ನ ಹಳ್ಳಿಯಲ್ಲಿ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತಾನೆ. ಈಗ ನಾನು ಯೂರೋಪಿನ ಹೊಸ್ತಿಲಲ್ಲಿ ನಿಂತಿದ್ದೇನೆ ಎಂದು ಆತ ಬರೆದಿದ್ದಾನೆ. ಇಂಗ್ಲಿಷಿನಲ್ಲಿ ಈತನ ಹೆಸರು ಓವೆನ್ ಆಂತ. ಐರಿಷ್ ಭಾಷೆಯಲ್ಲಿ ಅದನ್ನು ಓಐನ್ ಅಂತ ಬರೆಯುತ್ತಾರಂತೆ.

ಈತನನ್ನು ನಾನು ನೋಡಿದ್ದು ಒಂದು ತಮಾಷೆಯ ಸಂದರ್ಭ. ಒಂದು ವರ್ಷದ ಹಿಂದೆ ಶಿಲ್ಲಾಂಗಿನ ಅಸ್ಸಾಮಿ ಹೆಂಗಸೊಬ್ಬಳ ಮುರುಕು ಹೋಟೆಲಲ್ಲಿ ಕುಳಿತುಕೊಂಡು ಈತ ಹಾಲಿಲ್ಲದ ಟೀ ಕುಡಿದುಕೊಂಡು ಸಿಗರೇಟು ಸೇದಿಕೊಂಡು ಹೊರಗೆ ನೋಡುತ್ತಿದ್ದ. ಆಗ ಬೆಳ್ಳಗಿನ ಹೂ ಬಿಡುವ ಪ್ಲಂ ಮರಗಳು ಎಲ್ಲ ಕಡೆ ಅರಳಿಕೊಂಡು ನಿಂತಿದ್ದವು. ನಾನೂ ಟೀ ಕುಡಿದುಕೊಂಡು ಈತನನ್ನೇ ಗಮನಿಸುತ್ತಿದ್ದೆ. ಬೆಳ್ಳಗ್ಗೆ ಎತ್ತರಕ್ಕೆ ಲಕ್ಷಣವಾಗಿ ಇದ್ದ. ಜೊತೆಗೆ ವಿಲಕ್ಷಣವಾಗಿ ಮೂಗಿಗೊಂದು ನತ್ತು ಸಿಕ್ಕಿಸಿಕೊಂಡಿದ್ದ. ನನಗೆ ಅದನ್ನು ನೋಡಿ ನಗುಬರುತ್ತಿತ್ತು. ಅಸ್ಸಾಮಿ ಹೆಂಗಸು ಹೋಟೆಲ್ಲಿನ ಗೋಡೆಯಲ್ಲಿ ಜಡೆಸ್ವಾಮಿಯೊಬ್ಬನ ಫೋಟೋ ತೂಗುಹಾಕಿ ಅದಕ್ಕೆ ಊದು ಬತ್ತಿ ಹಚ್ಚಿ ಇಟ್ಟಿದ್ದಳು. ಈತ ಎದ್ದು ನನ್ನ ಬಳಿ ಬಂದು ಆ ಫೋಟೋ ತೋರಿಸಿ ಇದು ಯಾವ ದೇವರು ಅಂತ  ಕೇಳಿದ. ನನಗೂ ಗೊತ್ತಿರಲಿಲ್ಲ. `ಕ್ಷಮಿಸುಗೊತ್ತಿಲ್ಲ’ ಅಂತ ಹೇಳಿದೆ. ಆಮೇಲೆ ನಾವು ಗೆಳೆಯರಾದೆವು. ನಮ್ಮ ಮನೆಗೆ ಬಂದು ಊಟ ಮಾಡಿ ಕುಡಿದು ಊರಿನಿಂದ ಬಂದ ನೆಂಟನಂತೆ ಕ್ಷೇಮ ಸಮಾಚಾರ ಮಾತಾಡಿಕೊಂಡು ಹತ್ತಿರವಾದೆವು. ಹೋಗಲಿ ಬಿಡು ಮೂಗಿಗೆ ನತ್ತು ಯಾಕೆ ಹಾಕಿಕೊಂಡಿದ್ದೀಯಾ ಅಂತ ಕೇಳಿದೆ. ಎಲ್ಲರೂ ಕುತೂಹಲ ಪಡಲಿ, ಮಕ್ಕಳು ನಗಾಡಲಿ ಅಂತ ಹಾಕಿರುವೆ’ ಅಂತ ಹೇಳಿದ.

ಈತ ಹುಟ್ಟಿದ್ದು ಐರ್ಲೆಂಡಿನಲ್ಲಿ ನಲ್ಲಿ. ಕೆಲಸ ಮಾಡುವುದು ಆಸ್ಟ್ರೇಲಿಯಾದಲ್ಲಿ. ಒಂದು ವರ್ಷ ಕೆಲಸ ಮಾಡಿ ಖರ್ಚು ಮಾಡದೆ ಹಣ ಉಳಿಸಿ ಇನ್ನೊಂದು ವರ್ಷ ರಜೆ ಹಾಕಿ ಲೋಕ ಸುತ್ತುತ್ತಾನೆ. ಆಸ್ಟ್ರೇಲಿಯಾದಿಂದ ಹಾಂಕಾಂಗ್‌ಗೆ ಹೋಗಿ, ಅಲ್ಲಿಂದ ಬಿಹಾರ ಸುತ್ತಿ, ಕಲಕತ್ತಾಗೆ ಬಂದು ಅಲ್ಲಿಂದ ಬಾಂಗ್ಲಾದೇಶದೊಳಕ್ಕೆ ನುಸುಳಿ ತ್ರಿಪುರಾದ ಗಡಿಯಲ್ಲಿ ಪುನಃ ಭಾರತದೊಳಕ್ಕೆ ಬಂದು ಬಸ್ಸು ಹತ್ತಿ ಶಿಲ್ಲಾಂಗಿಗೆ ಬಂದಿದ್ದ. ಈ ಊರಲ್ಲಿ ಐರಿಷ್ ಪಾದ್ರಿಗಳ ತುಂಬಾ ಗೋರಿಗಳಿವೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದ. ನಮ್ಮ ಜೊತೆ ಎರಡು ದಿನ ಪ್ರೀತಿಯಿಂದ ಇದ್ದು ಆಮೇಲೆ ಪುನಃ ನೇಪಾಳಕ್ಕೆ ಹೊರಟು ಹೋದ. ನೇಪಾಳದಿಂದ ಕಾಗದ ಬರೆದಿದ್ದ. ಅಲ್ಲಿ ಒಂದು ಹಳೆಯ ಸೈಕಲ್ಲು ಕೊಂಡು ಅದನ್ನು ಹತ್ತಿ ಭಾರತ ದಾಟಿ ಪಾಕಿಸ್ತಾನ, ಕಾಬೂಲ್, ಇರಾನ್‌ಗಳನ್ನು ಹಾದು ಈಗ ಟರ್ಕಿಯ ಬಳಿಯಿಂದ ಇನ್ನೊಂದು ಕಾಗದ ಬರೆದಿದ್ದಾನೆ.

`ಯಾಕೆ ಮಾರಾಯ ಇಷ್ಟೊಂದು ಸುತ್ತುತ್ತೀಯಾ?’ ಅಂತ ಕೇಳಿದ್ದೆ. ಸುಮ್ಮನೇ ಕಣ್ಣು ಮಿಟುಕಿಸಿದ್ದ. ನೋಡಿದರೆ ಆತನಿಗೆ ನನಗಿಂತ ಸಣ್ಣ ವಯಸ್ಸು. ಮದುವೆಯಾದ ಮೇಲೆ ಸುತ್ತುವುದನ್ನ ನಿಲ್ಲಿಸುತ್ತೇನೆ ಅಂತ ನನ್ನ ಮಡದಿಯನ್ನು ನೋಡಿ ಚೇಷ್ಟೆ ಮಾಡಿದ್ದ. ನಿಮ್ಮ ದೇಶದ ಕವಿ ಏಟ್ಸ್ ಗೊತ್ತಾ ಅಂತ ಕೇಳಿದ್ದೆ. ಗೊತ್ತು ಓದಿಲ್ಲ ಅಂತ ಹೇಳಿದ್ದ. ನನಗೆ ಕವನ ಬರೆಯುವುದು ಹೇಗೆ ಅಂತ ಹೇಳಿಕೊಡು ಅಂತ ಕೇಳಿದ್ದೆ. ತಮಾಷೆ ಮಾಡಬೇಡ ಅಂತ ಹೇಳಿದ್ದೆ. ನಾನು ನನ್ನ ಹೆಂಡತಿ ಇಬ್ಬರೂ ಸೇರಿ ನಾವು ಪ್ರೇಮಿಸಿದ್ದು ಮದುವೆಯಾಗಿದ್ದು ಎಲ್ಲವನ್ನೂ ಆತನಿಗೆ ಕತೆ ಹೇಳುವ ಹಾಗೆ ಹೇಳಿದ್ದೆವು. `ನನಗೆ ಆತ ತುಂಬಾ ಇಷ್ಟ ಆದ. ಸ್ಮಾರ್ಟ್ ಇದ್ದಾನೆ’ಅಂತ ಆಕೆ ನನ್ನ ಕಿವಿಯಲ್ಲಿ ಹೇಳಿದ್ದರು. ಅದನ್ನು ನಾನು ಅವನಿಗೆ ಹೇಳಿ ಅವನು ಕೆಂಪಗಾಗಿ ಬಿಟ್ಟಿದ್ದ.

ನಾವೆಲ್ಲಾ ಹೀಗೆಲ್ಲಾ ಸುತ್ತುವುದು ಯಾವಾಗ ? ನನ್ನ ಗೆಳೆಯನೊಬ್ಬ ಮೊನ್ನೆ ಬಾಬಾ ಬುಡನ್‌ಗಿರಿಗೆ ಹೋಗಬೇಕಿದ್ದವನು ಅಯ್ಯೋ ಅಲ್ಲಿ ಚಳಿ ಅಂತ ಹೋಗದೆ ಮಂಗಳೂರಿನಲ್ಲಿ ಮನೆಯಲ್ಲೇ ಉಳಿದುಬಿಟ್ಟಿದ್ದ.
ಯಾಕೋ ಈ ಸಲ ತುಂಬಾ ಜಾಸ್ತಿಯೇ ಬರೆದೆ. ನಿಲ್ಲಿಸುವೆ.

Saturday December 15, 2007

ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:04 pm

 sc00077b1e-1.jpgಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.

ನಿನ್ನೆ ಮೊನ್ನೆಯೆಲ್ಲಾ ಇಲ್ಲಿ  ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್  ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.

ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ. 

(more…)

Monday October 29, 2007

ಶನ್ಯಾಶಿ ಸಿಕ್ಕಿದಳು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:32 pm

 

ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರುshanyasi2.jpg. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು  ಆಕಾಶವನ್ನು  ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ  ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.

ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.shanyasi.jpg

ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.

ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.

ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.

ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.

ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.

Monday October 22, 2007

ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:17 pm

ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.ayesha1.jpg

ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.

ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ  ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.

 ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ. (more…)

Friday October 5, 2007

ಸಿಂಗರ್ ಮತ್ತು ಫಾಹಿಯಾನ್ ಯಾನೆ ಗಂಡಸರ ಕಷ್ಟಗಳು!

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:45 pm

 

faxian.jpg

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು  ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.

ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. (more…)

Wednesday September 26, 2007

ಕತೆ ಮತ್ತು ಮಹಾತ್ವಾಕಾಂಕ್ಷೆ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:47 pm

ಅಲ್ಲಿ ನಿಮ್ಮನ್ನೆಲ್ಲ ನೋಡಿ ತಿರುಗಿ ಬಂದು ಇಲ್ಲಿ ಷಿಲ್ಲಾಂಗ್ ಎಂಬ ನನ್ನ ಕನಸಿನ ಲೋಕದಲ್ಲಿ ಒಬ್ಬನೇ ಕುಳಿತು ಕೊಂಡಿದ್ದೇನೆ. ಹೂಬಿಟ್ಟಿದ್ದ ಮರಗಳಲ್ಲೆಲ್ಲಾ ಈಗ ಹಣ್ಣುಗಳು ತುಂಬಿಕೊಂಡಿವೆ. ಕಿತ್ತಳೆ ಮಾರುತ್ತಿದ್ದ ಹುಡುಗಿಯರೆಲ್ಲಾ ಈಗ ಎಂತ ಎಂತಹದೋ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕುಳಿತಿದ್ದಾರೆ. ಮಳೆಬಿಟ್ಟು ಮತ್ತೆ ಮಳೆ ಸುರಿಯುತ್ತಿದೆ. ಇಂದು ಸಂಜೆ ಮಳೆಯ ನಡುವೆ ದಾರಿ ಮಾಡಿಕೊಂಡು ಎಲ್ಲ ಕಡೆ ಸುತ್ತಾಡಿ ಹಲವು ಬಗೆಯ ಹಣ್ಣುಗಳನ್ನು ಕೊಂಡು ಒಂದೊಂದನ್ನೇ ತಿನ್ನುತ್ತಾ ಕುಳಿತೆ. ಒಂದು ಹಣ್ಣಿನ ಹೆಸರು ಮಾತ್ರ ಗೊತ್ತಾಯಿತು. ಅದು ‘ಪ್ಲಂ’ ಹಣ್ಣು.plum.jpg ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.

. ಇಲ್ಲಿ ನನಗೆ ಯಾರೂ ಇಲ್ಲ. ಇರುವುದು ನಿಮಗೆ ಪತ್ರ ಬರೆಯುವ ಖುಷಿ. ಇನ್ನೊಂದು ಎಲ್ಲಿ ಬೇಕೆಂದರಲ್ಲಿ ಎಗ್ಗಿಲ್ಲದೆ ಓಡಾಡುವ ಆನಂದ. ಇರುವ ಒಬ್ಬಳು ಹೆಂಡತಿಯನ್ನೂ ಯಾಕೋ ಕನ್ನಡ ನಾಡಿನಲ್ಲೇ ಬಿಟ್ಟು ಬಂದಿರುವೆ. ಬಂದು ಇಲ್ಲಿ ನೋಡಿದರೆ ಮೊದಲು ಚೆನ್ನಾಗಿ ಮಾತನಾಡುತ್ತಿದ್ದ ನಗುತ್ತಿದ್ದ ಹುಡುಗಿಯರೂ ಬಿಗುಮಾನದಿಂದ ಓಡಾಡುತ್ತಿದ್ದಾರೆ. ಯಾಕೋ ಒಂಟಿ ಗಂಡಸಿನ ಕುರಿತು ಈ ಊರಿನವರಿಗೆ ಸಲ್ಲದ ಅನುಮಾನ ಇರುವಂತಿದೆ. (more…)

Saturday September 22, 2007

ಒಂದು ಸ್ಟಾಕ್ ಹೋಂ ನೆನಪು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 12:10 am

 

ಈ ಹೊತ್ತು ಒಬ್ಬಳು ಸುಂದರಿಯ ಕುರಿತು ಯೋಚಿಸುತ್ತಾ ಕುಳಿತಿರುವೆ. ನಾಳೆ ಅವಳ ಹುಟ್ಟು ಹಬ್ಬ. ಹಾಗಾಗಿ ಸಲೀಸಾಗಿ ನಿಮಗೆ ಬರೆಯಲೂ ಆಗುತ್ತಿಲ್ಲ. ಒಂದು ಕವಿತೆ ಬರೆಯಲಾ ಅನಿಸುತ್ತಿದೆ. ಹೋಗಲಿ ಬಿಡಿ ಅದೂ ಬೇಡ. ಸುಮ್ಮನೇ ಬರೆಯುತ್ತಾ ಸಲೀಸಾಗುತ್ತಾ ಹೋಗುತ್ತೇನೆ.

ಆಕೆಯನ್ನು ನಾನೂ ಕಂಡದ್ದು ಎರಡೇ ಸಲ. ಅದೂ ಸ್ವೀಡನ್ ನ ಸ್ಟಾಕ್ ಹೋಂ ಎಂಬ ಮಹಾನಗರದಲ್ಲಿ . ಎರಡೂ ಬಾರಿಯೂ ಅವಳು ಎಡಕಣ್ಣಿನ ಕೆಳಗೆ ಬೆಳ್ಳಿಯ ಬಣ್ಣದಿಂದ ನಕ್ಷತ್ರಗಳನ್ನು ಬರೆದುಕೊಂಡಿದ್ದಳು. ಅವಳ ಮೂಗಲ್ಲಿ ನತ್ತು ಇದ್ದಿರಬಹುದ ಎಂದು ಈಗ ನನಗೆ ಅನ್ನಿಸುತ್ತಿದೆ. ಒಂದು ಸಲ ಆಕೆ ನನ್ನನ್ನು ‘ಲೋಟಸ್’ ಎಂಬ ಪಬ್ ನಲ್ಲಿ ಕೂರಿಸಿ ಮಾತನಾಡಿದಳು. ಇನ್ನೊಂದು ಸಲ ಸ್ಟಾಕ್ ಹೋಮ್ ನ ಅರಮನೆಯ ಪಕ್ಕದ ಬೀದಿಯೊಂದರಲ್ಲಿ ನಡೆಸಿಕೊಂಡು ಹೋಗಿ ಆಮೇಲೆ ರೈಲು ಹತ್ತಿಸಿ ಮರೆಯಾದಳು.ಆಕೆ ಆ ನಗರದಲ್ಲಿ ಒಂಟಿ ಹುಡುಗಿ. ಆಕೆಯ ತಂದೆ ಪೋಲೆಂಡ್ ನಿಂದ ವಸಲೆ ಬಂದ ಯಹೂದಿ. ತಾಯಿ ಸ್ಕಾಂಡಿನೇವಿಯನ್ ಸುಂದರಿ. ತಂದೆಯ ಕಡೆಯವರೆಲ್ಲಾ ಹಿಟ್ಲರನ ಮಾರಾಣಹೋಮದ ಬೆಂಕಿಯಲ್ಲಿ ಬೆಂದು ಹೋದವರು.ಈ ಅಂದದ ಸುಂದರಿ ಹುಡುಗಿ ನನ್ನ ಜೊತೆನ ಮಾತನಾಡುವಾಗ ಕಂಪಿಸುತ್ತಾ ಅವಳ ಕೈಯಲ್ಲಿದ್ದ ಕಾಫಿಯ ಬಟ್ಟಲು ಅಲುಗಿ ಮೈಯೆಲ್ಲಾ ಚೆಲ್ಲಿ ಆಮೇಲೆ ಸ್ಸಾರಿ  ಅಂತ ನಕ್ಕಿದ್ದಳು. ನಾನು ಆಕೆಯ ಕೈಯಲ್ಲಿ ಕನ್ನಡದ ನನ್ನ ಕತೆಯ ಪುಸ್ತಕವೊಂದನ್ನು ಕೊಟ್ಟು ‘ಪ್ರೀತಿಯಿಂದ’ ಅಂತ ಸಹಿ ಮಾಡಿ ಕಂಪಿಸುತ್ತಾ ಆ ಮಹಾ ಆಕಾಶದ ಕೆಳಗೆ ಒಬ್ಬನೇ ಕಣ್ಣು ತುಂಬಿಕೊಂಡು ಬಂದಿದ್ದೆ.ಯಾಕೋಈಗ ಅವಳ ನೆನಪಾಗುತ್ತಿದೆ. ಸುಮ್ಮನೇ ಕುಳಿತು ರಿಲ್ಕ್ ಕವಿಯನ್ನು ಅನುವಾದಿಸುತ್ತಿರುವೆ.  (more…)

Monday September 10, 2007

ದೇವದೂತರ ಆಡುಭಾಷೆ!

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:09 pm

ಮೇಘಾಲಯ ಎಂಬ ಈ ಪುಟ್ಟ ರಾಜ್ಯದ ರಾಜಕೀಯ ಇಡೀ-ವಾರ ನನ್ನ ತಲೆಯನ್ನು ತಿಂದು ಹಾಕಿಬಿಟ್ಟಿತು. ಮೂವರು ಮಂತ್ರಿಗಳು ಹೇಳದೆ ಕೇಳದೆ ಮುಖ್ಯಮಂತ್ರಿಯನ್ನು ಬಿಟ್ಟು ಎದುರುಪಾರ್ಟಿಯನ್ನು ಸೇರಿಕೊಂಡು ಬಿಟ್ಟಿದ್ದಾರೆ. ಎಪ್ಪತ್ತೇಳು ವರ್ಷದ ಮುಖ್ಯಮಂತ್ರಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದಾರೆ. ನಾನು ‘ಏನು ಕತೆ ನಿಮ್ಮ ಪರಿಸ್ಥಿತಿ ವೀಕ್ ಆಗಿ ಬಿಟ್ಟಿದೆಯಲ್ಲ’ ಅಂತ ಕೆಣಕಿದೆ. ಅವರು ತಟ್ಟನೆ ಶರಟಿನ ತೋಳು ಮಡಚಿ ತೋಳು ಬಲ ತೋರಿಸುತ್ತಾ ‘ಏನು ವೀಕ್ ಆಗಿದ್ದೇನಾ ನೋಡು’ ಅಂತ ನನ್ನ ಹೊಟ್ಟೆಗೆ ಪಂಚ್ ಮಾಡಲು ಬಂದರು. ನಾನು ನಗುತ್ತಾ ಬದಿಗೆ ಸೇರಿದೆ.meghalaya-map.gifಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ.  ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ  ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ. (more…)

Wednesday September 5, 2007

ಟರ್ಕಿ ಕೋಳಿಗಳ ನೆನಪು

male-turkey.jpgಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು.  ಕೆಲವರು  ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ  ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ.  (more…)

Monday August 27, 2007

ಕಾಲಪ್ರವಾಹ ಮತ್ತು ಕಡಲಹಂದಿ

 

kadalahandhi.jpg

ಏನು ಬರೆಯಲಿ? ಈ ವಾರವೆಲ್ಲಾ ಬೇರೆ ಏನೂ ಮಾಡಲು ಹೋಗದೆ ಬರೆಯ ಆಫೀಸಿನ ಕೆಲಸಗಳನ್ನು ಮಾಡಿಕೊಂಡು ಸುಮ್ಮನೆ ಕುಳಿತಿದ್ದೆ. ಈಶಾನ್ಯ-ಭಾರತ ಪ್ರವಾಹದಲ್ಲಿ ಮುಳುಗಿ ಹೋಗಿ ರೈಲುಗಳೂ ಓಡಾಡದೆ ಊರಿಂದ ಪತ್ರಗಳೂ ಬರಲಿಲ್ಲ. ನಾಲ್ಕೈದಾರು ವಾರಗಳಿಂದ ‘ಪತ್ರಿಕೆ’ಯೂ ಬಂದಿಲ್ಲ. ಊರಿನಿಂದ ಉಮ್ಮ ಫೋನ್ ಮಾಡಿ ಅವಳ ತಲೆನೋವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ ಅಂತ ಹೇಳಿದಳು. ತಂಗಿಫೋನ್ ಮಾಡಿ ಅಷ್ಟುದೂರ ಊರಿನಲ್ಲಿ ಹಾಗೆಲ್ಲಾ ನಿರ್ಗತಿಕನಂತೆ ಅಲೆದಾಡಬೇಡ. ನಮಗೆ ಇಲ್ಲಿ ಹೆದರಿಕೆ ಆಗುತ್ತಿದೆ ಅನ್ನುತ್ತಿದ್ದಳು.

 ನನಗೆ ಯಾಕೋ ನಾನು ಮಂಗಳೂರಿನ ಬೀದಿಗಳಲ್ಲಿ ಉರಿಬಿಸಿಲಿನಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದುದು ನೆನಪಾಗುತ್ತಿತ್ತು. ನಾನು ಮಂಗಳೂರಿನಲ್ಲೂ ತುಂಬಾ ಅಲೆದಾಡುತ್ತಿದ್ದೆ. (more…)

Wednesday August 22, 2007

ನಕ್ಸಲ್ ಬಾರಿ ಮತ್ತು ದೂಲಾಬಾರಿ

 nepal2.jpg

ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವೆ. ಹಗಲೆಲ್ಲ ನಿದ್ದೆ ಹೊಡೆದೆ. ಈ ಬರೆಯವುದು ಮತ್ತು ಎಲ್ಲವನ್ನು ವಿವರಿಸುತ್ತಾ ಇರುವುದು ಎಂತಹ ಬೇಜಾರಿನ ಸಂಗತಿ ಅಂತ ಅನ್ನಿಸಿ ಸುಮ್ಮನೇ ಮತ್ತೆ ನಿದ್ದೆ ಹೋಗುತ್ತಿದ್ದೆ. ಹೋಗಲಿ ಬಿಡಿ. ಸುಮ್ಮನೆ ಬರೆ ನನ್ನ ಕುರಿತೇ ಕೊರೆಯದೆ ಬೇರೆ ಏನಾದರೂ ಹೇಳುವೆ.

 ಈ Rainer Maria Rilke ಎಂಬ ಜರ್ಮನಿಯ ಮಹಾಕವಿ Rodin ಎಂಬ ಫ್ರೆಂಚ್ ಮಹಾಶಿಲ್ಪಿಯ ಕಾರ್ಯದರ್ಶಿಯಾಗಿದ್ದ. ಒಂದು ದಿನ ಏನೋ ಸಂಕಟದಲ್ಲಿ ಏನೋ ಯೋಚಿಸುತ್ತಾ ನದಿಯೊಂದರ ದಂಡೆಯ ಮೇಲೆ ಶತಪಥ ಹಾಕುತ್ತಿದ್ದ. ಇದ್ದಕ್ಕಿದ್ದಂತೆ ಅದೇನು ಆಯಿತೊ ಹದುಳದಲ್ಲಿ ಹುಣ್ಣಿಮೆ ಮುಡಿದಂತೆ ಆತನ ತಳೆಯೊಳಗೆ ಕಾವ್ಯ ಗರಿಗೆದರಿತು. ಒಂದೇ ಏಟಿಗೆ ನುರಾರು ಸಾಲುಗಳ ಹಲವಾರು Elegy ಗಳನ್ನು ಬರೆದ. ಜರ್ಮನ್ ಕಾವ್ಯದ ಇತಿಹಾಸದಲ್ಲಿ ಇಲ್ಲಿಯವರೆಗೆ ಅಂತಹ ಕಾವ್ಯಸ್ಫೋಟ ಇನ್ನೊಮ್ಮೆ ಆಗಿಲ್ಲವಂತೆ. ಕ್ಷಮಿಸಿ, ನಾನು ಯಾಕೋ ಮಹಾಕವಿಗಳನ್ನು ತಮಾಷೆ ಮಾಡುತ್ತಿರುವೆ ಅನ್ನಿಸುತ್ತಿದೆ.

ಕಳೆದ ವಾರ ನಾನು ಬಸ್ಸಿನಲ್ಲಿ ಕುಳಿತು ನೇಪಾಳಕ್ಕೆ ಹೋಗಿ ಬಂದ ದಾರಿಯ ಕುರಿತು ಬರೆಯುವೆ. (more…)

Friday August 17, 2007

ಸುಂದರಿಯೂ ಕುರೂಪಿಯೂ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:02 pm

 shillong.jpgಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ಮೈಸವರುತ್ತಾ, ಜೋಡಿಸುತ್ತಾ, ಚಂದ ನೋಡುತ್ತಾ ಬಹಳ ದಿನಗಳ ಬಳಿಕ ನಿಮಗೆ ಬರೆಯುತ್ತಿರುವೆ. ಯಾಕೋ ಅಹ್ಲಾದವೆನಿಸುತ್ತದೆ. ಹದುಳದಲ್ಲಿ ಹುಣ್ಣಿಮೆ ಮೂಡಿದಂತೆ. ಬೇಂದ್ರೆಯವರಿಗೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿ `ಬಿಸಿಲ ಹಣ್ಣನುಂಡು ಚಂದ್ರನ ಜೇನು ಮದ್ದಂತೆ ‘ಅನಿಸಿತ್ತಂತೆ. ನಾನು ಈ ದಿನ ಸಂಜೆ ನಾಲ್ಕು ಗಂಟೆಗೇ ಚಂದ್ರನ ಬೆಳಿನಲ್ಲಿ ನನ್ನ ನೆರಳನ್ನು ಕಂಡು ಚಕಿತಗೊಂಡೆ.ಇಲ್ಲಿ ಈಗಲೇ ಚಳಿಗಾಲ ಮೊದಲಾಗಿ ಮಧ್ಯಾಹ್ನದ ಚಂದ್ರನಂತಹ ಬಿಸಿಲಲ್ಲಿ ಬೆಚ್ಚಗೆ sweater ಹಾಕಿಕೊಂಡು ಓಡಾಡುತ್ತಿರುವೆ. ಈಗಂತೂ ಈ ಚಳಿ ಬಿಸಿಲಲ್ಲಿ ಈ ಊರು ಎಷ್ಟು ಚಂದ ಎಷ್ಟು ಚಂದ ಎಂದು ಕಣ್ಣಲ್ಲೇ ಎಲ್ಲವನ್ನೂ ತಿಂದುಕೊಂಡು ನಡೆದಾಡುತ್ತಿರುವೆ. (more…)

Sunday August 5, 2007

ಷಿಲ್ಲಾಂಗಿನ ನಡೆಯುವ ಸುಖ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:11 pm

 

shillong1.gifಈವಾರ ನಿಮಗೆ ಏನು ಕತೆ ಹೇಳಲಿ? ಯಾವತ್ತೂ ಇಲ್ಲದ ಹಾಗೆ ಈ ಸಂಜೆ ಮನೆಗೆ ಬಂದವನೇ ಸಂಕಟದಲ್ಲಿ ನಿದ್ದೆ ಹೋದೆ. ನಡುನಡುವೆ  ಕಣ್ಣು ಬಿಟ್ಟರೆ ಕಿಟಕಿಯ ಹೊರಗೆ ಸಂಜೆ ಕೆಂಪು ಬೆಳಕಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಹೆಂಗಸರು ಎಲೆ ಅಡಿಕೆ ಜಗಿಯುತ್ತಾ ಬಯಲಲ್ಲಿ ಕಾಲು ನೀಡಿಕೊಂಡು ಮಾತನಾಡುತ್ತಿದ್ದರು. ನಾನು ಹಠ ಹಿಡಿದು ನಿದ್ದೆ ಹೋಗಲು ನೋಡುತ್ತಿದ್ದೆ. ಯಾಕೋ ಕೈಕಾಲುಗಳಲ್ಲೆಲ್ಲಾ ಸಂಕಟ. ಬೆಂಗಳೂರಿನ, ಗಾಂಧಿ ಬಜಾರಿನ ಸಂಜೆ, ಮಾವಿನ ಹಣ್ಣು, ಕೊತ್ತಂಬರಿ ಸೊಪ್ಪು, ಮಲ್ಲಿಗೆ ಹೂವಿನ ಪರಿಮಳ ಏನೇನೆಲ್ಲಾ ಕನಸು ಬೀಳುತ್ತಿತ್ತು. ಸುಮ್ಮನೇ ಎದ್ದು ಕೂತೆ. ಮನೆ ಎಷ್ಟು ದೂರ ಅನಿಸುತ್ತಿತ್ತು. ಎಷ್ಟು ದೂರ ಅಂದರೂ ಯಾರಿಗೂ ಗೊತ್ತಾಗುವುದಿಲ್ಲ. ಅಸ್ಸಾಮಿನಲ್ಲಿ ರೈಲು ಹಳಿಗಳನ್ನು ನದಿಯ ಮೇಲಿನ ಸೇತುವೆಗಳನ್ನು ಬಾಂಬ್ ಹಾಕಿ ಚುರುಚೂರು ಮಾಡಿದ್ದಾರೆ. ನನ್ನ ಪಕ್ಕದ ಮನೆಯ ಬಂಗಾಲಿ ಯುವಕನೊಬ್ಬನ ತಂದೆ ನಿನ್ನೆ ರಾತ್ರಿ ಕಲ್ಕತ್ತಾದ ಹತ್ತಿರ ಹಳ್ಳಿಯೊಂದರಲ್ಲಿ ತೀರಿಹೋದರು. ಆತನಿಗೆ ತಂದೆಯನ್ನು ನೋಡಬೇಕೆಂದರೂ ಹೋಗಲಾಗಲಿಲ್ಲ. ಸುಮ್ಮನೆ ಕಣ್ಣೀರು ತುಂಬಿಕೊಂಡು ಕೂತಿದ್ದ. ಆತನ ಹಂಡತಿ ಅಳುತ್ತಿದ್ದಳು.

(more…)

Wednesday August 1, 2007

ಉಮಿಯಾಮ್ ಎಂಬ ನಿಂತ ನದಿ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:48 pm

ನಿಮ್ಮ ಪತ್ರವಂತೂ ಬರಲೇ ಇಲ್ಲ. ಆದರೂ ನಿಮಗೆ ಬರೆಯುತ್ತಿರುವೆ ಯಾಕೆ ಗೊತ್ತಿಲ್ಲ. ಹೇಗಿತ್ತು ನಿಮ್ಮ ಹುಟ್ಟು ಹಬ್ಬ? ಇಲ್ಲಿ ಈಗ ಹೂ ಅರಳುವ ಕಾಲ ಶುರವಾಗಿದೆ. ಬೋಳುಮರಗಳ ತುಂಬ ಹೂ. ಬೇಲಿಯಲ್ಲಿ ಹೂ, ಹುಲ್ಲಿನ ದಳಗಳಲ್ಲಿ ಹೂ. ಇನ್ನು ಮುಂದೆ ಸೆಪ್ಟೆಂಬರ್‌ವರೆಗೆ ಒಂದಿಲ್ಲೊಂದು ಹೂಗಳು ಅರಳುತ್ತಲೇ ಇರುತ್ತದೆ. ಈವತ್ತು ಸಂಜೆ ಇಡೀ ದಿನ ಮೋಡಕವಿದು ಕೊಂಚ ಹೊತ್ತು ಸೂರ್ಯನ ಬೆಳಕಿತ್ತು. ನಸು ಬೆಳಕಲ್ಲಿ ಬೀಸುವ ಗಾಳಿಗೆ ಪ್ಲಂ ಮರಗಳ ತುದಿಯಲ್ಲಿ ಚೆರ್ರಿಗಿಡಗಳ ತುದಿಯಲ್ಲಿ ಬೆಳ್ಳಗೆ ಕೆಂಪಗೆ ಚಿಟ್ಟೆಗಳಂತೆ ಹಾರುವ ಹೂವಿನ ದಳಗಳು. ಹೂವೋ ಚಿಟ್ಟೆಗಳೋ ಗೊತ್ತಾಗದೆ ನೋಡುತ್ತಲೇ ಇದ್ದೆ. ಕಳೆದವಾರ ನಾವೂ ಇಲ್ಲಿ ಒಂದು ಹುಟ್ಟು ಹಬ್ಬ ಆಚರಿಸಿದೆವು. ಯಾರದ್ದು ಎಂದು ಹೇಳುವುದಿಲ್ಲ.umiam.jpg

ನಾನು, ನನ್ನ ಹೆಂಡತಿ  ಮೋಳಿ, ಮತ್ತೊಬ್ಬಳು ಜಾಣೆಯಾದ ಬೆಂಗಾಲಿ ಹುಡುಗಿ ಮತ್ತು ನಡು ವಯಸ್ಸಿನ ರಸಿಕನಾದ ಕಾವ್ಯ ಮತ್ತು ಸಂಗೀತವನ್ನು ಪ್ರೇಮಿಸುವ ಸರ್ದಾರ್ಜಿ. ನಾವು ನಾಲ್ಕೂ ಜನ ಸರ್ದಾರ್ಜಿಯ ಪುಟ್ಟಕಾರಿನಲ್ಲಿ ಬೆಟ್ಟ ಸಾಲುಗಳನ್ನು ಇಳಿಯುತ್ತಾ ನಡುಮಧ್ಯಾಹ್ನದ ಹೊತ್ತು ಉಮಿಯಾಮ್ ಎಂಬ ನದಿಯ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕುಳಿತಿದ್ದೆವು. ಸರ್ದಾರ್ಜಿ ಜಸ್‌ಬೀರ್ mouth organ ನಲ್ಲಿ ಸಂಜೆಯ ರಾಗವೊಂದನ್ನು ನುಡಿಸುತ್ತಿದ್ದ. ಬೆಂಗಾಲಿ ಹುಡುಗಿ ನದಿಯೊಳಗೆ ಬಿದ್ದು ಹೋಗುವೆ ಎಂದು ನಮ್ಮನ್ನು ಹೆದರಿಸುತ್ತಿದ್ದಳು. ಮೋಳಿ ನದಿಯ ತೀರಕ್ಕೆ ಬರುವ ಹಕ್ಕಿಗಳನ್ನೂ ಕಾಗೆಗಳನ್ನೂ ಮಾತನಾಡಿಸುತ್ತಾ ಕುಳಿತಿದ್ದಳು. ನದಿಯ ನೀರಿಗೆ ಅಣೆಕಟ್ಟು ಕಟ್ಟಿ ನದಿ ದೊಡ್ಡ ದೊಡ್ಡ ಗುಡ್ಡಗಳನ್ನು ಮುಳುಗಿಸಿ ಸರೋವರದಂತೆ ನಿಂತಿತ್ತು.  ಹಳೆಯ ರಸ್ತೆಗಳು, ಹಳ್ಳಿಗಳು, ಕಾಡು ಎಲ್ಲವೂ ನೀರಲ್ಲಿ ಮುಳುಗಿತ್ತು. ನನಗಂತೂ ಸಿಕ್ಕಾಪಟ್ಟೆ ಹಸಿವಾಗುತ್ತಿತ್ತು. ಈ ಷಿಲ್ಲಾಂಗ್ ಒಂದು ಕಾಲದಲ್ಲಿ ರಸಿಕರ, ಸಂಗೀತ ಪ್ರೇಮಿಗಳ ಊರಾಗಿತ್ತು. ರವೀಂದ್ರನಾಥ ಠಾಗೂರ್ ಎರಡು ಕಾದಂಬರಿಗಳನ್ನು ಈ ಊರಲ್ಲಿ ಕುಳಿತು ಬರೆದಿದ್ದರು. ಈಗ ಎಲ್ಲವೂ ಮುಳುಗಿ ಹೋದ ಹಡಗಿನಂತೆ ಆಗಿದೆ ಎಂದು ವಾಪಸ್ಸು ಬರುವಾಗ ಜಸ್‌ಬೀರ್ ಅನ್ನುತ್ತಿದ್ದರು. ಈ ಜಸ್‌ಬೀರ್ ತುಂಬ ತಮಾಷೆಯ ಪ್ರೀತಿಯ ಮನುಷ್ಯ ಒಮ್ಮೆ ಶಿಲ್ಲಾಂಗ್‌ನಿಂದ ತನ್ನ ಊರಾದ ಪಂಜಾಬಿಗೆ ಒಂದು ಮದುವೆಗೆ ಹೋಗಿದ್ದರಂತೆ. ಮದುವೆಯಲ್ಲಾ ಮುಗಿದ ಮೇಲೆ ಶಿಲ್ಲಾಂಗ್ ನ ಶೈಲಿಯಂತೆ ಮುದ್ದಾದ ಪಂಜಾಬಿ ಹೆಂಗಸೊಬ್ಬಳನ್ನು ನೃತ್ಯ ಮಾಡಲು ಕರೆದರಂತೆ. ಆ ಹೆಂಗಸು ರೇಗಿ ‘ನಿನ್ನ ಅಮ್ಮನ ಕೈ ಹಿಡಿದು dance ಮಾಡು’ ಎಂದು ಬೈದಳಂತೆ. ಆ ಅವಮಾನ ಜಸ್‌ಬೀರ್‌ಗೆ ಇನ್ನೂ ಹೋಗಿಲ್ಲ. ಅದಕ್ಕೇ ಆತನಿಗೆ ಬಯಲು ಭೂಮಿಯ plain ಹೆಂಗಸು ಇಷ್ಟವಾಗುವುದೇ ಇಲ್ಲ. ಗುಡ್ಡಗಾಡಿನ, ನಿಸ್ಸಂಕೋಚದ, ಕಪಟವಿಲ್ಲದ ಮನುಷ್ಯರೇ ಚಂದ ಅಂತ ಅನ್ನುತ್ತಲೇ ಇರುತ್ತಾರೆ. ಈಗ ಇಲ್ಲಿ ಕಿಟಕಿಯಿಂದ ಅರ್ಧಚಂದ್ರ ಮತ್ತು ಅಸಂಖ್ಯಾತ ನಕ್ಷತ್ರಗಳು ಕಾಣಿಸುತ್ತಿವೆ.ಈಗ ನನ್ನ ಬಳಿ ಭೂತಾನದಿಂದ ಬಂದ ಕೇಸರ್ ಕಸ್ತೂರಿ ಎಂಬ ಪೇಯವಿದೆ. cheers! ಇನ್ನೂ ಗಟ್ಟಿ ಮುಟ್ಟಾಗಿ ಇರಿ.

Thursday July 26, 2007

ಷಿಲ್ಲಾಂಗ್ ನಿಂದ ಒಂದು pleasing ಪತ್ರ

ಒಂದು ಸುಂದರವಾದ ಉದ್ದವಾದ  ಹಗಲನ್ನು ಸುತ್ತಿ ಮುಗಿಸಿ ಬಂದು ನಿಮಗೆ ಬರೆಯಲು ಕುಳಿತಿದ್ದೇನೆ. ಯಾವ ಹಂಗೂ ಇಲ್ಲದ ಯಾವ ಗ್ರಂಥ, ವಿಚಾರ, ವಿಮರ್ಶೆ, ಚಿಂತನೆ ಏನೂ ಇಲ್ಲದ ಹಗಲು. ಸುಮ್ಮನೆ ಆಕಾಶವನ್ನೇ ನೋಡುತ್ತಿದ್ದೆ. ನಾನು ಎಂದೂ ನೋಡಿರದ ಕಡುನೀಲಿ ಆಕಾಶ. ದೂರದಿಂದ ದಾರಿ ಕೇಳಿಕೊಂಡು ತುಂಬಾ ದೂರದ ನೆಂಟರಂತೆ ಸಂಬಂಧ ಹುಡುಕಿಕೊಂಡು ಬರುತ್ತಿರುವ ಮೋಡಗಳು ಅಲ್ಲೇ ಸಂಕೋಚದಿಂದ ನಿಂತಿವೆ. ಅದರ ಹಿಂದಿರುವ ಮೋಡಗಳ ಗುಂಪು ತಡೆಹಿಡಿಯಲಾಗದೆ ಅಲ್ಲೇ ನಿಂತುಕೊಂಡಲ್ಲೇ ಮಳೆ ಸುರಿಸುತ್ತಿವೆ. ದೂರದಲ್ಲೆಲ್ಲೋ ಸುರಿಯುತ್ತಿರುವ ಮಳೆಯ ಗಾಳಿ ತಣ್ಣಗೆ ಈ ಪಟ್ಟಣವನ್ನು ಹಾದು ಹೋಗುತ್ತಿದೆ.khasi30_m.jpg ನಾನು ಸಣ್ಣಗೆ ಬೆವರಿಕೊಂಡು ಒಂದು ಸಣ್ಣ ಹೋಟೇಲೊಳಕ್ಕೆ ಹೊಕ್ಕು ಕುಳಿತೆ. ಈ ಊರಲ್ಲಿ ಈ ತರಹದ ಸಣ್ಣ ಹೋಟೆಲುಗಳೆಂದರೆ ಪುಟ್ಟಪುಟ್ಟ ತರುಣಿಯರು ನಡೆಸುವ ಹೋಟೆಲ್ಲು. ಹಾಲಿಲ್ಲದ ಕಪ್ಪು ಚಹಾಕ್ಕೆ ‘ಸಾಸೋ’ ಎನ್ನುತ್ತಾರೆ ಮತ್ತೆ ‘ಪತಾರೋ’ ಎಂಬ ಅಕ್ಕಿಯಿಂದ ಅರೆದು ಮಾಡಿದ ಓಡು ದೋಸೆಯಂತಹ ತಿಂಡಿ. ಅದರ ಜೊತೆ ಆಡಿನ ಕರುಳಿನ ಪಲ್ಯ. ಯಾವುದಕ್ಕೂ ಉಪ್ಪು, ಹುಳಿ, ಖಾರ, ಏನೂ ಇಲ್ಲ. ಬೇಕಾದರೆ ಉಪ್ಪನ್ನು ನೆಕ್ಕಿ ಹಸಿ ಮೆಣಸನ್ನು ಅದರ ಜೊತೆ ಕಚ್ಚಿ ತಿನ್ನಬಹುದು. ನಾನು ಒಂದೊಂದೇ ತಿನಿಸಿನ ಹೆಸರು ಕೇಳಿಕೊಂಡು ತಿನ್ನುತ್ತ ಹೋಟೆಲ್ಲಿಗೆ ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆ. ಈ ತರಹ ನನ್ನಂತಹ ಹೊರಗಿನವನು ಇಂತಹ ಹೋಟೆಲ್ಲುಗಳಲ್ಲಿ ಒಬ್ಬನೇ ಕುಳಿತುಕೊಳ್ಳುವುದು ಕೊಂಚ ಅಪಾಯದ ಕೆಲಸ. ಆದರೂ ಕುಳಿತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಎಲ್ಲರನ್ನೂ ನೋಡುತ್ತಿದ್ದೆ. ಹೋಟೆಲ್ಲಿನ ಒಬ್ಬಳು ತರುಣಿ ಆಗ್ಗಿಂದಾಗ್ಗೆ ಸಿಕ್ಕಾಪಟ್ಟೆ ಮೈಯನ್ನೆಲ್ಲಾ ಸಿಕ್ಕಿದಲ್ಲೆಲ್ಲಾ ಕೆರೆದು ಕೊಳ್ಳುತ್ತಿದ್ದಳು. ನಾನು ತುಂಬಾ ಹೊತ್ತು ನೋಡುತ್ತಿದ್ದವನು ಆಮೇಲೆ ತಡೆಯಲಾರದೆ ಏನಾಯಿತು ಅಂತ ಕೇಳಿದೆ. ಆಕೆ ಪಕ್ಕನೆ ನಾಚಿಕೊಂಡವಳು. ಆಮೇಲೆ ಹಾ ಹೋ ಹೀ ಹೀ ಅಂತೆಲ್ಲಾ ಹೇಳತೊಡಗಿದವಳು. ಕೊನೆಗೂ ಕಾರಣ ಹೇಳಲಾಗದೆ ತನ್ನ ಗೆಳತಿಯರ ಕಿವಿಗೆ ನನ್ನ ಪ್ರಶ್ನೆಯನ್ನು ದಾಟಿಸಿಬಿಟ್ಟಳೂ. ಕೊನೆಗೆ ಎಲ್ಲರೂ ಗೊಳ್ಳೆಂದು ನಗಲು ಶುರುಮಾಡಿದರು. (more…)

Monday July 23, 2007

ಹೂವಿನ ಹೆಸರಿನ ಹುಡುಗಿ [ಷಿಲ್ಲಾಂಗ್ ಪತ್ರ ೪]

ಮನಸಲ್ಲಿ ಆಗುತ್ತಿರುವುದನ್ನೆಲ್ಲಾ ನಿಮಗೆ ಹೇಗೆ ಬರೆದು ತಿಳಿಸಲಿ? ನನ್ನ ಬಾಲ್ಯಕಾಲದ ಬೆಳದಿಂಗಳಿನಂತಹ ಬಿಸಿಲು ಇಲ್ಲಿ ಈಗ ಮರುಕಳಿಸುತ್ತಿದ್ದೆ. ಬಿಸಲಿಗೆ ಮತ್ತು ಬೀಸುವ ಗಾಳಿಗೆ ಇಷ್ಟು ಸುಖವಿದೆ ಎಂದು ಈಗ ಮತ್ತೆ ಗೊತ್ತಾಗುತ್ತಿದೆ270px-shillong_golf_course2.jpgಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ ಬೆಳಕು ಎಲೆಗಳ ಮೇಲೆ ಕೆರೆಯ ನೀರಿನ ಮೇಲೆ ತನ್ನ ಎಲ್ಲಾ ಪ್ರೀತಿಯನ್ನು ಸುರಿಯುತ್ತಿತ್ತು. ಯಾವ ಕೇಡೂ ಇಲ್ಲದ ಸ್ವಚ್ಛಗಾಳಿ ಪುಪ್ಪುಸದೊಳಕ್ಕೆ ತುಂಬಿಕೊಳ್ಳುತ್ತಿತ್ತು. ಆಮೇಲೆ ಮನೆಗೆ ಬಂದು ಏನೋ ಓದುತ್ತಾ ಕುಳಿತ್ತಿದ್ದೆ. ಸರೀ ಮೂರೂವರೆಯ ಹೊತ್ತಿಗೆ ಭೂಮಿ ಒಮ್ಮೆಗೆ ಸಣ್ಣಗೆ ಅಲುಗಿತು. ಯಾರೋ ಹಿಂದಿನಿಂದ ಮೆಲ್ಲಗೆ ಮೊಣಕೈಯಿಂದ ಅಲುಗಿಸಿದಂತೆ ಸಣ್ಣಗೆ ಭೂಕಂಪವಾಯಿತು. ಗಾಳಿ ಹಾಗೇ ಬೀಸುತ್ತಿತ್ತು. ಮಕ್ಕಳು ಆಡುತ್ತಿದ್ದರು. ಯಾಕೋ ದುಗುಡ ತುಂಬಿಕೊಂಡು ಬಿಟ್ಟಿತು.

ಯಾಕೆ ಗೊತ್ತಿಲ್ಲ. ನನ್ನನ್ನು ಎಲ್ಲದರಿಂದ ಎಲ್ಲರಿಂದ ಕಳಚಿಬಿಡುವ ಈ ದುಗುಡಕ್ಕೆ ಯಾವ ಮದ್ದಿದೆ ಹೇಳುತ್ತೀರಾ? (more…)

Monday July 16, 2007

ಷಿಲ್ಲಾಂಗ್ ಪತ್ರ-೩

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:20 pm

ಮಗುವೊಂದರ ಜೊತೆ

ಪ್ರೀತಿಯ ಲಂಕೇಶ್‌ರಿಗ,dsc_0089.jpg

ಮರಳಿ ಶಿಲ್ಲಾಂಗ್ ತಲುಪುವ ತನಕ ನಿಮಗೆ ಬರೆಯಲೇಬಾರದು ಅಂದುಕೊಂಡಿದ್ದೆ. ಆದರೆ ಯಾಕೋ ಈಗ ಈ ರಾತ್ರಿಯಲ್ಲಿ ಆಗುಂಬೆ ಘಾಟಿಯ ಕೆಳಗಿನ ಸೀತಾನದಿಯ ತಟದ ಈ ಜಾಗದಲ್ಲಿ ಕುಳಿತು ನಿಮಗೆ ಬರೆಯಬೇಕು ಅನ್ನಿಸುತ್ತದೆ. ಕೊಡಗು, ಬೆಂಗಳೂರು, ಮೈಸೂರು ಕೇರಳದ ವಯನಾಡು ಮಂಗಳೂರು ಎಲ್ಲ ಕಡೆ ಬಿಸಿಲಲ್ಲಿ ನಾಯಿ ಅಲೆದಂತೆ ಅಲೆದು ಈಗ ಮೂರು ನಾಲ್ಕುದಿನದಿಂದ ಎಲ್ಲೂ ಹೋಗದೆ ಏನೂ ಮಾಡದೆ ಇಲ್ಲಿ ಸುಮ್ಮನೆ ಕುಳಿತಿದ್ದೇನೆ. ಈ ಸೀತಾನದಿ ತಣ್ಣಗೆ, ಕಾಡೊಳಗೆ ಸದ್ದಿಲ್ಲದೆ ಮಡುಗಟ್ಟಿಕೊಂಡು ಕಪ್ಪಗೆ ಹರಿಯುತ್ತಿದೆ. ಸಂಜೆಯ ಹೊತ್ತು ಎಲ್ಲಿಗೋ ಹೋಗಿ ಸೇರುತ್ತಿರುವ ಬೆಳ್ಳಕ್ಕಿಗಳ ಹಿಂಡನ್ನು ಕತ್ತಿನ ತನಕ ನೀರಲ್ಲಿ ಮುಳುಗಿಕೊಂಡು ನಿಟ್ಟಿಸಿ ನೋಡುತ್ತಿರುವೆ. ನಿನ್ನೆ ಸಂಜೆ ಹೀಗೆ ಮುಳುಗಿಕೊಂಡಿರುವಾಗ ನವಿಲೊಂದು ನದಿಯನ್ನು ಹಾರಿಕೊಂಡು ದಾಟಿ ಕಾಡಿನೊಳಗೆ ಮಾಯವಾಯಿತು. ಆನಂತರ ತುಂಬಾ ಹೊತ್ತು ನವಿಲುಗಳು ಕೇಕೆ ಹಾಕುವ ಸದ್ದು ಕಾಡೊಳಗಿಂದ ಕೇಳಿಸುತ್ತಲೇ ಇತ್ತು. ಕಾಡೊಳಗೆ ಹೊಕ್ಕು ನವಿಲುಗಳು ಕುಣಿಯುವುದ ನೋಡಬೇಕು ಅನ್ನಿಸಲೇ ಇಲ್ಲ. 

                 ಯಾಕೋ ನನ್ನೊಳಗೇ ನಾನು ಹೀಗೆ ಬಲವಂತವಾಗಿ ಗಡಿಗಳನ್ನು ಹಾಕಿಕೊಂಡು ಸುಮ್ಮನೆ ಅದುಮಿಕೊಂಡು ಕುಳಿತಿರುವೆ. ಮನುಷ್ಯರು ಕಡಿಮೆ ಇರುವ, ಬರಿಯ ನದಿಯೊಂದು ಹರಿಯುವ ನೆಪದಿಂದ ಉಂಟಾಗಿರುವ ಈ ಜಾಗದಲ್ಲಿ ಮಗುವೊಂದರ ಜೊತೆ ಆಟವಾಡುತ್ತಾ ಕುಳಿತಿರುವೆ. ಈವತ್ತು ಸಂಜೆ ಮಗುವೂ ನಮ್ಮ ಜೊತೆ ನದಿಯಲ್ಲಿ ಆಟವಾಡಲು ಬಂದಿತ್ತು. (more…)

Saturday July 14, 2007

ಷಿಲ್ಲಾಂಗ್ ಪತ್ರ-೨: ತುರಾ ಎಂಬ ಊರು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 12:28 am

 meghalaya-map.gif

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಹೊರಗೆ ಪೂರ್ತಿ ಚಂದಿರನ ಬೆಳಕು. ಮನಸಲ್ಲಿ ಏನೂ ಇಟ್ಟುಕೊಳ್ಳದೆ ನಿಮಗೆ ಬರೆಯುತ್ತಿರುವೆ. ಈ ಚಂದಿರನ ಬೆಳಕಲ್ಲಿ ಮಂಗಳೂರಿನ ಕಡಲು ಹೇಗೆ ಇರಬಹುದು, ಕೊಡಗಿನ ಕೋಟೆ ಬೆಟ್ಟ ಹೇಗೆ ಹೊಳೆಯುತ್ತಿರಬಹುದು, ಹಗಲೆಲ್ಲಾ ರಾಜಕಾರಣದ ಕುರಿತು ಬರೆದು ಇರುಳಲ್ಲಿ ನೀವು ಏನು ಯೋಚಿಸುತ್ತಿರಬಹುದು ಎಂದೆಲ್ಲಾ ಯೋಚಿಸುತ್ತಾ ಕುಳಿತಿರುವೆ.

 ಮೊನ್ನೆ ಇಲ್ಲಿಯ ಚುನಾವಣೆಯ ಕುರಿತು ಸಮೀಕ್ಷೆ ಬರೆಯಲು ತುರಾ ಎಂಬ ಊರಿಗೆ ಹೋಗಿ ಬಂದೆ. (more…)

Tuesday July 10, 2007

ಷಿಲ್ಲಾಂಗ್ ಪತ್ರ-೧

[೧೯೯೮-೯೯ ರಲ್ಲಿ ಮೇಘಾಲಯದ ರಾಜಧಾನಿ ಷಿಲ್ಲಾಂಗಿನಿಂದ ನಾನು ಪಿ.ಲಂಕೇಶರಿಗೆ ಬರೆದ ಪತ್ರಗಳನ್ನು ಈಗ ಒಂದೊಂದಾಗಿ ಪೋಸ್ಟ್ ಮಾಡುತ್ತಿರುವೆ . ಓದಿ ಖುಷಿ ಪಡಿ ಎನ್ನದೆ ಇನ್ನೇನು ಹೇಳಲಿ.]

shillong.jpg

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಫೆಬ್ರವರಿಯ ಗಾಳಿ ಬೀಸಲು ಶುರುವಾಗಿದೆ. ರಾತ್ರಿಯೆಲ್ಲಾ ಪೈನ್ ಮರಗಳ ಎಡೆಯಿಂದ ಬೀಸುವಗಾಳಿ. ಬೆಳಗ್ಗೆ ಏಳುವ ಮೊದಲೇ ಅಷ್ಟು ಎತ್ತರಕ್ಕೆ ಬಂದಿರುವ ಸೂರ್ಯ. ಮುಂಜಾನೆ ಆರು ಆರೂವರೆಯ ಹೊತ್ತಿಗೆ ಇಡೀ ಊರು ಮಂದಹಾಸದಂತಹ ಬಿಸಿಲಿನಲ್ಲಿ ಲಕಲಕ ಹೊಳೆಯುತ್ತಿರುತ್ತದೆ. ಮಧ್ಯಾಹ್ನದ ಹೊತ್ತು ಮಾರುಕಟ್ಟೆಯಲ್ಲಿ ಬಿದಿರುಬುಟ್ಟಿಯ ತುಂಬಾ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಾರಲು ಕುಳುತಿರುವ ಹೆಣ್ಣುಮಕ್ಕಳನ್ನು ನೀವು ನೋಡಬೇಕು. ಸೂರ್ಯನ ಹೊಳಪು, ಕಿತ್ತಳೆಯ ಬಣ್ಣ ಮತ್ತು ಅವರ ಕೆನ್ನೆಯ ಗುಲಾಬಿರಂಗು, ಊರಲ್ಲಿ ಯಾರಾದರೂ ಗುಲಾಭಿಯಂತಹ ಕೆನ್ನೆ ಅಂದರೆ ನಗುಬರುತ್ತಿತ್ತು. ಇಲ್ಲಿ ಗುಲಾಬಿ ಕೆನ್ನೆಗಳನ್ನು ಕಂಡು ದುಗುಡವಾಗುತ್ತದೆ.

 ನಿಮಗೆ ಇದೆಲ್ಲಾ ಓದಿ ನಗುಬರಬಹುದು. (more…)

Blog at WordPress.com.