The Mysore Post

Sunday November 18, 2007

ಓ ಎಳೆಯ ಜೀವಗಳೆ .. ..

Filed under: ಮಾತಿಗೂ ಆಚೆ — Rasheed @ 10:42 pm

ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.thegoldendeath_sm.jpg ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.

 ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.

`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು. (more…)

Thursday August 9, 2007

ಇಂದೆನಗೆ ಆಹಾರ ಸಿಕ್ಕಿತು!

Filed under: ಮಾತಿಗೂ ಆಚೆ — Rasheed @ 8:33 pm

ಎಷ್ಟು ಬರೆಯಬೇಕೆಂದು ಕುಳಿತರೂ ಏನೂ ಬರೆಯಲಾಗುತ್ತಲೇ ಇಲ್ಲ. ಇಷ್ಟು ಹೊತ್ತಾದರೂ ಬೆಳಗು ಇನ್ನೂ ದಿಕ್ಕೆಟ್ಟು ಮಲಗಿರುವಂತೆ ಕಾಣಿಸುತ್ತಿದೆ. ಯಾವಾಗಲೂ ಎದ್ದೊಡನೆ ಕಾಣಿಸುತ್ತಿದ್ದ ಅರಬೀ ಕಡಲಿನ ಒಂದು ಚೂರು ನೀಲಿ ಇನ್ನೂ ಮಂಜಿನಲ್ಲೇ ಮಲಗಿಕೊಂಡಿದೆ. ನದಿ ದಾಟುತ್ತಿರುವ ಕಾಡಾನೆಯಂತೆ ಉದ್ದದ ಹಡಗೊಂದು ನದೀ ಮುಖವಾಗಿ ಬಂದರಿನ ಕಡೆಗೆ ನಿಧಾನಕ್ಕೆ ನಿಂತುಕೊಂಡೇ ಇರುವಂತೆ ಚಲಿಸುತ್ತಿದೆ.sea.jpg ನಿಂತೇ ಹೋಗಿದ್ದ ಮುಂಗಾರು ಮಳೆ  ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ ಎಂತಹ ಅಸ್ವಸ್ಥ ಮನಸ್ಸಿಗೂ ಸಕಾರಣ ಹೇಳಬಲ್ಲ ಹಾಗಿರುವ ಮಂಗಳೂರಿನ  ಈವತ್ತಿನ ಬೆಳಗು, ನಗು ಬರುತ್ತದೆ. ಈ ಹವಾಮಾನ, ಈ ವಾತಾವರಣ, ಈ ನಿಂತ ನೀರಿನಂತಿರುವ ಬೆಳಗು ಇವೆಲ್ಲವೂ ನಮಗೆ ಏನನ್ನೋ ಹೇಳಲೆಂದೇ ಹೀಗೆ ನಿಂತುಕೊಂಡಿದೆ ಎಂದು ಭ್ರಮಿಸುವ ನಮ್ಮ ತಿಕ್ಕಲುತನಗಳು!

 ನೆಲಕ್ಕೆ ಸವರಿಕೊಂಡೇ ಹಾರಾಡುತ್ತಿರುವ ಹೆಲಿಕಾಪ್ಟರ್ ಚೆಟ್ಟೆಗಳು, ಮಾಡಿನ ಮೇಲೆ, ತೆಂಗಿನ ಗರಿಗಳ ಮೇಲೆ ಸಾಲಾಗಿ ಕುಳಿತುಕೊಂಡು ಈ ಹಾರುತ್ತಿರುವ ದೇವ ದೂತರಂತಹ ಚಿಟ್ಟೆಗಳನ್ನು ಅಟ್ಟಿಸಿಕೊಂಡು ತಿಂದುಹಾಕಲು ಹೊಂಚುಹಾಕುತ್ತಿರುವ ಕಾಗೆಗಳು, ಈ ದಿನದ ಬೆಳಗಿನ ಆಲಸ್ಯ ಅವುಗಳನ್ನೂ ಬಿಟ್ಟಿರುವಂತೆ ಅನಿಸುತ್ತಿಲ್ಲ. ಬೇಟೆಯನ್ನೂ  ಮರೆತು ಸುಮ್ಮನೆ ಕತ್ತು ಗರಿಗಳನ್ನು ಕೆರೆದುಕೊಂಡು, ಕೊಕ್ಕಿನಿಂದ ತಮ್ಮ ಮೈಯನ್ನೇ ವೈಯಾರದಿಂದ ಸವರುತ್ತಿರುವ ಈ ಕಾಗೆಗಳು, ಹಾರುತ್ತಲೇ ಇರುವ ಈ ಚಿಟ್ಟೆಗಳು ಮತ್ತು ಎಂದಿನ ಹಾಗೇ ರಸ್ತೆಗಳಲ್ಲಿ ಚಲಿಸಲು ತೊಡಗಿರುವ ಮನುಷ್ಯ ಮಾತ್ರರಾದ ನಾವು.

(more…)

Friday August 3, 2007

ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು

Filed under: ಮಾತಿಗೂ ಆಚೆ — Rasheed @ 11:53 pm

suntikoppa-morning.jpgಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.

ಹುಬ್ಬು ಗಂಟು ಮಾಡಿಕೊಂಡು ಕಣ್ಣುಗಳನ್ನು ಕಿರಿದುಗೊಳಿಸಿ ನೆತ್ತಿಯನ್ನೆಲ್ಲ ನೆರಿಗೆ ಮಾಡಿಕೊಂಡು ಪೇಪರುಗಳನ್ನು ತಿನ್ನುವ ಹಾಗೆ ಓದುವುದು ನನಗೆ ಸಣ್ಣದಿರುವಾಗಿನಿಂದಲೇ ಬೆಳೆದು ಬಂದಿರುವ ಕೆಟ್ಟಚಾಳಿ. ಈ ಕೆಟ್ಟಚಾಳಿಯಿಂದಲೇ ನಾನು ಹಾಳಾಗಿರುವುನೆಂದೂ, ತಲೆ ಬೇನೆ ಬಂದು ನರಳುವುದೆಂದೂ, ತಲೆಯೊಳಗೆ ನಾನಾ ಸಂಗತಿಗಳನ್ನು ತುಂಬಿಕೊಂಡು ಅವುಗಳನ್ನೆಲ್ಲಾ ಬರೆದು ನಾನು ಬರೆದವುಗಳೆಲ್ಲ ಒಮ್ಮೊಮ್ಮೆ ಅಚ್ಚಾಗಿ ಬಂದು ಅವುಗಳನ್ನು ಓದಿದವರ ತಲೆಯೂ ಹಾಳಾಗುತ್ತಿರುವುದೆಂದೂ ತುಂಬ ವರ್ಷಗಳಿಂದ ನನ್ನ ತಾಯಿ ಅನ್ನುತ್ತಿದ್ದರು.

(more…)

Monday July 30, 2007

ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

Filed under: ಮಾತಿಗೂ ಆಚೆ — Rasheed @ 3:38 pm

 lankesh.jpg[೧೯೯೫ ರಲ್ಲಿ ಬರೆದದ್ದು]

ಆಗ ನಾವು ಹುಡುಗರು.

ಹೈಸ್ಕೂಲಿನ ನಡುವಿನ ಕಾಲ.

ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.p_lankesh2.jpg

 ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗಿ ಪ್ಯಾಂಟಿಗೋ, ಪಂಚೆಗೋ ಮೊರೆ ಹೋಗುತ್ತಿದ್ದ ದಿನಗಳು.

ಆಗ ಪೇಟೆ ಪಟ್ಟಣಗಳಿಂದ ಕಾಲೇಜಿನ್ನೋ, ಕೆಲಸವನ್ನೋ ಮುಗಿಸಿಕೊಂಡು ಊರಿಗೆ ಸಂಜೆ ಬರುತ್ತಿದ್ದ ನಮ್ಮ ಹಿರಿಯ ಯುವಕ ಗೆಳೆಯರ ಕೈಯಲ್ಲಿ ನಾಲ್ಕು ಪುಟಗಳ ಕಪ್ಪು ಬಿಳಿ ಅಕ್ಷರಗಳ ಪತ್ರಿಕೆಯೊಂದು ಕಂಗೊಳಿಸುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದಲೂ ಮುಜುಗರದಿಂದಲೂ ಓದುತ್ತಾ ಕೆಲವು ಪುಟಗಳತ್ತ ಮರೆಯಾಗಿ ಕಣ್ಣಾಡಿಸುತ್ತಾ ನಮ್ಮಲ್ಲಿ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಲಂಕೇಶ್ ಪತ್ರಿಕೆ ಆರಂಭಿಸಿದ್ದರು. ನಮ್ಮ ಊರಿನ ಕಡೆಗೆ ಲಂಕೇಶ್ ಅನ್ನುವುದು ಕೊಂಚ ವಿಚಿತ್ರ. ತಮಿಳಿನ ಹಾಗೆ ಕಾಣಿಸುವ ಹೆಸರು. ಆದರೂ ಇರುವವರ ಕೈಯಿಂದ ಲಂಕೇಶ್ ಪತ್ರಿಕೆಯನ್ನು ಕಸಿದು ಓದುತ್ತ ಹೋದಂತೆ ನಮ್ಮ ಅದುವರೆಗೆ ಕಲಿತ ಭಾಷೆಗೆ ,ನಮ್ಮ ಅದುವರೆಗಿನ ಯೋಚನೆಗಳಿಗೆ, ನಮ್ಮ ತುಂಟು ತುಂಟು ಬುದ್ಧಿಗಳಿಗೆ, ಎಲ್ಲದಕ್ಕೂ ರೇಗಿ ಮನೆಯಿಂದಲೂ ಶಾಲೆಯಿಂದಲೂ ಉಗಿಸಿಕೊಳ್ಳುತ್ತಿದ್ದ ನಮ್ಮ ರೇಜಿಗೆಳಿಗೆ ಅರ್ಥವಿರುವಂತೆ ಕಾಣಿಸುತ್ತಿತ್ತು. (more…)

Tuesday July 24, 2007

ಶಾಲೆಯೆಂಬ ಲೋಕದ ಎಳೆಯರಾದ ನಾಯಕರು

Filed under: ಮಾತಿಗೂ ಆಚೆ — Rasheed @ 10:56 pm

 

dsc_0046-2.jpgಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.

ಪ್ರಪಂಚ ಬದಲಾಗುತ್ತಿರುವುದು ನಿಜವಾದರೂ, ಈ ನಿಮಿಷದ ಸಂಗತಿಗಳು ಇನ್ನೊಂದು ನಿಮಿಷಕ್ಕೆ ಅಸಂಗತವಾಗುವಷ್ಟು  ಪ್ರಪಂಚ ಬೆಳೆಯುತ್ತಿರುವುದು ಸತ್ಯವಾದರೂ, ನಿನ್ನೆ ಮೊನ್ನೆಯಷ್ಟೇ ಶಾಲೆಯ ಸಾಲು ಬೆಂಚುಗಳಲ್ಲಿ ಕೂತು ನಮ್ಮ ಟೀಚರುಗಳನ್ನೂ, ಅವರು ಹೇಳುತ್ತಿರುವ ಸಂಗತಿಗಳನ್ನೂ ದೊಡ್ಡ ಕಣ್ಣು ದೊಡ್ಡ ಕಿವಿಗಳಿಂದ ಕೇಳುತ್ತಿದ್ದಂತೆ ಈಗಲೂ ಅನಿಸುತ್ತಿರುವ ನನಗೆ ಈ ಹುಡುಗರು ಶಾಲ ನಾಯಕರುಗಳಾದುದನ್ನು ಡಂಗುರ ಬಾರಿಸಿ ಸಾರುತ್ತಿರುವ ಈ ಚಿತ್ರಗಳು ಕೊಂಚ ಅಸಹಜವಾಗಿಯೂ, ಅತಿರೇಕವಾಗಿಯೂ ಕಂಡು ದುಃಖವೆನಿಸಿತು. ಶಾಲೆಯೆಂಬ ಪುಟ್ಟ ಜಗತ್ತಿನೊಳಗೆ ನಾಯಕರಾಗಿಯೂ, ಮಂತ್ರಿಗಳಾಗಿಯೂ ಖುಷಿ ಮುಜುಗರದಿಂದ ಓಡಾಡುವ ಈ ಹುಡುಗರ ಚಿತ್ರಗಳು ಅಧಿಕಾರ, ಪ್ರಚಾರ, ಆಮಿಷಗಳಿಂದ ಕೂಡಿದ ದೊಡ್ಡವರ ಪ್ರಪಂಚದಲ್ಲಿ ಹೀಗೆ ಅನಾಯಾಸವಾಗಿ ಅಚ್ಚಾಗಿರುವುದು ಕಂಡು ನಗುವೂ ಬಂತು. (more…)

Thursday July 19, 2007

ಮಳೆಗೆ ತೀರಿದ ಎರಡು ಜೀವಗಳು

Filed under: ಮಾತಿಗೂ ಆಚೆ — Rasheed @ 11:48 am

 dsc00185.jpg

ಈ ಮಳೆ ಚಳಿಗಾಳಿಯ ನಡುವೆ ತೀರಿಹೋದ ಒಂದು ಗಂಡಸು-ಒಂದು ಹೆಂಗಸು, ಅಥವಾ  ಒಬ್ಬಳು ಮುದುಕಿ-ಒಬ್ಬ ಮುದುಕ ಅಥವಾ ಇಬ್ಬರನ್ನೂ ಸೇರಿಸಿದರೆ- ತೀರಿ ಹೋದ ಎರಡು ಜೀವಗಳು.

ನಾವು ಹೇಗೆ ಕರೆದರೂ ಸಿಟ್ಟುಮಾಡಿಕೊಳ್ಳದೆ, ಗೊಣಗದೆ ಇವರಿಬ್ಬರೂ ತಮ್ಮ ಪ್ರತ್ಯೇಕ ಗೋರಿಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ. ಹಾಗೆ ನೋಡಿದರೆ ಈ ಇಬ್ಬರು ಒಬ್ಬರನೊಬ್ಬರು ನೋಡಿಯೇ ಇಲ್ಲ. ಒಬ್ಬರು ಬದುಕಿದ್ದದು ಇನ್ನೊಬ್ಬರಿಗೆ ತಿಳಿದೂ ಇಲ್ಲ. ಇವರ ಧರ್ಮಗಳು, ಇವರ ಧರ್ಮಗ್ರಂಥಗಳು, ಇವರಿಬ್ಬರ ದೇವರುಗಳು, ಇವರು ನಂಬಿಕೊಂಡ ಸ್ವರ್ಗ ನರಕಗಳು ಬೇರೆ ಬೇರೆಯೇ ಆಗಿವೆ. ತನ್ನ ಧರ್ಮವನ್ನು ಬಿಟ್ಟು, ತನ್ನ ಧರ್ಮ ಗ್ರಂಥವನ್ನು ಬಿಟ್ಟು, ತನ್ನ ದೇವರನ್ನು ಬಿಟ್ಟು- ಈ ಇಷ್ಟು ದೊಡ್ಡ ಪ್ರಪಂಚದಲ್ಲಿ ಬೇರೆ ಧರ್ಮ. ಬೇರೆ ದೇವರು, ಬೇರೆ ಧರ್ಮಗ್ರಂಥಗಳು ಇವೆ ಎಂಬುದು ಈ ಇಬ್ಬರಿಗೂ ಮಣ್ಣಾಗಿ ಹೋದ ಮೇಲೂ ಗೊತ್ತಾಗಲಿಲ್ಲ. ಈ ಇಬ್ಬರೂ ಅಷ್ಟೊಂದು ಅಪರಿಚಿತರೂ ಮುಗ್ಧರೂ ಆಗಿದ್ದರು. ಜೊತೆಗೆ ಈ ಮುಂಗಾರಿನ ಮೊದಲ ಚಳಿಗಾಳಿ ಮಳೆಗೆ ತೀರಿ ಕೊಂಡರು. ಈ ಇವರಿಬ್ಬರನ್ನು ಒಂದು ಕಡೆಗೆ ತರುವುದು ಈ ಮಳೆ, ಅವರು ಮಲಗಿರುವ ಈ ಭೂಮಿ ಮತ್ತು ಈ ಅಂಕಣದ ಸಾಲುಗಳು ಮಾತ್ರ. (more…)

Monday June 25, 2007

ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು

Filed under: ಮಾತಿಗೂ ಆಚೆ — Rasheed @ 12:43 am

ಮಧ್ಯಾಹ್ನ ಹಠಹಿಡಿದು ಊಟ ಮಾಡದೆ ನಿದ್ದೆ ಹೋಗಿ ಎದ್ದರೆ ಕತ್ತಲಾಗುತ್ತಿತ್ತು. ಮನೆಯೊಳಗೆ ಸಂಜೆಯ ಕೊಂಚ ಬೆಳಕು ಇನ್ನೂ ಉಳಿದು ಅದೂ ಹೊರಟು ಹೋಗಲು ಹವಣಿಸುತ್ತಿತ್ತು. ಈ ಸಂಜೆಯ ಬೆಳಕು ಪ್ರೀತಿಯಂತೆ. ಆದರೆ ಅದೂ ನನ್ನನ್ನು ಬಿಟ್ಟು ಹೋಗಲು ರೆಡಿಯಾಗಿರುವುದನ್ನು ಕಂಡು ಸಂಕಟವಾಗುತ್ತಿತ್ತು. pctheater_35.jpgಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. .  (more…)

Thursday June 21, 2007

ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು

Filed under: ಮಾತಿಗೂ ಆಚೆ — Rasheed @ 11:18 pm

ಸಂಪಾಜೆಯ ಬಳಿಯ ಕೊಯನಾಡಿನ  ಅಂದುಕಾಕನ ಮಸಿ ಹಿಡಿದ ಹೋಟೆಲಿನ ಅಡ್ಡಾದಿಡ್ಡಿ ಬೆಂಚುಗಳಲ್ಲಿ ಕೂತ ನಾವು ತಿಂಡಿ ಕಪಾಟಿನ ಮೇಲಿಟ್ಟಿದ್ದ ಹೊಗೆ ಬಣ್ಣದ ರೇಡಿಯೋ ಒಂದರಿಂದ ವಿಚಿತ್ರ ಸ್ವರದ ರಷ್ಯನ್ ಹೆಂಗಸಿನ ಗಂಟಲಿನಿಂದ ನಮ್ಮ ಹೆಸರುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. radio11.jpgಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.

ನಮಗೆ ನಗು ಬರುತ್ತಿತ್ತು. ಆಕಾಶದಲ್ಲಿ ರಷ್ಯಾದಿಂದ ರೇಡಿಯೋ ಮಾಸ್ಕೋ ಮೂಲಕ ಕೇಳಿ ಬರುತ್ತಿರುವ ಈ ಪುಡಿ ಹುಡುಗರ ಹೆಸರುಗಳನ್ನು ಕೇಳಿ ಸಹಿಸಲಾಗದೆ ಅಂದು ಕಾಕ ಬೀಡಿಯ ಹೊಗೆಯ ಜೊತೆ ಪ್ರಾಣಾಯಮ ನಡೆಸಲು ಹೋಗಿ ಆಗದೆ ಗಡ್ಡ ಕೆರೆದುಕೊಂಡು ನಮ್ಮನ್ನೇ ನೋಡುತ್ತಿದ್ದರು. ರೇಡಿಯೋ ಮಾಸ್ಕೋದಲ್ಲಿ ನಮ್ಮ ಹೆಸರು ಹೇಳಿ ಮುಗಿಸಿದ ಆ ರಷ್ಯನ್ ಹೆಂಗಸು ಇನ್ನು ಯಾವುದೇ ಊರಿನ ಇನ್ನು ಯಾರದೋ ಹೆಸರುಗಳನ್ನು ಹೇಳಲು ತೊಡಗುತ್ತಿದ್ದಳು. ನಾವು ಅರ್ಥಗರ್ಬಿತವಾಗಿ ಒಬ್ಬರನೊಬ್ಬರು ನೋಡಿ ನಕ್ಕು ಹೊರಗೆ ಬರುತ್ತಿದ್ದೆವು. ಅಂದು ಕಾಕ ಎದ್ದು ರೇಡಿಯೋವನ್ನು ಸಿಲೋನಿಗೆ ತಿರುಗಿಸಿ ತಮಿಳು ಹಾಡು ಹಾಕುತ್ತಿದ್ದರು. ಹೋಟೆಲಿನೊಳಗೆ ಪೊರಾಟ, ಚಾಪೀಸಿನ ಪರಿಮಳ ಹೊಗೆಯ ಜೊತೆ ಹೋರಾಡಲು ಶುರು ಮಾಡುತ್ತಿತ್ತು. (more…)

Saturday June 9, 2007

ತಸ್ಲಿಮಾ ಕುರಿತು-ಹತ್ತು ವರ್ಷದ ಹಿಂದೆ

Filed under: ಮಾತಿಗೂ ಆಚೆ — Rasheed @ 12:30 am

ಧ್ಯಾನ, ತಪಸ್ಸು, ಪ್ರೀತಿ ಮತ್ತು ಕೊಂಚ ತಮಾಷೆ

ಈ ತಸ್ಲೀಮಾ ಎಂಬ ಡಾಕ್ಟರ್ ಹೆಣ್ಣು ಮಗಳು, ಬೆಂಗಾಲಿ ಬರಹಗಾರ್ತಿ. ಮೊದಲು ಧರ್ಮಭ್ರಷ್ಟಳಾಗಿ ಈಗ ದೇಶಭ್ರಷ್ಟಳಾಗಿ ತಲೆದಂಡ ವಿಧಿಸಿಕೊಂಡು ದೇಶ ವಿದೇಶಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವುದು ಒಂದು ಪೂರ್ವಯೋಜಿತ ಪ್ರಹಸನದಂತೆ ನಡೆದುಹೋಗಿದೆ. ಆಕೆಗೆ ದೂರದ ದೇಶವೊಂದು ಆಶ್ರಯ ಕೊಟ್ಟಿದೆ. ತಲೆದಂಡ ವಿಧಿಸಿದವರು ಹಲ್ಲು ಕಚ್ಚಿ ಸುಮ್ಮನಾಗಿದ್ದಾರೆ. ತಲೆದಂಡದ ವಿರುದ್ಧ ಮಾತನಾಡಿ ಪ್ರಜ್ಞಾವಂತರಾದ, ಬುದ್ಧಿಜೀವಿಗಳಾದ, ಜಾತ್ಯತೀತರಾದ ಜನ ಕೂಡಾ ಸುಮ್ಮನಾಗಿದ್ದಾರೆ. ಆಕೆಯನ್ನು ಬೈದವರು, ಹೊಗಳಿದವರು ಉಪಯೋಗಿಸಿಕೊಂಡವರು ಎಲ್ಲರೂ ಇಂತಹದೇ ಇನ್ನೊಂದು ಪ್ರಹಸನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಜಗತ್ತೂ ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ನಡೆಯುತ್ತಿದೆ.ಈ ಎಲ್ಲದರ ನಡುವೆ ಒಂದೆರಡು ಚಿತ್ರಗಳು, ಸಂಗತಿಗಳು ಮಾತ್ರ ಹಾಗೇ ಎದೆಯ ಒಳಕ್ಕೆ ನಿಧಾನವಾಗಿ ಅಮರಿಕೊಳ್ಳುತ್ತದೆ. ಎಂದೂ ಮಾದುಹೋಗದ ಹಾಗೆ ಹೊಕ್ಕು ಕೂತಿರುವ ಈ ಚಿತ್ರ ಸಂಗತಿಗಳು ಈ ತಸ್ಮೀಮಾ ಎಂಬ ಹೆಣ್ಣುಮಗಳು ಬರೆದ್ದನ್ನೂ ಮೀರಿ ಆಕೆಯ ಉದ್ಗಾರಗಳನ್ನೂ ಮೀರಿ, ಆಕೆಗೆ ತಲೆದಂಡ ವಿಧಿಸಿದವರ ಅಟ್ಟಹಾಸ, ಆಕೆಯನ್ನು ಹೊಗಳಿ ಹಾಳು ಮಾಡಿದವರ ಅವಿವೇಕವನ್ನೂ ಮೀರಿ ಹಾಗೇ ಉಳಿದುಕೊಳ್ಳುತ್ತವೆ.

ಒಂದನೆಯ ಚಿತ್ರ ತಸ್ಲೀಮಾ ಭೂಗತಳಾಗಿ ತಿರುಗುತ್ತಿರುವಾಗ ಆತಂಕಗೊಂಡು ಅಳುತ್ತಿರುವ ಆಕೆಯ ತಾಯಿಯ ಚಿತ್ರ. ಎರಡನೆಯದು ಸೆರಗು ಹೊದ್ದುಕೊಂಡು ಕೋರ್ಟ್ ನಲ್ಲಿ ಹಾಜರಾದ ತಸ್ಲೀಮಾಳ ಚಿತ್ರ. ಮೂರನೆಯದು ಅಡಗಿದಲ್ಲಿಂದ ಹೊರಬಂದು ತಾಯಿಯನ್ನು ತಬ್ಬಿಕೊಂಡು ಅಳುತ್ತಿರುವ ಇದೇ ಲೇಖಕಿಯ ಚಿತ್ರ. ಕೊನೆಯದ್ದು ಯಾವುದೋ ದೂರದ ಊರಿನಲ್ಲಿ ಆರಾಮವಾಗಿ ಡಾಕ್ಟರ್ ಕೆಲಸ ಮಾಡಿಕೊಂಡಿರುವ ತಸ್ಲೀಮಾಳ ತಂದೆ ತನ್ನ ಚಿಕಿತ್ಸಾಲಯಕ್ಕೆ ಕಲ್ಲು ಹೊಡೆಯಲು ಬಂದವರ ಕುರಿತು ಖೇದದಿಂದ, ಅಷ್ಟೇ ದುಗುಡದಿಂದ ವಿವರಿಸುತ್ತಿರುವ ಚಿತ್ರ. (more…)

Saturday May 26, 2007

ತೀರಿ ಹೋಗಿರುವ ಸೂಫಿ ಬ್ಯಾರಿಯವರ ಕುರಿತು

Filed under: ಮಾತಿಗೂ ಆಚೆ — Rasheed @ 8:56 pm

ಸೂಫಿ ಸಂತನ ಸಂಸಾರ ತೋಟ…

 

sufi1.jpg

ಹುಣ್ಣಿಮೆಯ ಮರುದಿನದ ಬೆಳದಿಂಗಳು. ಆ ದೊಡ್ಡ ಮಸೀದಿ ತೊಯ್ಯುತ್ತ ಮಲಗಿತ್ತು. ಚಂದ್ರನ ಕೆಳಗೆ ಚಂದಕ್ಕೆ ಹಾಸಿದಂತೆ ಒಂದು ತುಂಡು ಮೋಡ ಮುಸುಕಿಕೊಂಡು ಆಕಾಶದ ಅಳಿದುಳಿದ ಕತ್ತಲಿನ ಜಾಗದಲ್ಲಿ ಒಂದೊಂದು ನಕ್ಷತ್ರಗಳು ಮಿನುಗುತ್ತಿದ್ದವು. ಅಲ್ಲಲ್ಲಿ ಮಳೆಯ ಮೋಡಗಳು ನೀಲಿಗಟ್ಟಿಕೊಂಡು ಆ ಹೊತ್ತಲ್ಲಿ ಆ ಆಕಾಶ, ಈ ಭೂಮಿ ಮತ್ತು ಭೂಮಿಯ ಮೇಲಿರುವ ಈ ದೊಡ್ಡ ಮಸೀದಿ.

 ನೀನು ಯಾರೆಂದು ಯಾರಾದರೂ ಕೇಳಿದರೆ ನಾನು ಯಾರೆಂದು ಹೇಳಲಿ? ನಿನ್ನ ಹೆತ್ತವರು ಯಾರು, ನಿನ್ನ ಪಡೆದವನು ಯಾರು? ಎಂದು ಯಾರಾದರೂ ಕೇಳಿದರೆ ಯಾರೆಂದು ಹೇಳಲಿ? ಎಂದೂ ಕಾಣಿಸದ ಹಾಗೆ ಮಸೀದಿಯ ಪಕ್ಕಕ್ಕೆ ಒತ್ತಾಗಿ ಉದ್ದಕ್ಕೆ ಬೆಳೆದಿದ್ದ ಬಿದಿರು ಮೆಳೆಗಳು ಯಾವಾಗಲೋ ಹನಿದಿದ್ದ ಮಳೆಯ ಹನಿಗಳನ್ನು ಮೈಯ ಮೇಲೆ ಮುಡಿದುಕೊಂಡು ತಲೆದೂಗುತ್ತಾ ನೋಡುತ್ತಿದ್ದವು. ಮಸೀದಿಯ ಸುತ್ತ ಮೈದಾನ. ಆ ಕತ್ತಲೆ ಬೆಳಕಿನಲ್ಲೂ ಹಲವಾರು ಗೋರಿಗಳು. ಗೋರಿಗಳ ತಲೆ ಕಾಲುಗಳ ಭಾಗದಲ್ಲಿ ನೆಟ್ಟಿದ್ದ ಕಲ್ಲುಗಳು ಹೊಳೆಯುತ್ತಿದ್ದವು. ಎಷ್ಟು ವರ್ಷಗಳಿಂದ ತೆರೆಯುತ್ತ, ಮುಚ್ಚುತ್ತಾ, ಈ ಬೆಳದಿಂಗಳಿನಲ್ಲಿ ಹೀಗೆ ಹೊಳೆಯುತ್ತಾ ಮಲಗಿರುವ ಈ ಮಾನವನ ಮರಣ ಸಂಕೇತಗಳು,
 ಆ ರಾತ್ರಿಯಲ್ಲೂ ಹಸುವೊಂದು ಮೈದಾನದ ಗೋರಿಗಳ ಪಕ್ಕ ಬೆಳೆದಿದ್ದ ಹುಲು ಮೇಯುತ್ತಾ ಬಾಲವಾಡಿಸುತ್ತಾ ನಡೆಯುತ್ತಿತ್ತು. ಪಕ್ಕದಲ್ಲಿ ಸೂಫಿಬ್ಯಾರಿಯವರು ಮಾತನಾಡುತ್ತಾ ಕೂತಿದ್ದರು. ಸೂಫಿ ಬ್ಯಾರಿಯವರ ತಂದೆ ತಾಯಿಯರು ಮರಣವಾದ ಮಣ್ಣಾದ ಈ ಮೈದಾನದಲ್ಲಿ ನಾವಿಬ್ಬರು ಮಸೀದಿಯ ಕಟ್ಟೆಯ ಮೇಲೆ ಕೂತಿದ್ದೆವು. ಸೂಫಿಯವರು ಮನುಷ್ಯರ ಅವಿವೇಕಗಳ ಕುರಿತು ನಿಲ್ಲಿಸದೆ ಮಾತು ಮುಂದುವರಿಸಿದ್ದರು. (more…)

Sunday May 20, 2007

ವೈಕಂ ಮಹಮದ್ ಬಷೀರ್ ಎಂಬ ಕಾಲಜ್ಞಾನಿ

Filed under: ಮಾತಿಗೂ ಆಚೆ — Rasheed @ 1:33 am

basheer.jpg

‘ಸುಂದರವಾದ ಈ ಭೂಗೋಳದಲ್ಲಿ ನನಗೆ ಪಡೆದವನು ಅನುಮತಿಸಿದ್ದ ಸಮಯ ಪರಿಪೂರ್ಣವಾಗಿ ಅವಸಾನಿಸಿತು. ಇನ್ನು ಸಮಯ ಕೊಂಚವೂ ಇಲ್ಲ. ಆ ಪಡೆದವನ ಭಂಡಾರದಲ್ಲಿ ಮಾತ್ರ ಸಮಯವಿದೆ. ಎಂದಿಗೂ, ಎಂದೆಂದಿಗೂ ಮುಗಿಯದ ಸಮಯ ಅನಂತ ಅನಂತವಾದ ಸಮಯ’ ‘ನಾನು ತೀರಿಹೋದೆ.. ನನ್ನ ಇನ್ನು ಯಾರಾದರು ನೆನಪಿಸಬೇಕೆ? ನನ್ನ ಯಾರೂ ನೆನಪಿಸುವುದು ಬೇಡ ಎಂದು ನನಗೆ ಅನ್ನಿಸುತ್ತಿದೆ. ಯಾಕೆ ನೆನಪಿಸುವುದು? ಕೋಟ್ಯಾನುಕೋಟಿ ಅನಂತ ಕೋಟಿ ಸ್ತ್ರೀ ಪುರುಷರು ತೀರಿಹೋಗಿಲ್ಲವೇ? ಅವರನ್ನು ಯಾರು ನೆನಪಿಸುತ್ತಾರೆ?’ ‘ನನ್ನ ಪುಸ್ತಕಗಳೆಲ್ಲ ಎಷ್ಟು ಕಾಲ ನೆಲೆ ನಿಲ್ಲಬಹುದು? ಹೊಸಲೋಕ ಬರುವುದಲ್ಲವಾ? ಹಳೆಯದೆಲ್ಲ ಹೊಸದರಲ್ಲಿ ಮಾದು ಹೋಗಬೇಕಲ್ಲವಾ?’
ಮಲಯಾಳದ ಮಹಾಬರಹಗಾರ ವೈಕಂ ಮಹಮದ್ ಬಷೀರ್ ತನ್ನ ಕೊನೆಯ ಬರಹದಲ್ಲಿ ಬರೆಯುತ್ತಿದ್ದಾರೆ. (more…)

Thursday May 17, 2007

ಅಲ್ಬರ್ಟ್ ಕಮು ಬರೆದ ಒಂದು ಹಳೆಯ ಕಾದಂಬರಿ

Filed under: ಮಾತಿಗೂ ಆಚೆ — Rasheed @ 7:56 am

ಪ್ಲೇಗ್ ಮಾರಿಯ ಮೇಲೆ ಮಾನವ ಭಾಷ್ಯ

plague1.jpg

ಎಂಟು ತಿಂಗಳ ಕಾಲ ಮರಣ ನರ್ತನ ನಡೆಸಿದ ಪ್ಲೇಗ್ ಮಾರಿ ಆಯಾಸಗೊಂಡಂತೆ ನಟಿಸುತ್ತಾ ಹಿಮ್ಮೆಟ್ಟಿದ್ದಾಳೆ. ಮರಣ ಭಯದಲ್ಲಿ ಕಳೆದ ಈ ನಗರ ಇದ್ದಕ್ಕಿದ್ದಂತೆ ಉಲ್ಲಾಸಗೊಳ್ಳುತ್ತಿದೆ. ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ನಗರದ ಬಾಗಿಲುಗಳು ತೆರೆದುಕೊಂಡಿವೆ. ಅಗಲಿ ಇದ್ದವರು ಒಂದಾಗುತ್ತಿದ್ದಾರೆ. ಪ್ರೇಮಿಗಳು, ಗಂಡ-ಹೆಂಡತಿಯರು ತೆರೆದ ತೋಳುಗಳಿಂದ ನಡು ಬೀದಿಯಲ್ಲೇ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ನಿಂತು ಹೋಗಿದ್ದ ರೈಲ್ವೆ ಎಂಜಿನ್‌ಗಳಿಂದ ಹೊಗೆ ಏಳುತ್ತಿದೆ. ಮುಚ್ಚಿದ್ದ ನಗರದ ಬಂದರಿಗೆ ಹಡಗುಗಳು ಬರತೊಡಗಿವೆ. ಪ್ಲೇಗಿನಿಂದ ಬದುಕಿ ಉಳಿದ ಜನ ಮೈಮರೆತು ಕೇಕೆ ಹಾಕುತ್ತಿದ್ದಾರೆ. ನಗರ ತನ್ನ ಸಹಜ ಓಟಕ್ಕೆ ಸಿದ್ಧವಾಗುತ್ತಿದೆ. ಎಲ್ಲವೂ ಎಲ್ಲರೂ ಅವರವರ ಖಾಸಗೀ ಕೋಣೆಗಳಿಗೆ ಮರಳುತ್ತಿದ್ದಾರೆ….

ಆದರೆ ನೂರಾರು ಜನ ರೈಲಿನಲ್ಲಿ ನಗರಕ್ಕೆ ಮರಳಿ ಬಂದವರು ನಿಲ್ದಾಣದಲ್ಲಿ ತಮ್ಮನ್ನು ಕಾದುನಿಲ್ಲಬೇಕಾಗಿದ್ದವರ ಮುಖ ಕಾಣದೆ ಎಲ್ಲ ಗೊತ್ತಾದವರಂತೆ ದಂಗು ಬಡಿದು ನಿಂತಿದ್ದಾರೆ. ಅವರ ಮನಸ್ಸಿನಲ್ಲಿ ಅನಿಸಿದ್ದು ನಿಜವಾಗಿದೆ. ಅವರಿಗೆ ಕಾಯಬೇಕಾಗಿದ್ದವರು ಈಗ ದೊಡ್ಡ ಮಣ್ಣಿನ ಹೊಂಡಗಳಲ್ಲಿ ಕ್ರಿಮಿನಾಶಗಳ ನಡುವೆ ಪದರ ಪದರಗಳಲ್ಲಿ ಹೆಣವಾಗಿ ಕೊಳೆತುಹೋಗುತ್ತಿದ್ದಾರೆ. ತಾಯಂದಿರು ಹೆಂಡತಿಯರು, ಪ್ರೇಮಿಗಳು ರೈಲ್ವೆ ನಿಲ್ದಾಣದಲ್ಲಿ ಹಾಗೇ ಗರಬಡಿದು ನಿಂತಿದ್ದಾರೆ. ಅವರಿಗೆ ಅಳು ಬರುತ್ತಿಲ್ಲ.

ಈ ಸುಖ ದುಃಖದ ಪ್ರೇಮದ ವಿರಹದ ನೂಕು ನುಗ್ಗಲಿನ ನಡುವೆ ಏಕಾಂಗಿಯಾಗಿ ಈ ಡಾಕ್ಟರ್ ಮನೆಯೊಂದರ ತಾರಸಿಯ ಮೇಲೆ ನಿಂತು ನಗರದ ಬೀದಿಗಳನ್ನೂ ಆಕಾಶವನ್ನೂ ಹಾಗೂ ಕಡಲನ್ನು ನೋಡುತ್ತಿದ್ದಾನೆ. ಅವುಗಳೆಲ್ಲವು ಏನೂ ಆಗದೆ ಹಾಗೆ ಹಾಗೇ ಇವೆ. ಆದರೆ ಈ ಡಾಕ್ಟರನಿಗೆ ಗೊತ್ತಿದೆ. ಆತ ಹೇಳ ಹೊರಟಿರುವ ಕಥೆ ವಿಜಯದ ಕಥೆಯಲ್ಲ. ಇದು ಭಯದ ವಿರುದ್ಧ ನಡೆಯುವ ಎಂದೆಂದೂ ಮುಗಿಯದ ಹೋರಾಟದ ಕಥೆ. ಅವರವರರ ಖಾಸಗೀ ನಂಬಿಕೆಗಳು ಏನೇ ಇದ್ದರೂ, ಸಂತರಾಗಲು ಸಾಧ್ಯವಾಗದೇ ಹೋದರೂ ಈ ಪ್ಲೇಗ್ ಎಂಬ ಮಾರಿಗೆ ತಲೆಬಾಗಲು ನಿರಾಕರಿಸಿ, ಆದಷ್ಟೂ ಜನರನ್ನು ಉಳಿಸಿಕೊಳ್ಳಲು ಹೆಣಗಿದ ಮಾನವಂತರ ಕಥೆ. (more…)

Friday May 11, 2007

ಕಿ.ರಂ.ನಾಗರಾಜ್ ಎಂಬ ಗಾರುಡಿಗ

Filed under: ಮಾತಿಗೂ ಆಚೆ — Rasheed @ 1:27 am

 kiram.jpg

ಶ್ರಾವಣದ ಕೊನೆಯ ಶನಿವಾರ ಅಪರಾಹ್ನ. ಕೊತ್ತಂಬರಿ, ಮೆಂತೆ ಸೊಪ್ಪು, ಚೆಂಡು ಹೂ, ಸೇವಂತಿಗೆ. ಕುಂಕುಮ, ಅಗರಬತ್ತಿ ಮತ್ತು ಬೀದಿಯ ತುಂಬ ತಳ್ಳಾಡುತ್ತಾ ಹೆಗಲಿಗೆ ಒರೆಸಿ ಬೆವರುತ್ತ ನಡೆಯುತ್ತಿರುವ ಮಂದಿಯ ಮಿಶ್ರ ಪರಿಮಳ.

ಕಿ.ರಂ ನನ್ನನ್ನು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ತಾಗಿಕೊಂಡಿರುವ ರಸ್ತೆಗಳಲ್ಲಿ ನಡೆಸುತ್ತಿದ್ದರು. ಎಲ್ಲ ದೇವಾಲಯಗಳೂ, ದೇವ ದೇವತೆಗಳೂ ಹಳದಿಯ ಹೂಗಳಿಂದ ಅಲಂಕೃತಗೊಂಡು ಸಂಜೆಗೆ ಬರುವ ಭಕ್ತರನ್ನು ಕಾಯುತ್ತಿದ್ದವು.. ಈ ದೇವರುಗಳು, ಈ ದೇವತೆಗಳು, ಈ ತಳ್ಳುವ ಜನರು, ಈ ಅಗಾಧ ಮನುಷ್ಯವಾಸನೆ ಮತ್ತು ಹೂವುಗಳ ಪರಿಮಳ. ನಾವು ಅವೆನ್ಯೂ ರಸ್ತೆಯ  ಆ ಸಂಗೀತದ ಅಂಗಡಿಯನ್ನು ಅರಸಿಕೊಂಡು ನಡೆಯುತ್ತಿದ್ದೆವು. ಕಿ.ರಂ ಈ ಹಳೆಯ ಸಂಗೀತದ ಅಂಗಡಿಯ ಕಥೆಯನ್ನು ಹೇಳುತ್ತಿದ್ದರು. ಅವರು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ದೂರದ ಸೆಂಟ್ರಲ್ ಕಾಲೇಜಿಗೆ ದಿನವೂ ನಡೆಯುತ್ತಾ ದಾರಿಯಲ್ಲಿ ಸಿಗುವ ಈ ಸಂಗೀತದ ಅಂಗಡಿ, ಶೆಟ್ಟಿಯೊಬ್ಬ ಸಂಗೀತದ ಗ್ರಾಮೊಫೋನ್ ತಟ್ಟೆಗಳನ್ನು ಪೇರಿಸಿಟ್ಟು ಮಾರುತ್ತಾ, ಬಾಡಿಗೆಗೆ ನೀಡುತ್ತಾ ಕುಳಿತಿರುತ್ತಿದ್ದ. ಆತನ ಅಂಗಡಿಯ ಅಟ್ಟದಲ್ಲೊಂದು ಹಳೆಯ ಎಚ್ಎಂವಿ ಗ್ರಾಮೊಫೋನ್, ಹಿತ್ತಾಳೆಯ ಹಾನರ್ಿನ, ಎಪ್ಪತ್ತೇಳು ಆರ್.ಪಿ.ಎಂ. ವೇಗದ, ಕೈಯಿಂದ ಕೀಲಿ ತಿರುಗಿಸಿ ಹಾಡಿಸುವ ಈ ಗ್ರಾಮೊಫೋನ್ ಯಂತ್ರ ಆತನ ಅಂಗಡಿಯ ಅಟ್ಟದಲ್ಲಿ ದೇವತೆಯಂತೆ ಕೂತಿರುತ್ತಿತ್ತು. ಆತ ಕೇಳಿದವರಿಗೆ ಈ ಸಂಗೀತದ ತಟ್ಟೆಗಳನ್ನು ಬಿಕರಿ ಮಾಡುತ್ತಾ,  ಬಾಡಿಗೆಗೆ ಕೊಡುತ್ತಾ, ಕೊಳ್ಳಲಾಗದ ಹುಡುಗರಿಗೆ ಹಾಡಿಸಿ ಕೇಳಿಸುತ್ತಾ ಬೇಕಾದವರಿಗೆ ಗ್ರಾಮೊಫೋನಿನ ಮುಳ್ಳುಗಳ ಪೆಟ್ಟಿಗೆಯನ್ನು ಬೆಂಕಿ ಪೆಟ್ಟಿಗೆಯಂತೆ ಮಾರುತ್ತಾ ಅಂಗಡಿಯ ತುಂಬಾ ಓಡಾಡುತ್ತಾ ನಗುತ್ತಾ ಇರುತ್ತಿದ್ದ. ಈ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ದಿವಸ ಕಾಳಿಂಗರಾಯರು ಹಾಡಿದ ದೇಶಭಕ್ತಿ ಗೀತೆಗಳನ್ನು ಬೀದಿ ತುಂಬ ಕೇಳಿಸುವಂತೆ ಹಾಕುತ್ತಿದ್ದ. ಕಾಲೇಜಿಗೆ ಹೋಗುತ್ತಿದ್ದ ಕಿ.ರಂ ದಾರಿಯಲ್ಲಿ ಈ ಸಂಗೀತದ ಅಂಗಡಿಯಲ್ಲಿ ಅವಕ್ಕಾಗಿ ನಿಂತು, ಈ ತಟ್ಟೆಗಳನ್ನು ಮೋಹದಿಂದ ನೋಡಿ, ಪ್ರೀತಿಯಿಂದ ಸವರಿ, ದಿನಕ್ಕೊಂದರಂತೆ ಜೋಪಾನದಿಂದ ಕೊಂಡು ಹೋಗಿ ಕೇಳಿ ಹಿಂತಿರುಗಿಸಿ ಪುನಃ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಅಪರೂಪಕ್ಕೆ ಈ ಶೆಟ್ಟಿಯ ಸಂಗೀತದ ಅಂಗಡಿಯಿಂದ ಮೊಜಾರ್ಟನ  ಸಿಂಪೋನಿ ಕೇಳಿ ಬರುತ್ತಿತ್ತು. ಈ ಶೆಟ್ಟರು ಮೊಜಾರ್ಟನ ಸಂಗೀತ ಕೇಳುತ್ತಾ ಕುಳಿತಿರುತ್ತಿದ್ದರು.

ಕಿ.ರಂ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಈ ಅಂಗಡಿಯನ್ನು ನೆನಪಿಸಿಕೊಳ್ಳುತ್ತಾ ನಾವಿಬ್ಬರೂ ಆ ನೆನಪ ವಾಸನೆ ಹಿಡಿದುಕೊಂಡು ಬೆಂಗಳೂರಿನ ಈ ಅಸಾಧ್ಯ ರಂಗು ರಂಗಿನ ಶ್ರಾವಣ ಶನಿವಾರ ಮಧ್ಯಾಹ್ನ ನಡೆಯುತ್ತಿದ್ದೆವು. (more…)

Monday April 30, 2007

ರಾಮಚಂದ್ರ ಭಟ್ಟರೂ,ಕುಂಞಪ್ಪ ಬ್ಯಾರಿಗಳೂ

Filed under: ಮಾತಿಗೂ ಆಚೆ — Rasheed @ 11:48 pm

puttur1.jpg

ಇದು ಹುಡುಗ ಹುಡುಗಿಯರ ಹದಿಹರೆಯದ ಹುಚ್ಚಿನ ಮೋಹಕ ಪ್ರೇಮವಲ್ಲ, ಹೆಣ್ಣು- ಗಂಡಿನ ಉರಿಯುವ ಪ್ರೇಮದ, ಕಾಮದ ನಾಲಗೆಯ ಚಾಚುವಿಕೆಯಲ್ಲ, ಗಂಡಸು ಮತ್ತು ಗಂಡಸಿನ ನಡುವಿನ ಅಥವಾ ಹೆಂಗಸು ಮತ್ತು ಹೆಂಗಸಿನ ನಡುವಿನ ಹೇಳಲೂ ಆಗದ ನುಂಗಲೂ ಆಗದ ಆಕರ್ಷಣೆಯಲ್ಲ.

ಇದು ಇಬ್ಬರು ಮುದುಕರ ಪ್ರೇಮದ ಕಥೆ. ಇಲ್ಲಿ ನಾಯಕರಿಲ್ಲ, ನಾಯಕಿಯರಿಲ್ಲ, ಖಳರಿಲ್ಲ, ವಿರಹವಿಲ್ಲ, ಅಸೂಯೆಯಿಲ್ಲ. ಎಲ್ಲವನ್ನೂ ವಿವರಿಸಿ ಹೇಳುವ ಕಾರ್ಯ ಮತ್ತು ಕಾರಣಗಳೆಂಬ ಸಂಬಂಧಗಳ ಹಂಗೂ ಈ ಮುದುಕರಿಗೆ ಇಲ್ಲ. ಯಾಕೆ ಈ ಪ್ರೇಮ ಎಂದು ಕೇಳಿದರೆ ಇದಕ್ಕೇ ಎಂದು ಖಂಡ ತುಂಡವಾಗಿ ಉತ್ತರಿಸಲೂ ಇವರಿಬ್ಬರಿಗೂ ಇಷ್ಟವಿಲ್ಲ. ಯಾಕೆಂದರೆ ಇವರಿಬ್ಬರಿಗೂ ಇದಕ್ಕೆ ಇದೇ ಉತ್ತರವೆಂಬುದು ಗೊತ್ತಿಲ್ಲ. ಇನ್ನೂ ಒತ್ತಾಯ ಮಾಡಿದರೆ ಒಬ್ಬರು ನಾಚಿಕೊಳ್ಳುತ್ತಾರೆ. ಇನ್ನೊಬ್ಬರು ಆಕಾಶದ ಕಡೆಗೆ ಕೈ ತೋರಿಸುತ್ತಾರೆ. (more…)

Blog at WordPress.com.