The Mysore Post

Monday November 5, 2007

‘ಪಾತು’ – ಒಂದು ಸಣ್ಣ ಕತೆ

Filed under: ಕತೆ-ಗಿತೆ — Rasheed @ 10:24 pm

paatu-10.jpg

[ಚಿತ್ರ:ಚರಿತಾ]

ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು – ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ     ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…

ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.

 

ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.

(more…)

Thursday August 30, 2007

ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

Filed under: ಕತೆ-ಗಿತೆ — Rasheed @ 7:48 pm

iblis1.jpg 

‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.

ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ ಎಂಬುವವನು ಈ ತರಲೆ ಬರಹಗಾರನ ತಲೆ ತಂದೊಪ್ಪಿಸಿದವರಿಗೆ ಲಕ್ಷಾಂತರ ರೂ. ಬಹುಮಾನ ಕೊಡುವೆನೆಂದು ಹೇಳಿರುವುದನ್ನೂ ಒಳ್ಳೆ ಕಥೆ ಹೇಳಿದಂತೆ ಈಕೆಯ ಬಳಿ ಹೇಳಿ ಹೊರಟುಹೋಗಿದ್ದರು.

ಇರಾನೋ, ಇರಾಕೋ, ರಷ್ದಿಯೋ, ಕಥೆಯೋ, ಮಸಾಲೆಯೋ ಏನೂ ಅರ್ಥಮಾಡಿಕೊಳ್ಳಲಿಕ್ಕೆ ಹೋಗದಿದ್ದ ನನ್ನ ಉಮ್ಮ ಈಗ ನಾನೂ ತಲೆಕೆಟ್ಟವನಂತೆ ಮಟಮಟ ಮಧ್ಯಾಹ್ನ ಜಗಳಕ್ಕೆ ನಿಂತಿರುವುದನ್ನು ನೋಡಿಯೂ ಸುಮ್ಮನೇ ಇರುವುದು ನನಗೆ ಆಗಲಿಲ್ಲ.

‘ಅವನ್ನು ಅವರು ಎಲ್ಲಾದರೂ ಕೊಂದರೆ ನಾನು ನಿಜಕ್ಕೂ ಜಾತಿ ಬಿಟ್ಟು ಹೋಗುವೆ’ ನಾನು ಈ ‘ನಿಜಕ್ಕೂ’ ಅನ್ನುವುದನ್ನು ಎರಡು ಮೂರು ಬಾರಿ ಒತ್ತಿ ಒತ್ತಿ ಹೇಳಿ ಆಕೆಯ ಮುಖ ನೋಡಿದೆ.

ನಾನು ‘ನಿಜಕ್ಕೂ’ ಎನ್ನುವುದನ್ನು ಗಟ್ಟಿಯಾಗಿ ಹೇಳಿದ್ದು ಆಕೆಗೆ ಸರಿ ಕಾಣಲಿಲ್ಲವೆಂದು ಕಂಡಿತು.

‘ನಿಜಕ್ಕೂ, ಸುಳ್ಳಿಗೂ ಅಂತ ಬೇರೆ ಬೇರೆ ಇದೆಯಾ? ನಿಜಕ್ಕೂ ಅಂತಲೇ ತಿಳಕೋ. ಅಲ್ಲಿ ಇವರು ಯಾರೋ ಯಾವನೋ ಒಬ್ಬನನ್ನು ಕೊಂದರೆ ನೀನು ಇಲ್ಲಿ ಯಾಕೆ ಉರಿಬರುತ್ತಾ ಇದೀಯಾ? ಅಷ್ಟಕ್ಕೂ ನೀನು ಯಾರು ಜಾತಿ ಬಿಡಲಿಕ್ಕೆ’.
ನನ್ನ ಉಮ್ಮನಿಗೂ ಕೆಲಸದ ನಡುವೆ ಜಗಳ ಮಾಡಲಿಕ್ಕೆ ಖುಷಿಯಾಗುತ್ತಿರುವಂತೆ ಕಂಡಿತು. (more…)

Friday August 10, 2007

ಹಾಲು ಕುಡಿದ ಹುಡುಗಾ- ಒಂದು ಕತೆ

Filed under: ಕತೆ-ಗಿತೆ — Rasheed @ 11:03 pm

 [ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ನಾಚುಗೆಯ ಕತೆಯನ್ನು ಈಗಲೂ ಅಷ್ಟೇ ನಾಚುಗೆಯಿಂದ ಈ ಬ್ಲಾಗಿನಲ್ಲಿ ಅಡಗಿಸಿಡುತ್ತಿರುವೆ. ಈ ಕತೆಗೆ ಹೊಸತಾಗಿ ಚಿತ್ರಗಳನ್ನು ಬರೆದ ಚರಿತಾ ರಿಗೆ ಈ ಕಥೆಗಾರ ಚಿರಋಣಿ ]

 

 

hkh-1241.jpg

     ಆ ಮೂರು ಜನ ಹೆಂಗಸರು ನದಿಬಟ್ಟೆಯ ಗಂಟು ಹೊತ್ತು ಒಂದು ಮೆಟ್ಟಲು, ಎರಡು ಮೆಟ್ಟಲು, ಮೂರು ಮೆಟ್ಟಲು ಜರಿದ ಬರೆ ಇಳಿದು ಸೊಂಟಕ್ಕೆ ಸೊಂಟಕುಕ್ಕಿ ನನ್ನ ಕರೆದರು.

‘ಹಾ ಹುಡುಗ, ಏ ಹುಡುಗ, ಏ ಹಾಳು ಗಂಡಾದವನೇ, ಬಾ ಬಾಲ್ಯಕಾರ ಹುಡುಗನೇ ಬಾ, ನಮ್ಮ ಹುಡುಗಿಯ ಬಾಳು ಮೂರಾಬಟ್ಟೆ ಮಾಡಿದವನೇ ಬಾ’ ಎಂದು ಗಂಟು ಬಿಚ್ಚಿ ಕಲ್ಲು ಪಾರೆಯ ಮೇಲೆ ಬಟ್ಟಕ್ಕೆ ಕೂತರು. ‘ಬಾ, ಬಟ್ಟೆಯೇ ಬಾ, ಇದು ಆ ಹುಡುಗಿಯ ಮುಂಡು ಬಟ್ಟೆ, ಇದು ಅವಳು ಶೀಗೆ ನೆನೆಸಿಟ್ಟ ಮುಡಿಲೇಸು, ಇದು ಅವಳ ರವಿಕೆಯ ಬಟ್ಟೆ, ಬಾ ಹುಡುಗನೇ, ಬಂದು ಮುಟ್ಟಿ ಇಲ್ಲ ಎಂದು ಹೋಗು ಬಾ ನೋಡುವಾ. ಬಾ ಹಾಳಾದವನೇ. ಹುಡುಗ, ಈ ನಡು ಮಧ್ಯಾಹ್ನ ಶುಕ್ರವಾರ ಗಂಡಸರೆಲ್ಲ ಪಡೆದವನಿಗೆ ಬಾಗುವ ಹೊತ್ತು ಹಾಳಾದವನೇ ನದಿಗಿಳಿದಿದ್ದೀಯಾ ಬಾ, ನಡಿ ನಮ್ಮ ಹುಡುಗಿಯ ಕಟ್ಟು ಬಾ ಹಾಳಾದವನೇ’ ಅಂತ ನದಿಯ ನೀರಿಗೆ ಆ ಹುಡುಗಿಯ ಅರ್ಧ ಸೀರೆಯ ತೇಲಿಸಿ ತೊರಿಸಿದರು.

ಸೀರೆ ತೇಲುತ್ತಾ ನನ್ನ ಬಳಿಗೆ ಬಂದಿತು. ನೀರಲ್ಲಿ ಅವಳ ಸೀರಯ ಒಂದು ಸೆರಗು ತೇಲಿ, ಅದರಲ್ಲಿ ಅವಳ ಸೀರೆಯ ಎಣ್ಣೆಯ ಗಮನ ಮೂಗಿಗೆ ತೇಲಿ ನನಗೆ ನೀರಲ್ಲಿ ಅವಳ ನೆನಪು ಬಂದಿತು. ಪುಸಕ್ಕನೇ ನದಿಗೆ ಮುಳುಗಿ ಆ ಹೆಂಗಸರಿಗೆ ಕೈ ತೋರಿಸಿ ಗೇಲಿ ಮಾಡಿ, ಒಂದಾಳಕ್ಕೆ ಮುಳುಗಿ ಆ ಹೆಂಗಸು ದೊಡ್ಡವಳು ಆ ಹುಡುಗಿಯ ತಾಯಿಯೇ , ಎರಡಾಳಕ್ಕೆ ಮುಳುಗಿ ನಡುವಿನವಳು ಅವಳ ಅಕ್ಕನೇ, ಮೂರಾಳಕ್ಕೆ ಮುಳುಗಿ ಕೊನೆಯವಳು ನೆರೆಮನೆಯವಳೇ.. ಎಂದು ಹಾಗೇ ನೀರಲ್ಲಿ ಕಣ್ಣುಬಿಟ್ಟು ಹಾಗೇ ತಳದ ಮರಳ ಸವರಿ ಮರಳಿಗೆ ಮೂಗು ತಾಗಿಸಿ ತಿರುಗಿ ಅಂಗಾತನಾಗಿ ಕಣ್ಣ ಮೇಲೆತ್ತಿದರೆ ನದಿಯಲ್ಲೆಲ್ಲಾ ಅವಳ ಸೀರೆಯ ಸೆರಗು ಆಕಾಶದಂತೆ ಹರಡಿತು. ಸೀರೆಯ ಹೂವು ಹೂವಿನಂತೆ, ನಡುವಿನಲ್ಲಿ ಸೂರ್ಯ ಮಿನುಗಿಸಿ ನಗುವ ನಕ್ಕಂತೆ, ಹಾಗೇ ನೀರಲ್ಲಿ ಉಳಿದು ಉಸಿರು ಇನ್ನೂ ಹಿಡಿದು ತೇಲುತ್ತಾ ಮೇಲಕ್ಕೆ ರಬ್ಬರಿನ ಚೆಂಡಿನಂತೆ ಚಿಮ್ಮಿ ತಲೆಯೆತ್ತಿದರೆ ಸೀರೆಯ ಸೆರಗು ಮೈಯನ್ನು ನೀರಿನಂತೆ ಸುತ್ತಿಕೊಂಡಿತು. ಕಣ್ಣ ಮಂಜ ಮಂಜಲ್ಲಿ ಹೆಂಗಸರು ಮೊದಲು ಹಾಗೇ ನೋಡಿ ಆಮೇಲೆ ಕುಹಕಕ್ಕೆ ನಕ್ಕು ಆಮೇಲೆ ಮೂವರು ಪೋಲಿ ಪೋಲಿಯರಂತೆ ನಾಚಿಕೊಂಡು ‘ಹಾ! ಮುಳುಗುತ್ತೀಯಾ ನೀರಿನೊಳಗೆ ಹಾಗೆ! ಪೋಲಿಯಾದವನೇ ಬಾ ಇಲ್ಲಿಗೆ. ನಿನ್ನ ಹಿಡಿದು ಕಟ್ಟಿ ಹಾಕಿ ಹಿಡಿದು ಮೊಣಕಾಲಿಗೆ ಸಿಕ್ಕಿಸಿಕೊಂಡು ಮೀಯಿಸಿ ಬಿಡುತ್ತೇವೆ ಬಾ ಮಗನೇ…. ನಮ್ಮ ಹುಡುಗಿಗೆ ಏನು ಮಾಡಿದೆಯೋ ಅದ ಮಾಡುವಿಯಂತೆ ಬಾ’ ಎಂದು ನಾಚಿಕೊಂಡರು.

ಅವರು ನಾಚಿಕೊಂಡು ಕಲ್ಲು ಪಾರೆಯ ಮೇಲೆ ಆ ಮೂವರು ಕುಕ್ಕರ ಕಾಲಲ್ಲಿ ನನ್ನ ಕಾಯುತ್ತ ಆಅವರ ಮೂವರ ದೇಹವೂ ನನ್ನ ಹಿಡಿದಿಡಲು ಕಾದಂತೆ ಕಂಡಿತು. ಇವರು ಇನ್ನೇನು ನೀರಿಗೆ ಇಳಿದು ನನ್ನ ಅಮುಕಿ ಕೊಲ್ಲುವರೋ ಎಂದು ಹೆದರಿದರೆ, ಆ ಹೆಂಗಸರು ತಮ್ಮ ಸೀರೆಯ ಮಂಡಿಗೆ ಸರಿಸಿ, ಆಮೇಲೆ ಮೊಣಕಾಲಿಗೆ ಸರಿಸಿ, ತಲೆಯಿಂದ ತಟ್ಟದ ಬಟ್ಟೆಯ ತೆಗೆದು ಪಾರೆಯ ಮೇಲಿಟ್ಟು ಮೆಲ್ಲಗೇ ಮೊಣಕಾಲವರೆಗೆ ಕಾಲನ್ನು ನೀರಿಗೆ ಬಿಟ್ಟು ಆಡಿಸುತ್ತಾ, ‘ಬಾ ಮಗನೇ, ಬಾ ಮೀಯಿಸುತ್ತೇವೆ. ನಮ್ಮ ಹುಡುಗಿಗೆ ಏನು ಮಾಡಿ ಬಂದಿದ್ದೀಯಾ ಮಿಡುಕನೇ’ ಅಂತ ಕರೆದರು.

‘ಏ, ಹೆಂಗಸರೇ, ನಾನು ನೀರ ಮೇಲೇರಿ ಬರಲಾರೆ. ಉಟ್ಟಬಟ್ಟೆಯಲ್ಲಿಲ್ಲ ನಾನು. ಬಿಡುತ್ತೀರ ನನ್ನ ಈ ನೀರಿಗೆ. ಹೆಂಗಸರೇ, ನಾನು ನಿಮ್ಮ ಹುಡುಗಿಗೇನೂ ಮಾಡಿಲ್ಲ. ನಾನು ಹುಡುಗ, ಏನೂ ಗೊತ್ತಿಲ್ಲ. ನಾನು ಏನೂ ಮಾಡಿಲ್ಲ.’ ಆಳು ಬಂದಂತೆ ಅತ್ತೆ. ಹೆಂಗಸರು ಬಿಡಲಿಲ್ಲ. ಮೊದಲಿನವಳು ಚಪ್ಪಾಳೆ ಹೊಡೆದು ನಡುವಿನವಳಿಗೆ ‘ಏ ಇವಳೇ, ಆ ಹುಡುಗಿಯ ರವಿಕೆಯ ತೆಗಿ, ತೋರಿಸಿ ಇವನಿಗೆ, ಅಂದರೆ ನಡುವಿನವಳು ಗಂಟಿನಿಂದ ಹುಡುಗಿಯ ರವಿಕೆಯ ತೆಗೆದು ಗಾಳಿಗೆ ಕೊಡವಿ, ನೀರಿಗೆ ಬಿಟ್ಟಳು. ಅದು ಹರಿಯುತ್ತಾ ನನ್ನ ಬಳಿಗೆ ಬಂದು ನಿಂತಂತೆ ನಾನು ಅವುಚಿ ಹಿಡಿದು ಹಾಗೆಯೇ ನಾಚಿಕೊಂಡು ಹಿಡಿದು ನೀರಿಗೆ ಮುಳುಗಿ ಆಳಕ್ಕೆ ಹೋದೆ. ಆಳದಲ್ಲಿ ನನ್ನ ಕೈಯಲ್ಲಿ ಆ ಹುಡುಗಿಯ ರವಿಕೆ, ಕತ್ತಿನ ಸುತ್ತ ಅವಳ ಕಸೂತಿ ನೀರಲ್ಲಿ ಮಿಂಚಿ ಹಾಗೇ ಅದನ್ನು ನೀರ ಒಳಕ್ಕೆ ಕೊಂಡೊಯ್ದ ಹಾಗೇ ಆಳದಲ್ಲಿ ಕಲ್ಲೊಂದರ ಮಾಟೆಯೊಂದರಲ್ಲಿ ಅವಿತಿಟ್ಟು ಹಾಗೇ ತೇಲುತ್ತಾ ಮೇಲಕ್ಕೆ ಬಂದು ‘ಏನೂ ಇಲ್ಲವಲ್ಲಾ ಹೆಂಗಸರೇ’ ಅಂತ ನಕ್ಕೆ.hkh-2.jpg

‘ಏ ಹುಡುಗಾ ಇಷ್ಟು ನೀರು ಕುಡಿದುಂಡು ಉಂಟಾದ ಈ ಹೆಂಗಸರ ಜೊತೆಗೆ ನೀರಾಟ ಆಡುತ್ತೀಯಾ? ಆ ಹುಡುಗಿಯ ರವಿಕೆ ಅವಿತಿಟ್ಟೆಯಾ? ಬಾ ನೀರಿಂದ ಮೇಲಕ್ಕೆ’ ನಡುವಿನವಳು ಮಿಡುಕಿದಳು. ನಾನು ಹೆದರಿ ನಕ್ಕೆ. ‘ಮಾಡೋದು ಮಾಡಿ ನಗುತ್ತೀಯಾ? ನಕ್ಕೋತಿ ಹುಡುಗ! ಬಿಡಿರೇ ಇವನ ನಾನು ನೋಡುತ್ತೇನೆ?’ ಅಂದವಳೇ ಕೊನೆಯವಳು ಅರೆವಯಸ್ಸಿನವಳು ನೀರಿಗೆ ಹಾರಿ ನನ್ನ ಅಟ್ಟಿಸಿಕೊಂಡು ಈಸ ತೊಡಗಿದಳು.

ನಾನು ಹೆದರಿ ಅವಳ ಈಸಾಟಕ್ಕೆ ಹೆದರಿ ನದಿಯ ನಾಲ್ಕು ಕಡೆಗೂ ಈಜಿ ಹರಿದಾಡಲು ನೋಡಿದೆ. ಅವಳು ಬಿಡದೆ, ಉಸಿರು ಬಿಡುತ್ತಾ ಉಟ್ಟ ಬಟ್ಟೆಯಲ್ಲೇ ಈಸುತ್ತಾ, ಬಾಯಿಂದ ಕುಡಿದ ನೀರನ್ನು ಚಿಮ್ಮಿಸಿ ಬಿಡುತ್ತಾ ಕೋಪದಲ್ಲಿ ಅವಳ ಮುಖವು ನೀರಲ್ಲಿ ಕೆಂಪಾಗಿ, ಸೂರ್ಯನಿಗೆ ಅವಳ ಕೆನ್ನೆ ಹೊಳೆದು ಅವಳು ನಾಲ್ಕು ಮೂಲೆಗೂ ಅಟ್ಟಿಸುತ್ತಾ ಮೀನಂತೆ ಬಿಡದೆ ನನ್ನ ಅಟ್ಟಿಸಿಕೊಂಡು ನಾನು ಯಾಕೋ ಹೆದರಿ ನದಿಯ ನಡುವಿನ ಇನ್ನೊಂದು ಬಂಡೆಯೇರಿ ಸುಸ್ತಾಗಿ ಕುಳಿತೆ. ಅವಳೂ ಸುಸ್ತಾಗಿ ನಾ ಏರಿದ ಬಂಡೆಯನೇರಲಾಗದೇ ‘ಏ ಬನ್ನಿರೇ’ ಅಂತ ಅವರ ಕರೆದಳು. (more…)

Tuesday July 10, 2007

ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ

Filed under: ಕತೆ-ಗಿತೆ — Rasheed @ 9:39 pm

[೨೪ ವರ್ಷಗಳ ಹಿಂದಿನ ನನ್ನ ಮೊದಲ ಕಥೆ-ಬರೆದದ್ದು ಯೋಚಿಸಿದರೆ ಜುಂ ಎನ್ನುತ್ತೆ]

 

drwng-a-31.jpg

                                                                         [ಚಿತ್ರಗಳು-ಚರಿತಾ]

ರುಣಾನಿಧಿಯೂ, ಕಾರುಣ್ಯಮಯನೂ ಆದ ಅಲ್ಲಾಹುವು ಮೊತ್ತ ಮೊದಲು ಆದಂಪಾಪಾ ಮತ್ತು ಅವ್ವಾಬೀಬಿ ಎಂಬ ಗಂಡು ಹೆಣ್ಣುಗಳನ್ನು ಸೃಷ್ಟಿಸಿದನು. ಆಮೇಲೆ ಅವರಿಗಾಗಿ ಭೂಮಿಯ ಮೇಲಿನ ಸಕಲ ಚರಾಚರ, ಜೀವಜಂತುಗಳನ್ನೂ, ಪಶುಪಕ್ಷಿಗಳನ್ನೂ, ಗಿಡಮರಗಳನ್ನೂ ಉಂಟು ಮಾಡಿದನು. ಆದರೆ ಹಾರುವ ಈ ಕೆಂಪು ಹೆಲಿಪೆಟ್ಟರನ್ನು ಆತನೇ ಉಂಟು ಮಾಡಿದನೇ…. ಆತ ಎಲ್ಲವನ್ನು ಕಾಣುವವನೂ, ಕೇಳುವವನೂ ಆಗಿದ್ದಾನೆ…. ಹಾಗಾದರೆ ಆ ಸರ್ವಶಕ್ತಿನಿಗೆ ಮೈನಾಡಿನ ರಬ್ಬರ್ ತೋಟದ ಮೇಲೆ ಭರ್ರ್ ಎಂದು ಹಾರಾಡುತ್ತಾ, ತಟಕ್ಕನೇ ತಿರುಗುತ್ತಾ, ಸೂರ್ಯನ ಬೆಳಕಿನಲ್ಲಿ ಮಳೆಬಿಲ್ಲಿನಂತಹ ನೀಲಿ ನೀರನ್ನು ಮರಗಳ ಮೇಲೆ ಬಿಡುತ್ತಿರುವ ಈ ವಿಚಿತ್ರ ಜಂತುವಿನ ವಿಷಯ ಗೊತ್ತೇ ಎಂದು ಆಮಿನಾಬೀಬಿಗೆ ಸಂಶಯ ಉಂಟಾಯಿತು.
ತನ್ನ ಬಾಪಾನಿಗೆ ಶುಕ್ರವಾರದ ಜುಮ್ಮಾನಮಾಜಿಗೆ ಹಾಕಲು ಬೇಕೇ ಬೇಕಾದ ಅವರ ಉದ್ದನೆಯ ನಿಲುವಂಗಿ, ಬಿಳಿಯ ಡಬಲ್ ವೇಸ್ಟಿ ಪಂಚೆ, ಅವರ ರುಮಾಲು, ಒಳಗೆ ಹಾಕುವ ಬಿಳಿಬಿಳಿಯ ಪಟ್ಟೆಯ ಅಂಡರ್ವೇರ್ ಇತ್ಯಾದಿಗಳನ್ನು ಕುಕ್ಕೆಯಲ್ಲಿ ತುಂಬಿಕೊಂಡು ಬಂದು ಮೈನಾಡಿನಲ್ಲಿ ಹರಿಯುವ ಹೊಳೆಯ ಒಂದು ಮೂಲೆಯ ಕಲ್ಲಿನಲ್ಲಿ ಹಾಕಿ ಸೋಪು ಉಜ್ಜುತ್ತಾ ತಟ್ಟನೇ ತನ್ನ ತಲೆಯ ಮೇಲಿಂದಲೇ ಹಾರಿದ ಆ ಕೆಂಪು ಹೆಲಿಪೆಟ್ಟರನ್ನು ಕಂಡು ಬಿಟ್ಟ ಕಣ್ಣು ಬಿಟ್ಟುಕೊಂಡೇ ಯೋಚಿಸತೊಡಗಿದವಳಿಗೆ ತನ್ನ ಬಾಪಾನ ಬಿಳಿ ಬಿಳಿ ವಸ್ತ್ರಗಳ ಮೇಲೆ ಯಾಕೋ ಕೋಪ ಬರತೊಡಗಿ ಬಾಪಾನ ಬಿಳಿಯ ನಿಲುವಂಗಿಯನ್ನು ಕಲ್ಲಿನ ಮೇಲೆ ಕುಕ್ಕಿಬಿಟ್ಟಳು.
‘ಬಾಪಾ, ಬಾಪಾ, ನಾನೂ ಆ ಹೆಲಿಪೆಟ್ಟರನ್ನು ನೋಡಲು ಹೋಗಬಹುದಾ…..’ ಎಂದು ತುಂಬಾ ಚೆನ್ನಾಗಿ ಹೊಕ್ಕುಳ ಬಂದ ರೊಟ್ಟಿಯೊಂದನ್ನು ಬಾಪಾನ ತಟ್ಟೆಗಿಡುತ್ತಾ ಕೇಳಿದಳಿಗೆ ಬಾಪಾ ಅಂದದ್ದೇನು?…. ಆಮಿನಾಳ ಕಣ್ಣುಗಳಲ್ಲಿ ನೀರು ತುಂಬತೊಡಗಿತು. (more…)

Thursday June 14, 2007

ಮಣ್ಣಾಂಗಟ್ಟಿ – ಒಂದು ಸಣ್ಣ ಕಥೆ

Filed under: ಕತೆ-ಗಿತೆ — Rasheed @ 12:11 am

chitra-6_a.jpg 

[ಚಿತ್ರಗಳು:ಚರಿತಾ]

ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು.

 ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ ಕಾಲಿನ ಉಗುರುಗಳನ್ನು ಕೀಳುತ್ತಾ ನೆಲಕ್ಕೆ ಉಗಿಯುತ್ತಾ ಕುಳಿತಿದ್ದ.chitra-5_a1.jpg ಸಿಕ್ಕಿದಕ್ಕೆಲ್ಲ ಸುಮ್ಮನೆ `ಮಣ್ಣಾಂಗಟ್ಟಿ’ ಎಂದು ಬೈದು ನೆಲಕ್ಕೆ ಕ್ಯಾಕರಿಸಿಉಗಿಯುವ ಇಸುಬುವಿನ ಹೋಟೆಲ್ಲು ಮೈಯೆಲ್ಲ ಸುಟ್ಟುಕೊಂಡು ಸರ್ವನಾಶವಾಗಿ ಹೋಗಿ ನೋಡುವವರಿಗೆ ತಮಾಶೆಯಾಗಿ ಕಾಣಿಸುತ್ತಿತ್ತು.

 ಅತ್ತಕಡೆ ಕೂಜಿಮಲೆ,ಇತ್ತಕಡೆ ಏಲಕ್ಕಿಮಲೆ,ಮುಂದುಗಡೆ ಎತ್ತರಕ್ಕೆ ಈರುಳ್ಳಿಮಲೆ, ಎಡಕ್ಕೆ ರಸ್ತೆಯನ್ನೇ ಸವರಿಕೊಂಡು ಸದಾಕಾಲವೂ ಮೈಕುಲುಕಿಕೊಂಡು ಹರಿಯುವ ಬೆಣ್ಣೆ ಹಳ್ಳದ ನೀರು…. ಈ ಎಲ್ಲ ದೈವಲೀಲೆಯ ನಡುವೆ ಕಪ್ಪು ಕುರುವಿನಂತೆ ಕರಕಲಾಗಿ ಎದ್ದು ನಿಂತಿರುವ ಇಸುಬುವಿನ ತಟ್ಟಿಹೋಟೆಲ್ಲು….. ವಿಕಾರವೂ, ಅನಗತ್ಯ ತಮಾಶೆಯೂ, ಕೊಂಚ ಹೆಚ್ಚೇ ಸೌಂಧರ್ಯವೂ ತುಂಬಿಕೊಂಡಿರುವ ಈ ಜಗತ್ತು….. 

 ದೇವರ ಕೊಲ್ಲಿ ಎಂಬ ಈ ಸುಂದರವೂ ನಿಗೂಢವೂ ನಿತ್ಯ ದುಃಖ್ಖಿಸುತ್ತಿರುವ ಸುಂದರಿಯಂತೆಯೂ ಇರುವ  ತಿರುವಿನಲ್ಲಿ ಬೈಕು ನಿಲ್ಲಿಸಿಕೊಂಡು ಈ ಇಸುಬುವಿಗೆ ಇಂತಹ ಆಪತ್ತಿನ ಕಾಲದಲ್ಲಿ ಏನು ದೈರ್ಯ ತುಂಬುವುದು ಹೇಗೆ ದೈರ್ಯ ತುಂಬುವುದು ಎಂದು ಎಂದಿನಂತೆ ಹಣೆ ನಿರಿಗೆ ಮಾಡಿಕೊಂಡು ಯೋಚಿಸುತ್ತಿದ್ದೆ.  (more…)

Wednesday May 30, 2007

ಒಂದು ಪುರಾತನ ಪ್ರೇಮ- ಒಂದು ಸಣ್ಣ ಕಥೆ.

Filed under: ಕತೆ-ಗಿತೆ — Rasheed @ 5:33 pm

 drawing4.jpg

                                                                                    [ರೇಖಾ ಚಿತ್ರಗಳು:ಚರಿತಾ] 

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು  ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ.  

ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ ದೇಶದಕಡೆಗೆ ಹೋಗುವ ಕೊನೆಯ ಬಸ್ಸಿಗಾಗಿ ಕಾದು ನಿಂತಿರುವ ಕ್ರೈಸ್ತಕನ್ಯಾಸ್ತ್ರೀಯರು, ಬೆಳ್ಳನೆಯ ಮುಂಡಾಸು ಸುತ್ತಿಕೊಂಡ ಮುಸ್ಲಿಂ  ಮತಪಂಡಿತ ಮಕ್ಕಳು. ವಾಂತಿ ಮಾಡಿಕೊಂಡು ಸುಸ್ತಾಗಿ ಬಸ್ಸೊಳಗೆ ತಮ್ಮತಮ್ಮ ಗಂಡಂದಿರ ಎದೆಗೆ ಒರಗಿ ನಿದ್ರಿಸುತ್ತಿರುವ ಎಳೆಯ ಪತ್ನಿಯರು….ಕುಡಿದು ಹೆಗಲಿಗೆ ಹೆಗಲು ಕೋಸಿಕೊಂಡು ಮಳೆಯಲ್ಲಿ ಸಿಳ್ಳೆ ಹೊಡೆದು ಕೊಂಡು ನಡೆದು ಹೋಗುತ್ತಿರುವ ಗೆಣೆಕಾರರು…

ಸಂಜೆ ವೀರಾಜಪೇಟೆಯಲ್ಲಿ ,ಆ ಕೆಸರು ಮಳೆ ಮನುಷ್ಯವಾಸನೆಗಳ ನಡುವೆ ಕೊಡೆ ಹಿಡಿದು ಕೊಂಡಿದ್ದ ನನಗೆ ಯಾಕೋ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ.ಅದು ಡಿಸೆಂಬ್ ತಿಂಗಳ ಕೊನೆಯ ವಾರ.ಆದರೂ ಚಿರಿಚಿರಿ ಮಳೆ. ಅದು ರಂಜಾನ್  ತಿಂಗಳ ಕೊನೆಯ ದಿನಗಳು.ದಿನವಿಡೀ ಉಪವಾಸ ಹಿಡಿದ ಮುಸಲ್ಮಾನ ಭಾಂದವರು ಸಂಜೆ ಇನ್ನೇನು ಉಪವಾಸ ಮುಗಿಸಲು ಕಾಯುತ್ತಿದ್ದರು. ಹಾಗಾಗಿ ಒಂದು ತರಹದ ಧಾರ್ಮಿಕ ಹಸಿವೋ ಹಠ ವೋ ಅವರ ಮುಖದಲ್ಲಿತ್ತು. ಕ್ರಿಸ್ಮಸ್ ಗೆ ಇನ್ನು ಎರಡೇ ದಿನಗಳಿತ್ತು. ಕನ್ಯಾಶ್ರಮಗಳಿಂದ ಅನುಮತಿ ಪಡೆದು ತಮ್ಮ ಕುಟುಂಬ ವನ್ನು ಕಾಣಲು ಹೊರಟ ಕನ್ಯಾಸ್ತ್ರೀಯರ ಮುಖಗಳಲ್ಲಿ ಅಷ್ಟೇನೂ ಉಲ್ಲಾಸ ಕಾಣಿಸುತ್ತಿರಲಿಲ್ಲ.ಕಾಪಿಗೆ ಬೆಲೆಯಿಲ್ಲದೆ ಶುಂಠಿಗೆ ಬೆಲೆಯಿಲ್ಲದೆ ಅವೆರಡಕ್ಕೆ ಬೆಲೆಯಿಲ್ಲದಿದ್ದರೆ ಬೇರೆ ಏತಕ್ಕೂ ಬೆಲೆಕೊಡದ ಕೊಡಗಿನ ಬೆಳೆಗಾರರ ಮುಖಗಳೂ ಆಸಕ್ತಿ ಹುಟ್ಟಿಸುವಂತಿರಲಿಲ್ಲ.

  drawing1.jpgಸುಮ್ಮನೆ ಹತ್ತಬೇಕಿದ್ದ ಬಸ್ಸುಗಳನ್ನೆಲ್ಲ ತಪ್ಪಿಸಿಕೊಳ್ಳುತ್ತ ಎಲ್ಲಿಗಾದರೂ ಯಾಕಾದರೂ ಹೋಗಬೇಕು ಎಂದುಕೊಳ್ಳುತ್ತ ನಿಂತಿದ್ದವನ ಮುಂದೆ ಅವರಿಬ್ಬರು ಗಾಳಿಗೆ ಸಿಕ್ಕಿದ ಒಣ ಎಲೆಗಳಂತೆ ನಡೆದು ಬರುತ್ತಿದ್ದರು.ಮುಂದೆ ಮೌಲಾನ್ ಕುಟ್ಟಿ ಕಾಕಾ ಎಂಬ ಮುದುಕ ಮತ್ತು ಅವರ ಹಿಂದೆ ಪಾತುಂಞೆ ಎಂಬ ಸುಂದರಿ ಮುದುಕಿ… ಎಷ್ಟೋಕಾಲದ ನಂತರ ಇಬ್ಬರು ಮರಣದ ನಂತರವೇ ಒಂದಾಗಿರುವರೋ ಎಂಬಂತೆ ಆ ಮಂಜು ಮಳೆ ಗಾಳಿಯ ನಡುವೆ ನಡೆದು ಬರುತ್ತಿದ್ದರು. ಪಾತುಂಞೆ ತಾತಾಳ ಇತಿಹಾಸ ಪ್ರಸಿದ್ಧ ಬೆಳ್ಳಗಿನ ಬಣ್ಣ ಮತ್ತು ಅವಳ ತುಟಿಯಮೇಲಿದ್ದ ಕಪ್ಪಗಿನ ಕೆಡು ಮತ್ತು ಅದರ ಮೇಲೆ ಬೆಳೆದಿದ್ದ ಕಪ್ಪಗಿನ ಕೂದಲು ಈಗ ವಯಸ್ಸಾಗಿದ್ದರಿಂದ ಮಾತ್ರ ಬೆಳ್ಳಗಾಗಿ ಬಿಟ್ಟಿತ್ತು.ಇಲ್ಲದಿದ್ದರೆ ಮುದುಕಿ ಇನ್ನೂ ಸುಂದರಿಯಾಗಿಯೇ ಉಳಿದಿದ್ದಳು.ಮೌಲಾನ್ ಕುಟ್ಟಿ ಕಾಕಾ ಮಾತ್ರ ಕೊಂಚ ತಲೆ ಕೆಟ್ಟವರಂತೆ ಕಾಣಿಸುತ್ತಿದ್ದರು. ಕಾಲಲ್ಲಿರಬೇಕಾದ ರಬ್ಬರಿನ ಚಪ್ಪಲಿಗಳನ್ನು ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಕೊಂಡು ಓಲಾಡಿಕೊಂಡು ನಡೆಯುತ್ತಿದ್ದರು.ಅವರ ಬಿಳಿ ಪಂಚೆ ಗಾಳಿ ಮಳೆ ಕೆಸರುಮಣ್ಣಿಗೆ ಸಿಲುಕಿ ಯಾವುದೋ ಬಣ್ಣ ಪಡೆದಿತ್ತು. ಎಲೆ ಅಡಿಕೆಯ ಜೊಲ್ಲು ಬಾಯಿಂದ ಇಳಿದು ಗಡ್ಡಕ್ಕೆ ಸೇರುತ್ತಿತ್ತು..ಬಾಯಲ್ಲಿ ಯಾವಾಗಲೋ ಆರಿಹೋಗಿದ್ದ ಮೋಟು ಬೀಡಿ.ಮುದುಕ ಗಾಳಿಗೆ ಸಿಕ್ಕಿ ಆರಲು ಹೊರಟ ಮೋಂಬತ್ತಿಯಂತೆ ನಡೆದಾಡುತ್ತಿದ್ದ. ಅವರ ಹಿಂದೆ ಕೊಂಚ ಸ್ತಿರವಾಗಿ ಪಾತುಂಞೆ ತಾತಾ ನಡೆದು ಬರುತ್ತಿದ್ದಳು .ಮುದುಕಿಯ ಮುಖದಲ್ಲಿ ಎಂತಹದೋ ಉಲ್ಲಾಸ ಕಂಡು ಬರುತ್ತಿತ್ತು. (more…)

Friday April 27, 2007

‘ಬೀಜ’-ಒಂದು ಹಳೆಯ ಸಣ್ಣ ಕಥೆ

Filed under: ಕತೆ-ಗಿತೆ — Rasheed @ 8:28 am

ಬೀಜ

ಬಂಗಲೆಯೋ ಗೂಡಂಗಡಿಯೋ  ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ.ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ.ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ  ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ ನಿಕಟ ಸಂಬಂಧ ಇದೆ ಎನ್ನುವುದನ್ನು ಮಾರ್ಕ್ಸ್‌ವಾದದ ಹಿನ್ನೆಲೆಯಿಟ್ಟುಕೊಂಡು ಸವಿವರವಾಗಿ ಬರೆದಿದ್ದ.

ಅವನ ನಾಲ್ಕೈದು ಪುಟಗಳ ಪತ್ರದ ಒಂದು ಮೂಲೆಯಲ್ಲಿ ಒಂದಿಷ್ಟು ಜಾಗಮಾಡಿಕೊಂಡು ಅವನ ಸಂಗಾತಿಯೂ ಧರ್ಮಪತ್ನಿಯೂ ಆದ ದಾಕ್ಷಾಯಿಣಿ ನನಗೆ ಕೆಂಪು ಸಲಾಂ ತಿಳಿಸಿದ್ದಳು.ಜೊತೆಗೆ ಸಾಧ್ಯವಾಷ್ಟು ಬೇಗ ನಾನು ಅವರಿಬ್ಬರನ್ನು ಬಂದು ಕಾಣಬೇಕೆಂದೂ ಕೊಡಗಿನ ಈ ಕಾಡಿನೊಳಗಡೆ ತನಗೆ ದಿಕ್ಕು ತೋಚದಾಗಿದೆಯೆಂದೂ ಕೊಡಗಿನ ಕಾಡುಕುರುಬರನ್ನೂ, ಜೇನುಕುರುಬರನ್ನೂ, ಯರವರನ್ನೂ ಸಂಘಟಿಸಬೇಕೆಂದು ಹೊರಟಿದ್ದ ತಾವಿಬ್ಬರು ಈಗ ಅನಿವಾರ್ಯವಾಗಿ ಮಲಯಾಳಿಗಳ ಜೊತೆಗೂ ಮಾಪಿಳ್ಳೆಗಳ ಜೊತೆಗೂ ಕಾದಾಟ ಮಾಡಬೇಕಾಗಿದೆಯೆಂದೂ ಜೊತೆಗೆ ಇತ್ತೀಚೆಗೆ ಸಾವಯವ ಅಜ್ಜ ಎಂಬ ಸಹಜ ಕೃಷಿ ಮಾಡುವ ಮುದುಕನೊಬ್ಬ ಘಟ್ಟದ ಕೆಳಗಿನಿಂದ ಬಂದು ತಮ್ಮೊಡನೆ ಸೇರಿಕೊಂಡಿರುವುದಾಗಿಯೂ ವೈಜ್ನಾನಿಕವಾಗಿ ಆಲೋಚಿಸುವ ತನಗೆ ಈ ಸಾವಯವ ಅಜ್ಜನ ವರ್ತನೆ ವಿZತ್ರವಾಗಿ ತೋರುತ್ತಿರುವುದಾಗಿಯೂ ಈ ಅeನ ಜೊತೆ ಸೇರಿಕೊಂಡು ಮಂದuನೂ ವಿಚಿತ್ರವಾಗಿ ಆಡಲು ತೊಡಗಿರುವನೆಂದೂ ನಾನು ಒಮ್ಮೆಹೋಗಿ ಅವರನ್ನೆಲ್ಲ ನೋಡಬೇಕೆಂತಲೂ ಬರೆದಿದ್ದಳು

ಈಗ ನಾನು ಬಂದು ನೋಡಿದರೆ ಗೇಟಿಗೆ ಎಂದು ಕಟ್ಟಿದ್ದ ರಾಕ್ಷಸ ಗಾತ್ರದ  ಸಿಮೆಂಟ್ ಕಂಬಗಳ ನಡುವೆ ಗೇಟೇ ಇಲ್ಲದೆ ನಾಲ್ಕೈದು ಬಿದಿರು ಗಳಗಳನ್ನು ಉದ್ದಕ್ಕೆ ಎಳೆದು ಗೇಟಿನಂತೆ ಮಾಡಿಕೊಂಡು, ಗೇಟಿನ ಪಕ್ಕದಲ್ಲಿ ಮುಳ್ಳು ತಂತಿಗಳನ್ನು ಕಿತ್ತು ಗೂಡಂಗಡಿಗೆ ಬಂದು ಹೋಗುವವರಿಗೆ ದಾರಿ ಮಾಡಿಕೊಟ್ಟು,ಮನೆಯ ದೊಡ್ಡ ಬಾಗಿಲುಗಳಿಗೆ ದಾಕ್ಷಾಯಿಣಿಯ ಹಳೆಯ ಸೀರೆಯೊಂದನ್ನು ಪರದೆಯಂತೆ ಕಟ್ಟಿ, ಮನೆಯ ಎದುರಿನ ಆಪೀಸು ಕೋಣೆಯನ್ನು ಗೂಡಂಗಡಿಯಂತೆ ಮಾಡಿಕೊಂಡು ಮಂದಣ್ಣ ಮಲಯಾಳಿ ಪಂಚೆಯೊಂದನ್ನು ಮೊಣಕಾಲವರೆಗೆ ಎತ್ತಿಕಟ್ಟಿಕೊಂಡು ತನ್ನ  ಎಂದಿನ ಪರಿಹಾಸ್ಯದ ನಗುವನ್ನು ಮುಖದ ತುಂಬ ಸೂಸಿಕೊಂಡು ಇನ್ನೇನು ಶಿಕ್ಷೆಗೊಳಗಾಗಬೇಕಾದ ಬಾಲಕನ ಹಾಗೆ ದಾಕ್ಷಾಯಿಣಿಯ ಮುಖವನ್ನೊಮ್ಮೆ ನೋಡಿ ನನ್ನ ಸ್ವಾಗತಿಸಲು ಬಂದ. (more…)

Blog at WordPress.com.