ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

 
 

-೧-
ನೀರೊಳಗೆ ತಿರುಗುತ್ತಿದೆ ನೀರ ಗಾಲಿ,
ತಾರೆ ತಿರುಗುತ್ತಿದೆ ಚಂದ್ರನೊಡನೆ.
ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ
 ಇಷ್ಟೊಂದು ಬೆಳಕು ಇಲ್ಲಿ !

ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ

ನನ್ನ ತೀರಾ ಹತ್ತಿರದ ಗೆಳೆಯನ ತಂದೆ ಇಂದು ಮುಂಜಾನೆ ತೀರಿ ಹೋದರು.ಒಂದು ವಾರದ ಹಿಂದೆ ನನ್ನ ಮಾವ ತೀರಿ ಹೋದರು.ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಇಬ್ಬರೂ ಅವರವರ ರೀತಿಯಲ್ಲಿ ಬೆರಗು ಹುಟ್ಟಿಸುವಷ್ಟು ಸಮರ್ಥರಾಗಿದ್ದರುಎರಡು ಮೂರು ದಿನಗಳ ಹಿಂದೆ ನನ್ನ ಗೆಳೆಯ Dylan Thomas ಬರೆದ ಈ ಕವಿತೆಯನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದ. ಅದನ್ನು ಈಗ ಕೂತು ಕನ್ನಡಕ್ಕೆ ಅನುವಾದಿಸಿರುವೆ.  ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ

ಪುಟ್ಟ ಮೂರು ರೂಮಿ ಕವಿತೆಗಳು

 
[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]

ಹಾಫಿಝನ ಒಂದು ಕವಿತೆ

ಅಷ್ಟೊಂದು ಅರಿತೆ
ಅರಿತೆ
ಅಷ್ಟೊಂದು
ಪಡೆದವನಿಂದ
ಇನ್ನು ನನ್ನ ನಾ
ಅರಿಯೆ
ಕ್ರೈಸ್ತ, ಹಿಂದು,ಮುಸಲ್ಮಾನ
ಬೌದ್ಧ, ಯಹೂದ್ಯ ಏನೆಂದೂ.
ಸತ್ಯ ಅಷ್ಟೊಂದು
ಹಂಚಿಕೊಡಿತು ಒಳಗೆ
ಇನ್ನು ಕರೆಯಲಾರೆ ಎನ್ನ
ಗಂಡೆಂದು,ಹೆಣ್ಣೆಂದು,ಜಿನ್ನೆಂದು
ಅಥವಾ ಬರಿಯ
ಆತ್ಮವೆಂದೂ.
 
ಪ್ರೇಮವೆಂಬುದು ಅಷ್ಟೊಂದು
 ಹಚ್ಚಿಕೊಂಡಿದೆ ಹಫೀಝನನ್ನು
ಅದು ಬೂದಿಯಾಗಿದೆ ನಾನು
ನಿರ್ಬಂಧಿ
ಸಕಲ ತತ್ವಗಳಿಂದ,ಪ್ರತಿಮೆಗಳಿಂದ
ಇದುವರೆಗೆ ಅರಿತದ್ದರಿಂದ.            
         
                                   

ಫ್ರೆಡರಿಕೋ ಗಾರ್ಸಿಯಾ ಲೋರ್ಕಾನ ಒಂದು ಕವಿತೆ

 ಒಂದು ಅಳಲು
 

ಬಿಡದಿರು ನನ್ನ ಕಳೆದು ಕೊಳ್ಳಲು ಯಾವತ್ತೂ ನಿನ್ನ
ಕಡೆದ ಕಲ್ಲಿನಂತಹ ನಿನ್ನ ಕಣ್ಣ ಅಚ್ಚರಿಯನ್ನ
ಇರುಳು ಕೆನ್ನೆಗೆ ಒತ್ತುವ ಒಂದು ಹೂವಂತಹ
ನಿನ್ನ ಉಸಿರ ಸುಯಿಲನ್ನ.
ಹೆದರಿಕೆ ಇರಲುಇಲ್ಲಿ ಈ ತೀರದಲ್ಲಿ.
ಕವಲೇ ಇರದ ಕಾಂಡದಂತೆ.ಅದಕ್ಕಿಂತಲೂ ಬೇಸರ
ಹೂವೇ ಇರದಿರುವುದು,ತಿರುಳು,ಆವೆಭೂಮಿ
ನನ್ನ ನರಳುವಿಕೆಯ ಎರೆ ಹರಿದಾಡಲು
ನೀ ನನ್ನ ಅವಿತಿರುವ ನಿಧಿ, ನನ್ನ ಶಿಲುಬೆ
ಹೆಪ್ಪುಗಟ್ಟಿದ ತಳಮಳ
ನಾನು ಸಾಕುನಾಯಿ .ನೀನು ಮಾತ್ರ ಧಣಿ
ಬಿಡದಿರು ಪಡೆದ ಈ ಎಲ್ಲವ ಕಳಕೊಳ್ಳಲು
ನದಿಯ ನಿನ್ನ ಕವಲುಗಳನ್ನು ಕಳೆದ ನನ್ನ
ಶರತ್ತಿನ ಎಲೆಗಳಿಂದ ಪೋಣಿಸಿಕೋ.
 

ರಿಲ್ಕ್ ಕವಿಯ ಇನ್ನೊಂದು ಸುನೀತ

ಬೆಳೆಯುವವಳು
 
ಎಲ್ಲವೂ ನಿಂತವು ಅವಳ ಎದುರಲ್ಲಿ ಲೋಕದಂತೆ.
ನಿಂತವು ಎಲ್ಲವೂ ಅವಳ ಎದುರಲ್ಲಿ ಎಲ್ಲ ಕರುಣೆ ಭಯಗಳ ಜೊತೆ
ಮರಗಳು ನಿಂತುಕೊಳುವಂತೆ. ನೇರ ಬೆಳೆದೂ ರೂಪವಿಲ್ಲದೆಯೂ
ಪೂರಾ ರೂಪದಂತೆ,ಧೈವದಂತೆ,ಲೋಕಕ್ಕೇ ಆಣತಿಯಂತೆ.
ಅವಳು ತಾಳಿಕೊಂಡಳು ಎಲ್ಲವ ಒಳಗೊಳಗೆ.
ಹಕ್ಕಿಯಂತೆ, ಹಾರುವಂತೆ ದೂರ
ಅರಿಯಲಾರದ ಎಲ್ಲವ ,ಇನ್ನೂ ಅರಿಯಬೇಕಾದವ,
ತಣ್ಣಗೆ ತುಂಬು ನೀರಕೊಡವ ಹೊತ್ತ ಹೆಂಗಸಂತೆ.
ಆಟದ ನಡುವೆ ಬದಲುಗೊಳ್ಳುತ್ತ, ಮುಂದಿನದಕೆಲ್ಲ
ಅಣಿಯಾಗುತ್ತಾ.
ಬೆಳ್ಳಗಿನ ಮೊದಲ ತೆರೆ ಬಿತ್ತು ಮೆಲ್ಲಗೆ ತೇಲುತ್ತ
ಅವಳ ತೆರೆದ ಮುಖಕ್ಕೆ,ಏನೂ ಕಾಣಿಸದಂತೆ
ಮತ್ತೆಂದೂ ಎತ್ತಿಕೊಳದಂತೆ , ಅವಳು ಕೇಳಿದ್ದಕ್ಕೆಲ್ಲಾ
ಒಂದೇ ಉತ್ತರದಂತೆ
‘ಮಗುವಾಗಿದ್ದವಳೇ ಎಲ್ಲ ನಿನ್ನಲ್ಲೇ …ನಿನ್ನಲ್ಲೇ’

ರೈನರ್ ಮರಿಯಾ ರಿಲ್ಕನ ಒಂದು ಸುನೀತ

 
ಶರತ್ತಿನ ಒಂದು ದಿನ
 
ಪ್ರಭುವೇ, ಇದೀಗ ಸಮಯ:
ಕಳೆಯುತ್ತಿದೆ ಬೇಸಗೆಯ ಹೊತ್ತು;
ನಿನ್ನ ನೆರಳಿಂದ ಸೂರ್ಯನ ಕಣ್ಣಾಲಿಗಳನ್ನು ಮುಚ್ಚು.
ಹಸಿರ ಬಯಲುಗಳಲ್ಲಿ ಗಾಳಿ ತೇಲಿಹೋಗಲು ಅನುವು ಮಾಡಿಕೊಡು,
ಹಣ್ಣುಗಳನ್ನು ತುಂಬಿಕೊಳ್ಳಲು ಹೇಳು ಮರಗಳಲ್ಲಿ,ಬಳ್ಳಿಗಳಲ್ಲಿ
ಅವುಗಳಿಗಿನ್ನೂ ಕೊಂಚ ಬೆಚ್ಚನೆಯ ಸ್ವಚ್ಚ ಹಗಲುಗಳನ್ನು ದಯಪಾಲಿಸು.
ಹೇಳು ಮೈ ತುಂಬಿಕೊಳ್ಳಲು, ಹಿಂಡಿ ಇಳಿಸು ಸಿಹಿಯನ್ನು
ಅವುಗಳೊಳಗೆ.
ಈ ಹೊತ್ತು ಇರಲು ನೆಲೆ ಯಾರಿಗಿಲ್ಲವೋ ಇನ್ನು ಎಂದೂ ಇರುವುದಿಲ್ಲ
ಈಗ ಒಂಟಿಯಾದವನು ಇನ್ನೆಂದಿಗೂ ಒಂಟಿ
ಕೂರುವನು,ಓದುವನು, ದೀರ್ಘ ಪತ್ರಗಳ ಬರೆಯುವನು ಸಂಜೆಯೆಲ್ಲಾ
ಸಾಲುಮರಗಳ ದಾರಿಯಲಿ ನಡೆಯುವನು ಒಣ
ಎಲೆಗಳು ಹಾರುವವು ವ್ಯಗ್ರವಾಗಿ.

ಪುಷ್ಕಿನ್ ಮಹಾಕವಿಯ ಒಂದು ಪುಟ್ಟ ಕವಿತೆ

ಒಮ್ಮೆ ನಿನ್ನ ಮೋಹಿಸಿದ್ದೆ..

ಒಮ್ಮೆ ನಿನ್ನ ಮೋಹಿಸಿದ್ದೆ,ಇನ್ನು ಸುಮ್ಮನಿರದು ನನ್ನೆದೆ
ಅನಿಸುವುದು ಈ ಮೋಹ, ಇನ್ನೂ ಸುಳಿಯುತ್ತಿರುವುದು,
ಆದರೆ ಕಾಡದಿರಲಿ ಇದು ಇನ್ನು ನಿನ್ನ ಸುಮ್ಮನೆ.
ಗೆಳತಿ, ಒಂದಿನಿತೂ ನೋಯಿಸದಿರಲು ನೋಡುವೆ.
ಮೋಹಿಸಿದ್ದೆ ಆಸೆ ಪಡದೆ, ಎಷ್ಟೊಂದು ಕದ್ದು ಮುಚ್ಚಿ
ಎಂತ ಹೊಟ್ಟೆಯುರಿ,ಎಂತ ನಿರ್ಲಜ್ಜ!, ಏನೆಲ್ಲ ಉಂಡೆ.
ಇಷ್ಟು ಆಳದ ,ನಿಜದ ,ಇಷ್ಟು ಕೋಮಲ ಮೋಹ
ಸಿಗಲಿ ಇನ್ನೊಮ್ಮೆ ನಿನಗೆ.
 ಆ ಪಡೆದವನು ಕೊಡುವುದಾದರೆ…..
 

ಮೌಲಾನಾ ರೂಮಿಯ ಇನ್ನೊಂದು ಕವಿತೆ

ಪ್ರಿಯೆ ಹಾಗಿರು ನನಗೆ
 

ಪ್ರೀತಿಯ ಒಡನೆ ಆಡುವ ಉರಿ
ಪ್ರಿಯೆ ಹಾಗಿರು ನನಗೆ
ಬೆಂಕಿಯ ಒಳಗೂ ಉರಿಯುವ ಬಿಸಿ
ಪ್ರಿಯೆ ಹಾಗಿರು ನನಗೆ
ಉರಿದು ತೀರುವ ಬಯಕೆಯ ಬತ್ತಿ
ಕಣ್ಣ ಮೇಣದ ಹನಿಯ ಅಳು
ಕರಗಿ ಹರಿವ ಕುಡಿ
ಪ್ರಿಯೆ ಹಾಗಿರು ನನಗೆ
ಈಗ ಪ್ರೀತಿಯ ಹಾದಿ ನಾವು ಸೇರಿ
ಇನ್ನು ಕತ್ತಲು ಬರದು ನಿದ್ದೆ ನಮಗೆ
ಈ ಹೆಂಡ ಪಡ ಶಾಲೆ ದುಡಿಯ ದೋಲು
ಪ್ರಿಯೆ ಹಾಗಿರು ನನಗೆ
ಇರುಳು ಕತ್ತಲು ಪ್ರೇಮಿಗಳು ಕಣ್ಣು ಮುಚ್ಚರು
ಈ ನಿದ್ದೆ ಯೋಚನೆ ಕಂಗೆಡಿಸದಿರಲಿ ಅವರನ್ನು
ಅವರು ಬಯಸುವುದು ಬರೆಯ ನಮ್ಮಜೊತೆ
ಪ್ರಿಯೆ ನೀನೂ ಹಾಗಿರು ನನಗೆ
ಕೂಡುವುದು ಕುದಿವ ನದಿ ಕಡಲತ್ತ [...]

ಎಜ್ರಾ ಪೌಂಡನ ಒಂದು ಕವಿತೆ

 ಫ್ರಾನ್ಸೆಸ್ಕಾ
 

ನೀ ಇರುಳಿಂದ ಹೊರಬರುತ್ತಿದ್ದೆ.
 ಆಗ ನಿನ್ನ ಕೈಗಳಲ್ಲಿ ಹೂವುಗಳಿರುತ್ತಿತು .
ಈಗ ಬರುತ್ತೀಯ ಹೊರಕ್ಕೆ
ಮಂದಿಯ ಗೊಂದಲಗಳಿಂದ,
ನಿನ್ನಕುರಿತ ಬೇಕಾಬಿಟ್ಟಿ ಮಾತುಗಳಿಂದ
ಬರೆಯ ಸರಳ ಸಂಗತಿಗಳ ಸುತ್ತ ನಿನ್ನ ಕಂಡವನು ನಾನು
ಈಗ ಉರಿಯುತ್ತದೆ ಮೈ.
 ಮಂದಿ  ನಿನ್ನ ಹೆಸರ ಸಾದಾ ಎಡೆಗಳಲ್ಲೂ ಎತ್ತುವಾಗ
ಈ ನೆತ್ತಿಯ ಮೇಲೆ ತಣ್ಣನೆ ಗಾಳಿಯಾಡುವಂತಿದ್ದರೆ ಸಣ್ಣಗೆ
ಎಲ್ಲ ಸತ್ತ ಎಲೆಯಹಾಗೆ ಒಣಗುವಂತಿದ್ದರೆ
ಎಲ್ಲ ಸಾಸುವೆಯ ಬೀಜಗಳಂತೆ ಕೊಚ್ಚಿ ಹೋಗುತ್ತಿದ್ದರೆ
ನಿನ್ನನ್ನೊಮ್ಮೆ ನೋಡಬಹುದಿತ್ತು
ಒಬ್ಬಳನ್ನೇ…….
 

ಟಿ.ಎಸ್.ಎಲಿಯಟ್ಟನ ಪ್ರೂಫ್ರಾಕ್ ಕವಿತೆಯ ಕೆಲವು ಸಾಲುಗಳು

 
ಬಾ ಮತ್ತೆ ಹೋಗೋಣು ,ನಾ ಮತ್ತೆ ನೀನು,
ಸಂಜೆ ಆಕಾಶಕ್ಕೆದುರು ರಾಚಿ
ಆಸ್ಪತ್ರೆ ಮೇಜಿಗಾನಿಸಿ ಮಲಗಿಸಿದ ರೋಗಿ;
ಬಾ ಹೋಗೋಣು, ಅರೆಬರೆಖಾಲಿ ಹಾದಿಗಳಲ್ಲಿ,
ಗೊಣಗುವ ತಾಣಗಳಲ್ಲಿ,
ನೆಮ್ಮದಿಗೆಟ್ಟ ಒಂದುರಾತ್ರಿಯ ಅಗ್ಗ ಹೋಟೆಲ್ಲುಗಳಲ್ಲಿ
ಮೀನಬಡಿಸುವ ದೂಳು ತುಂಬಿದ  ರೆಸ್ಟಾರೆಂಟುಗಳಲ್ಲಿ:
ಬೀದಿಗಳಲ್ಲಿ ,ನೆಮ್ಮದಿಗೊಡದ ವಾದಗಳಲ್ಲಿ,ಹಿಂದೇ ಬರುವ
ಕುಹಕ ಹಾದಿಗಳಲ್ಲಿ.
ನಿಲ್ಲಿಸಲು ನಿನ್ನನ್ನೊಂದು ಗಹನ ಪ್ರಶ್ನೆಯ ಎದುರು..
ಓ,ಕೇಳದಿರು`ಅದೇನು?ಎಂದು.
ಹೋಗೋಣ, ಹೋಗುವುದ ಮಾಡೋಣ.
ರೂಮಿನಲಿ ಹೆಂಗಸರು ಬಂದು ಹೋಗುವರು
ಉಲಿಯುತ್ತ ಮೈಕೆಲೇಂಜೆಲೋ ಎಂದು
ಹಳದಿ ಕಾವಳ ಕಿಟಕಿಗಾಜಿಗೆ ತನ್ನ ಬೆನ್ನ ಉಜ್ಜಿ
ಹಳದಿ ಹೊಗೆ ಕಿಟಕಿಗಾಜಿಗೆ ತನ್ನ ಮೂತಿಯ ಒರಸಿ
ಸಂಜೆಗಾಲದ ಮೂಲೆಮೂಲೆಗೆ ನಾಲಗೆ ನಕ್ಕಿ,
ನಿಂತರಾಡಿಯನೀರಿಗೆತಾನೂ ತುಸು ತಡೆದು ನಿಂತು
ಚಿಮಣಿಮಸಿಇಜ್ಜಲು ತನ್ನ ಬೆನ್ನಿಗೆಬೀಳಲು ಬಿಟ್ಟು
ಓಡಿಂದಜಾರಿ,ತಟ್ಟನೇಜಿಗಿದು,
 ಮತ್ತೆ ಇದು [...]

ನಯೀಭ್ ಮೆಹಫೂಝನ ಆತ್ಮ ಕಥೆಯ ಕೆಲವು ಕಬಾಬ್ ತುಂಡುಗಳು

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೀರಿಕೊಂಡ ಈಜಿಪ್ಟ್ ಧೇಶದ ಅರಬಿ ಭಾಷೆಯ ಮಹಾನ್ ಬರಹಗಾರನ ಆತ್ಮ ಕಥೆಯ ಕೆಲವು ತುಂಡುಗಳು ನಿಮಗಾಗಿ

 
-1-
ಒಂದು ಪ್ರಾರ್ಥನೆ
ಕ್ರಾಂತಿಯಾಗಲೆಂದು ಪ್ರಾರ್ಥಿಸುತ್ತಿದ್ದಾಗ ನನಗಿನ್ನೂ ಏಳು ವರ್ಷವೂ ಆಗಿರಲಿಲ್ಲ.
ಆವತ್ತು ಬೆಳಗ್ಗೆ ಕೆಲಸದ ಹುಡುಗಿಯ ಕೈ ಹಿಡಕೊಂಡು ಶಾಲೆಗೆ ಕಾಲೆಳೆಯುತ್ತಾ ನಡೆಯುತ್ತಿದ್ದೆ. ಜೈಲಿಗೆ ಎಳೆದುಕೊಂಡು ಹೋಗುವ ಹಾಗೆ ಅನಿಸುತ್ತಿತ್ತು.ಕೈಯಲ್ಲೊಂದು ಕಾಪಿ ಪುಸ್ತಕ,ಕಣ್ಣುಗಳಲ್ಲಿ ಜಿಗುಪ್ಸೆ,ಎದೆಯೊಳಗೆ ಏನೋ ಅರಾಜಕತೆಯ ಆಸೆ. ತಣ್ಣನೆಯ ಕುಳಿರು ಚಡ್ಡಿಯ ಕೆಳಗೆ ಬತ್ತಲೆಕಾಲುಗಳನ್ನು ತಿವಿಯುತ್ತಿತ್ತು. ನೋಡಿದರೆ ಶಾಲೆಯ ಬಾಗಿಲು ಹಾಕಿತ್ತು. ಶಾಲೆಯ ಕಾವಲುಗಾರ ಗಟ್ಟಿ [...]

ರೈನರ್ ಮರಿಯಾ ರಿಲ್ಕ್ ನ ಇನ್ನೊಂದು ಕವಿತೆ..

 ಒಂಟಿ

ಎಲ್ಲವೂ ದೂರ
ಎಲ್ಲೋ ಹೋದಂತಿದೆ.
ಮೇಲೆ ಹೊಳೆಯುವ ತಾರೆ
ಕೋಟಿ ವರ್ಷಗಳಿಂದ
ತೀರಿಹೋದಂತಿದೆ.
ಈಗ ಹಾದು ಹೋದ ಬಂಡಿಯಲ್ಲಿ
ಕಣ್ಣೀರು ಕಂಡಂತೆ ಏನೋಕೆಟ್ಟದ್ದು
ಅಂದಂತೆ ಅನಿಸುತ್ತಿದೆ.
ಬೀದಿಯ ಆಚೆ ಬದಿ ಆಮನೆಯಲ್ಲಿ
ಗಡಿಯಾರ ಹೊಡೆಯುವುದು ನಿಂತು…
ಅದು ಚಲಿಸಿದ್ದು ಯಾವತ್ತು..?
ಅನಿಸುತ್ತಿದೆ ಎದೆಯೊಳಗಿಂದ ಎದ್ದು ಹೊರಟು ನಿಂತು
ಆ ದೊಡ್ಡ ಆಗಸದ ಅಡಿಯಲ್ಲಿ ನಡೆಯಲು,
ಅನಿಸುತ್ತಿದೆ ಪ್ರಾರ್ಥಿಸಲು.
ನಿಜವಾಗಲೂ ಗತಿಸಿಹೋದ ಎಲ್ಲ ತಾರೆಗಳ ನಡುವೆ
ಬಹಳ ಹಿಂದಿನದೊಂದು
ಇನ್ನೂ ಉಳಿದಿದೆ ಅನಿಸುತ್ತಿದೆ.
ಅದು ಯಾವುದದು
ನನಗೆ ಗೊತ್ತಿರುವಂತೆ
ಯಾವುದದು- ತನ್ನ ಕಿರಣದ ಕೊನೆಯಲ್ಲಿ
ಆಕಾಶದಲ್ಲಿ
ಒಂದು ಬಿಳಿಯ ಪಟ್ಟಣದಂತೆ
ನಿಂತಿರುವುದು.. .. ..

ನಿನ್ನ ಕೆನ್ನೆಗಳನ್ನು…

ಮೌಲಾನಾ ಜಲಾಲುದ್ದೀನ್ ರೂಮಿಯವರ ಇನ್ನೊಂದು ಕವಿತೆ

ನಿನ್ನ ಮೃದು ಕೆನ್ನೆಯನ್ನ ಒಂದರೆಗಳಿಗೆ
ಈ ಕುಡುಕನ ಕೆನ್ನೆಗೆ ಒತ್ತು
ನನ್ನೊಳಗಿನದೇ ನನ್ನ ಕಾದಾಟ ಕಾಠಿಣ್ಯ ಮರೆತು ಬಿಡಲು.
ಈ ಬೆಳ್ಳಿನಾಣ್ಯಗಳನ್ನ ಚಾಚಿ ಹಿಡಿದಿರುವೆ
ಹೊನ್ನ ಬೆಳಕಿನ ಮಧುವ ಸುರಿದು ಬಿಡು ಅದಕೆ.
ಸ್ವರ್ಗದ ಏಳೂ ಬಾಗಿಲುಗಳ ತೆರೆದಿರುವೆ ನೀನು.
ಕೈಯನ್ನ ನನ್ನ ಬಿಗಿದ ಎದೆಯ ಮೇಲೆ ತಾ.
ಕೊಡುವುದೇನಿದ್ದರೂ ನಿನಗೆ ನಾನು ಈ ಭ್ರಮೆ.ಅದೇ ನಾನು!
ಒಂದು ಹೆಸರನ್ನಾದರೂ ಇಡು, ಅದಾದರೂ ಆಗಲಿ ನಿಜ.
ನೀ ಮಾತ್ರ ಸರಿ ಜೋಡಿಸಬಲ್ಲೆ ನೀನೇ ಮುರಿದದ್ದ
ನನ್ನ ಕುಸಿದಿರುವ ಮಿದುಳ.
ನಾನು ಬೇಡುತ್ತಿರುವುದು ಮಿಠಾಯಿಯನ್ನಲ್ಲ
ನಿನ್ನ ಕೊನೆಯಿರದ ಒಲವನ್ನ
ಎಷ್ಟೊಂದು ಸಲ [...]

ಹೆಂಡದಂಗಡಿಯಿಂದ

ಹಗಲೆಲ್ಲ ಯೋಚಿಸುವೆ.ಇರುಳು ಅದನೇ ಹೇಳುವೆ.
ಎಲ್ಲಿಂದ ಬಂದೆ ನಾನೇನು ಮಾಡುತಿರುವೆ ಒಂದೂ ಅರಿಯೆ.
ನನ್ನ ರೂಹು ಬೇರೆ ಎಲ್ಲಿನದೋ, ಅದು ಗೊತ್ತು ನಿಜ
ಮತ್ತೆ ಅಲ್ಲಿಗೇ ಹೋಗಿ ಸೇರುವೆನು.
ಈ ಕುಡುಕುತನ ಬೇರೊಂದು ಹೆಂಡದಂಗಡಿಯಿಂದ ತೊಡಗಿದ್ದು
ಹಿಂತಿರುಗಿ ತಲುಪಿದಾಗ ಅಲ್ಲಿ
ಸುಮ್ಮಗಾಗುವೆನು ಪೂರಾ..
ಅದುವರೆಗೆ ಈ ಗೆಲ್ಲ ಮೇಲೆ ಹಕ್ಕಿ ನಾನು ಬೇರೊಂದು ಭೂಖಂಡದಿಂದ.

ರಿಲ್ಕ್ ನ ಎಲಿಜಿಯ ಕೆಲವು ಸಾಲುಗಳು

ಕೂಗಿ ಕರೆದರೆ ಕೇಳುವರು ಯಾರು ದೇವ ದೇವತೆಯರ ಸಾಲಿನಲ್ಲಿ
ಎಲ್ಲಾದರು ಒತ್ತಿಕೊಂಡರೆ ತೀರಿ ಹೋಗುವೆನು ಆ ತುಂಬು ಇರವಿನಲ್ಲಿ
ಚೆಲುವೆಂಬುದು ಅಲ್ಲ ಬೇರೇನೂ ಅದು ಭಯದ ಮೊದಲು
ಕೇವಲ ತಾಳಿಕೊಳ್ಳಬಲ್ಲೆವು ಮಾತ್ರ ಅದನು
ಚಕಿತಾರಾಗುವೆವು ಅಷ್ಟು..ತಣ್ಣಗೆ ಸಂಚಲ್ಲಿ ತೊಡಗುವುದು ಅದು,
ಮುಗಿಸಿಬಿಡಲು..ಪ್ರತಿದೇವತೆಯೂ ಭಯವ ಹುಟ್ಟಿಸುವುದು