’ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ ಸಿಗುವ ಸುಳ್ಳು ಖ್ಯಾತಿ,ಅದರಿಂದ ಉಂಟಾಗುವ ಕಳ್ಳ ಪ್ರಣಯ, ನಿನ್ನ ಈ ಹುಚ್ಚಿನಿಂದಾಗಿ ಆರ್ಥಿಕವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ನಯಾಪೈಸೆ ಲಾಭವಿಲ್ಲ.
ನೀನು ಮುಚ್ಚಿಕೊಂಡು ಸುಮ್ಮನೆ ಕೂತುಕೋ. ಬೀಡಿಸಿಗರೇಟಿಗೆ ಟೀಗೆ ನಾನು ಕೊಡುತ್ತೇನೆ. ಮನೆಗೂ ಸಮಾಜಕ್ಕೂ ಎಲ್ಲರಿಗೂ ಒಳಿತಾಗುತ್ತದೆ’ಎಂದೆಲ್ಲ ಅವಳು ಸಂಕಟದಲ್ಲಿ ಉಲಿಯುತ್ತಿದ್ದಳು.
ನನಗೂ ಅವಳು ಅನ್ನುತ್ತಿರುವುದು ನೂರಕ್ಕೆ ನೂರರಷ್ಟು ಸರಿ ಅನ್ನಿಸುತ್ತಿತ್ತು.
ಅವಳು ಕೊಟ್ಟ ದುಡ್ಡಲ್ಲಿ ಒಂದು ಗಾಳ ಮತ್ತು ಒಂದು ಕಟ್ಟು ಬೀಡಿ ಕೊಂಡುಕೊಂಡು ಒಂದು ಎರೆಹುಳ ಹಿಡಿದು ಗಾಳಕ್ಕೆ ಸಿಕ್ಕಿಸಿ ಉಟ್ಟ ಪಂಚೆಯನ್ನ ಒದ್ದೆಯಾಗದ ಹಾಗೆ ಪೇಟದಂತೆ ತಲೆಗೆ ಸುತ್ತಿಕೊಂಡು ಕೊಡಗಿನ ನನ್ನ ಬಾಲ್ಯದ ನದೀ ತೀರದಲ್ಲಿ ಮೀನು ಹಿಡಿಯಲು ಕೂತುಬಿಡಬೇಕೆಂದು ಅನ್ನಿಸುತ್ತಿತ್ತು.ಜೊತೆಗೆ ಇವಳೂ ಮೀನು ಹಿಡಿಯಲು ಕೂತು ಬಿಟ್ಟರೆ ನಾನು ಮೀನು ಹಿಡಿಯುವುದನ್ನು ಬಿಟ್ಟು ಇವಳನ್ನೇ ನೋಡುತ್ತಾ ಕೂತು ಬಿಡಬಹುದು ಅಂತಲೂ ಎನ್ನಿಸುತ್ತಿತ್ತು. ಆದರೆ ಇದನ್ನು ಹೇಳುವುದು ಈ ಸಂಕಟದ ಸಮಯದಲ್ಲಿ ಸಮಂಜಸವಲ್ಲ ಎಂದು ಕೊಂಡು ಸುಮ್ಮನೆ ಉಗಿಸಿಕೊಂಡು ಕೂತಿದ್ದೆ.
ಅವಳು ಸಂಕಟವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಹೆಣಗುತ್ತಿದ್ದಳು. (more…)
ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ತ ಗಾಳಿಯಾಡಿ, ಎಷ್ಟೋ ಶತಮಾನಗಳಷ್ಟು ಹಳೆಯ ಗುಂಗು ಮೂಡಿಸಿ, ಹಳೆಯ ಪಾರಿವಾಳಗಳು ರೆಕ್ಕೆ ಬಡಿದು ಹಾರಾಡಿ , ಧೂಪ- ಸಾಂಬ್ರಾಣಿ- ಹೊಗೆ- ಸಮಾದಿ- ನಾವು ಇರುವ ಜಾಗ ಯಾವುದು ನಾವು ಎಲ್ಲಿಂದ ಬಂದವರು ಎಂಬುದನ್ನೆಲ್ಲ ಮರೆಯಿಸಿಬಿಡುತ್ತವೆ.




ಈ ನಡು ಮದ್ಯಾಹ್ನದ ಆಕಾಶಕ್ಕಿಂತ ಬಿಲ್ ಗೇಟ್ಸ್ ಕರುಣಿಸಿರುವ ಈ ನೀಲ ವಿಂಡೋಸ್ ಪರದೆ ಎಷ್ಟೋ ಹಿತವಾಗಿ ಕಾಣಿಸುತ್ತಿದೆ. ಜಾಗತೀಕರಣ ಮತ್ತು ಸಂಸ್ಕೃತಿ, ಜಾಗತೀಕರಣ ಮತ್ತು ಧರ್ಮ,ಜಾಗತೀಕರಣ ಮತ್ತುಕನ್ನಡ ಸಾಹಿತ್ಯ- ವಿತ್ತ ವರ್ಷ ಮುಗಿಯುವ ಮೊದಲೇ ಮುಗಿಸಬೇಕಾಗಿರುವ ವಿಚಾರ ಸಂಕಿರಣಗಳು ಅಚ್ಚರಿಯಾಗುವಂತೆ ಪ್ರತಿನಿಧಿಗಳಿಂದ ತುಂಬಿಕೊಂಡಿದೆ.ಬಹಳಷ್ಟು ಮಂದಿ ಭಯಬೀತರಾಗಿ ಯಾವ ರೂಪದಲ್ಲಾದರೂ ಎರಗಬಹುದಾದ ಜಾಗತಿಕ ಭೂತದಿಂದ ತಮ್ಮ ಪಿಳ್ಳೆಮರಿಗಳನ್ನು ಹೇಗ ರಕ್ಷಿಸಬಹುದೆಂದು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದರೆ ನಾನಾದರೋ ಜಾಗತೀಕರಣದ ಏಜೆಂಟನಂತೆ ಈ ನೀಲಪರದೆಯ ಮುಂದೆ ಕುಳಿತು ಏನು ಬರೆಯಲಿ ಎಂದು ಮೂಗ ಹೊಳ್ಳೆಯೊಳಗಿಂದ ಘನವಾದದ್ದೇನನ್ನೋ ಹೆಕ್ಕುತ್ತಿದ್ದೇನೆ.
ಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. . 
ಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.









.
.
ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ ಹೋಗುವ ಕೋಳಿ ಸಂಸಾರವನ್ನೂ ಕಂಟ್ರೋಲ್ ಮಾಡುತ್ತಾ,ಟೀವಿ ನೋಡುತ್ತಾ,ರೇಡಿಯೋ ಕೇಳುತ್ತಾ,ಕನ್ನಡ ಮಲಯಾಳಂ ಪತ್ರಿಕೆಗಳನ್ನು ಓದುತ್ತಾ ಮುಂದಿನ ಪೂಜ್ಯ ಪೋಪ್ ಯಾರಾಗಬಹುದೆಂದು ಊಹಿಸಿಕೊಂಡು ಈಗಿನ ಪೂಜ್ಯ ಪೋಪ್ ನಿಜವಾಗಿಯೂ ತೀರಿ ಹೋಗುವರಾ ಎಂದು ಹೆದರಿಕೊಂಡು ಒಂದು ಕಾಲನ್ನು ಮೆಲ್ಲಗೆ ಎತ್ತಿ ಎತ್ತಲಾಗದ ಇನ್ನೊಂದು ಕಾಲಿನ ಮೇಲೆ ಮೆತ್ತಗೆ ಇಡುತ್ತಾಳೆ.
ಸಿಕ್ಕಿದಕ್ಕೆಲ್ಲ ಸುಮ್ಮನೆ `ಮಣ್ಣಾಂಗಟ್ಟಿ’ ಎಂದು ಬೈದು ನೆಲಕ್ಕೆ ಕ್ಯಾಕರಿಸಿಉಗಿಯುವ ಇಸುಬುವಿನ ಹೋಟೆಲ್ಲು ಮೈಯೆಲ್ಲ ಸುಟ್ಟುಕೊಂಡು ಸರ್ವನಾಶವಾಗಿ ಹೋಗಿ ನೋಡುವವರಿಗೆ ತಮಾಶೆಯಾಗಿ ಕಾಣಿಸುತ್ತಿತ್ತು.
ನಾವು ಪರದೇಶಿಗಳಾದ ಗೆಳೆಯರು ಸುಖ ಸಂಕಟದ ಹೊತ್ತಲ್ಲಿಮತ್ತೆ ಮತ್ತೆ ಕೇಳುವ ಹಾಡು ಅದು. ಶಾಶ್ತ್ರೀಯವಾಗಿ ಕೇಳುವುದಾದರೆ ಬೆಳಗಿನ ಕೊನೆಯ ಜಾವದಲ್ಲಿ ಕೇಳಬೇಕಾದ ಹಾಡದು. ಪರದೇಶಿಗಳಾದ ಪರಮಸುಖಚತುರರು ಯಾವ ಜಾವದಲ್ಲಾದರೂ ಕೇಳಬಹುದು ಅನ್ನುವಂತೆ ಉಸ್ತಾದ್ ಅಮೀರ್ ಖಾನ್ ಹಾಡುತ್ತಿದ್ದರು. ಮಕ್ಕಳು ಆಸೆಯಿಂದ ಸುಲಿಯುತ್ತಿರುವ ಮುಸಂಬಿಯನ್ನು ನೋಡುತ್ತಿದ್ದರು. ಆ ಉರಿಬಿಸಿಲಿನ ಸುಖಸಂಕಟದ ಹಾಡಿನ ನಡುವೆಯೂ ಮುಸಂಬಿ ಸುಲಿಯವ ಸದ್ದು ಕೇಳಿಸುತ್ತಿತ್ತು.ಒಂದು ಅನಿರ್ವಚನೀಯ ಸದ್ದು. ಇದುವರೆಗೆ ಯಾರೂ ಎಲ್ಲೂ ಕೇಳಿರದ ಶೋಷಣೆಯೊಂದರ ಸದ್ದು. ಯಾವುದನ್ನು ತಿನ್ನಬಹುದು ಯಾವುದನ್ನು ತಿನ್ನಬಾರದು ಎಂದು ಮಕ್ಕಳಿಗೆ ಮದ್ಯಾಹ್ನ ಕಥೆ ಹೇಳಿ ಮಲಗಿಸಲು ನೋಡಿದ್ದೆವು.ಕಟ್ಟಾ ಮುಸಲ್ಮಾನಳಾದ ನನ್ನ ಅಕ್ಕ ಮುಸಲ್ಮಾನರ ಪ್ರಕಾರ ಯಾವುದೆಲ್ಲಾ ಅನುಮತಿಸಲ್ಪಟ್ಟ ಆಹಾರ ಯಾವುದೆಲ್ಲಾ ನಿಷೇಧಿಸಲ್ಪಟ್ಟ ಆಹಾರ ಎಂದು ಹೇಳಿದ್ದರೆ, ಅಧರ್ಮೀಯರಾದ ನಾನು ಮತ್ತು ನನ್ನ ಹೆಂಡತಿ ಯಾವ ಮಾಂಸಕ್ಕೆ ಏನು ರುಚಿಯಿರುತ್ತದೆ-ಯಾವ ಮೀನಿಗೆ ಎಂತಹ ಮುಳ್ಳಿರುತ್ತದೆ ಯಾವ ತರಕಾರಿಯಲ್ಲಿ ಯಾವ ಹಣ್ಣಿನಲ್ಲಿ ಎಂತೆಂತಹ ಗುಣಗಳಿರುತ್ತವೆ ಎಂದು ಪೆದ್ದು ಪೆದ್ದಾಗಿ ವಿವರಿಸಿ ಸೋತು ಹೋಗಿದ್ದೆವು.
ಏನೇ ಆದರೂ ನವಿಲನ್ನೂ ಜಿಂಕೆಯನ್ನೂ ಮೊಲವನ್ನೂ ಅಳಿಲನ್ನೂ ತಿನ್ನಬಾರದೆಂದೂ,ಯಾವುದೇ ಕಾರಣಕ್ಕೂ ಹುಲಿಯನ್ನೂ ಸಿಂಹವನ್ನೂ ನರಿಯನ್ನೂ ರಾಕ್ಷಸರನ್ನೂ ತಿನ್ನದೇ ಇರಬಾರದೆಂದೂ ಮಕ್ಕಳು ನಮಗೇ ಬುದ್ಧಿಮಾತು ಹೇಳಿ ಮಲಗಿದ್ದರು.ಎದ್ದು ಮುಸಂಬಿ ಸುಲಿಯಲು ಕೂತರೆ ಅದೂ ಸದ್ದುಮಾಡಲು ತೊಡಗಿ ಇದನ್ನು ಹೇಗೆ ತಿನ್ನಿಸುವುದು ಎಂದು ಸಂಕಟ ಶುರುವಾಯಿತು.