The Mysore Post

Thursday May 31, 2007

ಎಜ್ರಾ ಪೌಂಡನ ಒಂದು ಕವಿತೆ

Filed under: ಅನುವಾದಗಳು — Rasheed @ 11:16 pm

 ಫ್ರಾನ್ಸೆಸ್ಕಾ

 

facesi31.jpg
ನೀ ಇರುಳಿಂದ ಹೊರಬರುತ್ತಿದ್ದೆ.

 ಆಗ ನಿನ್ನ ಕೈಗಳಲ್ಲಿ ಹೂವುಗಳಿರುತ್ತಿತು .
ಈಗ ಬರುತ್ತೀಯ ಹೊರಕ್ಕೆ
ಮಂದಿಯ ಗೊಂದಲಗಳಿಂದ,
ನಿನ್ನಕುರಿತ ಬೇಕಾಬಿಟ್ಟಿ ಮಾತುಗಳಿಂದ
ಬರೆಯ ಸರಳ ಸಂಗತಿಗಳ ಸುತ್ತ ನಿನ್ನ ಕಂಡವನು ನಾನು
ಈಗ ಉರಿಯುತ್ತದೆ ಮೈ.

 ಮಂದಿ  ನಿನ್ನ ಹೆಸರ ಸಾದಾ ಎಡೆಗಳಲ್ಲೂ ಎತ್ತುವಾಗ
ಈ ನೆತ್ತಿಯ ಮೇಲೆ ತಣ್ಣನೆ ಗಾಳಿಯಾಡುವಂತಿದ್ದರೆ ಸಣ್ಣಗೆ
ಎಲ್ಲ ಸತ್ತ ಎಲೆಯಹಾಗೆ ಒಣಗುವಂತಿದ್ದರೆ
ಎಲ್ಲ ಸಾಸುವೆಯ ಬೀಜಗಳಂತೆ ಕೊಚ್ಚಿ ಹೋಗುತ್ತಿದ್ದರೆ
ನಿನ್ನನ್ನೊಮ್ಮೆ ನೋಡಬಹುದಿತ್ತು
ಒಬ್ಬಳನ್ನೇ…….

 

Wednesday May 30, 2007

ಒಂದು ಪುರಾತನ ಪ್ರೇಮ- ಒಂದು ಸಣ್ಣ ಕಥೆ.

Filed under: ಕತೆ-ಗಿತೆ — Rasheed @ 5:33 pm

 drawing4.jpg

                                                                                    [ರೇಖಾ ಚಿತ್ರಗಳು:ಚರಿತಾ] 

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು  ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ.  

ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ ದೇಶದಕಡೆಗೆ ಹೋಗುವ ಕೊನೆಯ ಬಸ್ಸಿಗಾಗಿ ಕಾದು ನಿಂತಿರುವ ಕ್ರೈಸ್ತಕನ್ಯಾಸ್ತ್ರೀಯರು, ಬೆಳ್ಳನೆಯ ಮುಂಡಾಸು ಸುತ್ತಿಕೊಂಡ ಮುಸ್ಲಿಂ  ಮತಪಂಡಿತ ಮಕ್ಕಳು. ವಾಂತಿ ಮಾಡಿಕೊಂಡು ಸುಸ್ತಾಗಿ ಬಸ್ಸೊಳಗೆ ತಮ್ಮತಮ್ಮ ಗಂಡಂದಿರ ಎದೆಗೆ ಒರಗಿ ನಿದ್ರಿಸುತ್ತಿರುವ ಎಳೆಯ ಪತ್ನಿಯರು….ಕುಡಿದು ಹೆಗಲಿಗೆ ಹೆಗಲು ಕೋಸಿಕೊಂಡು ಮಳೆಯಲ್ಲಿ ಸಿಳ್ಳೆ ಹೊಡೆದು ಕೊಂಡು ನಡೆದು ಹೋಗುತ್ತಿರುವ ಗೆಣೆಕಾರರು…

ಸಂಜೆ ವೀರಾಜಪೇಟೆಯಲ್ಲಿ ,ಆ ಕೆಸರು ಮಳೆ ಮನುಷ್ಯವಾಸನೆಗಳ ನಡುವೆ ಕೊಡೆ ಹಿಡಿದು ಕೊಂಡಿದ್ದ ನನಗೆ ಯಾಕೋ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ.ಅದು ಡಿಸೆಂಬ್ ತಿಂಗಳ ಕೊನೆಯ ವಾರ.ಆದರೂ ಚಿರಿಚಿರಿ ಮಳೆ. ಅದು ರಂಜಾನ್  ತಿಂಗಳ ಕೊನೆಯ ದಿನಗಳು.ದಿನವಿಡೀ ಉಪವಾಸ ಹಿಡಿದ ಮುಸಲ್ಮಾನ ಭಾಂದವರು ಸಂಜೆ ಇನ್ನೇನು ಉಪವಾಸ ಮುಗಿಸಲು ಕಾಯುತ್ತಿದ್ದರು. ಹಾಗಾಗಿ ಒಂದು ತರಹದ ಧಾರ್ಮಿಕ ಹಸಿವೋ ಹಠ ವೋ ಅವರ ಮುಖದಲ್ಲಿತ್ತು. ಕ್ರಿಸ್ಮಸ್ ಗೆ ಇನ್ನು ಎರಡೇ ದಿನಗಳಿತ್ತು. ಕನ್ಯಾಶ್ರಮಗಳಿಂದ ಅನುಮತಿ ಪಡೆದು ತಮ್ಮ ಕುಟುಂಬ ವನ್ನು ಕಾಣಲು ಹೊರಟ ಕನ್ಯಾಸ್ತ್ರೀಯರ ಮುಖಗಳಲ್ಲಿ ಅಷ್ಟೇನೂ ಉಲ್ಲಾಸ ಕಾಣಿಸುತ್ತಿರಲಿಲ್ಲ.ಕಾಪಿಗೆ ಬೆಲೆಯಿಲ್ಲದೆ ಶುಂಠಿಗೆ ಬೆಲೆಯಿಲ್ಲದೆ ಅವೆರಡಕ್ಕೆ ಬೆಲೆಯಿಲ್ಲದಿದ್ದರೆ ಬೇರೆ ಏತಕ್ಕೂ ಬೆಲೆಕೊಡದ ಕೊಡಗಿನ ಬೆಳೆಗಾರರ ಮುಖಗಳೂ ಆಸಕ್ತಿ ಹುಟ್ಟಿಸುವಂತಿರಲಿಲ್ಲ.

  drawing1.jpgಸುಮ್ಮನೆ ಹತ್ತಬೇಕಿದ್ದ ಬಸ್ಸುಗಳನ್ನೆಲ್ಲ ತಪ್ಪಿಸಿಕೊಳ್ಳುತ್ತ ಎಲ್ಲಿಗಾದರೂ ಯಾಕಾದರೂ ಹೋಗಬೇಕು ಎಂದುಕೊಳ್ಳುತ್ತ ನಿಂತಿದ್ದವನ ಮುಂದೆ ಅವರಿಬ್ಬರು ಗಾಳಿಗೆ ಸಿಕ್ಕಿದ ಒಣ ಎಲೆಗಳಂತೆ ನಡೆದು ಬರುತ್ತಿದ್ದರು.ಮುಂದೆ ಮೌಲಾನ್ ಕುಟ್ಟಿ ಕಾಕಾ ಎಂಬ ಮುದುಕ ಮತ್ತು ಅವರ ಹಿಂದೆ ಪಾತುಂಞೆ ಎಂಬ ಸುಂದರಿ ಮುದುಕಿ… ಎಷ್ಟೋಕಾಲದ ನಂತರ ಇಬ್ಬರು ಮರಣದ ನಂತರವೇ ಒಂದಾಗಿರುವರೋ ಎಂಬಂತೆ ಆ ಮಂಜು ಮಳೆ ಗಾಳಿಯ ನಡುವೆ ನಡೆದು ಬರುತ್ತಿದ್ದರು. ಪಾತುಂಞೆ ತಾತಾಳ ಇತಿಹಾಸ ಪ್ರಸಿದ್ಧ ಬೆಳ್ಳಗಿನ ಬಣ್ಣ ಮತ್ತು ಅವಳ ತುಟಿಯಮೇಲಿದ್ದ ಕಪ್ಪಗಿನ ಕೆಡು ಮತ್ತು ಅದರ ಮೇಲೆ ಬೆಳೆದಿದ್ದ ಕಪ್ಪಗಿನ ಕೂದಲು ಈಗ ವಯಸ್ಸಾಗಿದ್ದರಿಂದ ಮಾತ್ರ ಬೆಳ್ಳಗಾಗಿ ಬಿಟ್ಟಿತ್ತು.ಇಲ್ಲದಿದ್ದರೆ ಮುದುಕಿ ಇನ್ನೂ ಸುಂದರಿಯಾಗಿಯೇ ಉಳಿದಿದ್ದಳು.ಮೌಲಾನ್ ಕುಟ್ಟಿ ಕಾಕಾ ಮಾತ್ರ ಕೊಂಚ ತಲೆ ಕೆಟ್ಟವರಂತೆ ಕಾಣಿಸುತ್ತಿದ್ದರು. ಕಾಲಲ್ಲಿರಬೇಕಾದ ರಬ್ಬರಿನ ಚಪ್ಪಲಿಗಳನ್ನು ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಕೊಂಡು ಓಲಾಡಿಕೊಂಡು ನಡೆಯುತ್ತಿದ್ದರು.ಅವರ ಬಿಳಿ ಪಂಚೆ ಗಾಳಿ ಮಳೆ ಕೆಸರುಮಣ್ಣಿಗೆ ಸಿಲುಕಿ ಯಾವುದೋ ಬಣ್ಣ ಪಡೆದಿತ್ತು. ಎಲೆ ಅಡಿಕೆಯ ಜೊಲ್ಲು ಬಾಯಿಂದ ಇಳಿದು ಗಡ್ಡಕ್ಕೆ ಸೇರುತ್ತಿತ್ತು..ಬಾಯಲ್ಲಿ ಯಾವಾಗಲೋ ಆರಿಹೋಗಿದ್ದ ಮೋಟು ಬೀಡಿ.ಮುದುಕ ಗಾಳಿಗೆ ಸಿಕ್ಕಿ ಆರಲು ಹೊರಟ ಮೋಂಬತ್ತಿಯಂತೆ ನಡೆದಾಡುತ್ತಿದ್ದ. ಅವರ ಹಿಂದೆ ಕೊಂಚ ಸ್ತಿರವಾಗಿ ಪಾತುಂಞೆ ತಾತಾ ನಡೆದು ಬರುತ್ತಿದ್ದಳು .ಮುದುಕಿಯ ಮುಖದಲ್ಲಿ ಎಂತಹದೋ ಉಲ್ಲಾಸ ಕಂಡು ಬರುತ್ತಿತ್ತು. (more…)

Monday May 28, 2007

ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆ

Filed under: ಮೈಸೂರಿನಿಂದ ಅಂಕಣ — Rasheed @ 10:43 pm

 nagaraja-pandey.jpg

ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ ಸುರಿಯುವ ಹಾಗೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.  ನಾನು ಸುಮಾರು ಎರಡು ಗಂಟೆಗಳ ಹೊತ್ತು ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಕಥೆ ಕೇಳುತ್ತಾ ಕುಳಿತಿದ್ದೆ.  ಒಂದಂತೂ ನಿಜ.  ಇನ್ನು ನೂರಾರು ವರ್ಷಗಳಷ್ಟು ಕಾಲ ಬರೆಯುವಷ್ಟು ವಿಷಯಗಳು ಅವರ ಬಳಿ ಇರುವುದು ಗೊತ್ತಾಯಿತು. ನನಗೆ ಮೈಸೂರಿನಲ್ಲಿ ಮಾತನಾಡಲು, ನನ್ನನ್ನು ಹರಸಲು ಇನ್ನೊಬ್ಬರು ಮಹಾ ಗುರುಗಳು ದೊರಕಿದರು ಎಂಬ ಆನಂದದಿಂದ ಅವರ ಬಳಿಯಿಂದ ಹೊರಟು ಬಂದು ಇದನ್ನು ಬರೆಯುತ್ತಿರುವೆ

 ನಾಗರಾಜ ಸೂರ್ಜನಾರಾಯಣ ಪಾಂಡೆಯವರು ನನಗೆ ಮೊದಲು ಪರಿಚಯವಾಗಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಆಕಸ್ಮಿಕವಾಗಿ. ಹಳೆಯಕಾಲದ ಕೀ ಕೊಡುವ ಕೈಗಡಿಯಾರಗಳನ್ನು ಸರಿಪಡಿಸುವ ತಜ್ಞರು ಯಾರಾದರೂ ಇದ್ದಾರೆಯೇ ಎಂದು ಮೈಸೂರಿನ ಮಕ್ಕಾಜಿ ಚೌಕದ ಬಳಿಯಿರುವ ಒಲಂಪಿಯಾ ಥಿಯೇಟರಿನ ಅಕ್ಕ ಪಕ್ಕ ಹುಡುಕುತ್ತಿದ್ದೆ ಆಗ ಯಾರೋ ಪಾಂಡಯವರ ಹೆಸರು ಹೇಳಿದರು.  ಹೋಗಿ ನೋಡಿದರೆ ಆ ಹಳೆಯ ಗಡಿಯಾರದ ಅಂಗಡಿಯಲ್ಲಿ ಪಾಂಡೆಯವರ ಪುತ್ರ ಇದ್ದರು.  ಪಾಂಡೆಯವರು ಈಗ ಗಡಿಯಾರಗಳ ಗೊಡವೆಗೆ ಹೋಗುವುದಿಲ್ಲವೆಂದೂ ಈಗ ಅವರು ಪತಂಜಲೀ ಯೋಗವನ್ನು ಅರ್ಹರಿಗೆ ಹೇಳಿಕೊಡುತ್ತಿದ್ದಾರೆಂದೂ ಗೊತ್ತಾಯಿತು.  ದೂರವಾಣಿಯಲ್ಲಿ ಪಾಂಡೆಯವರನ್ನು ಮಾತನಾಡಿಸಿ ‘ಏನು ಪಾಂಡೆಯವರೇ ಗಡಿಯಾರದ ಸಹವಾಸ ತೊರೆದು ಯೋಗಾಚಾರ್ಯರಾಗಿದ್ದೀರಲ್ಲಾ..?’ ಎಂದು ಕೇಳಿದೆ ‘ಈಗ ಯೋಗದ ಮೂಲಕ ಕಾಲವನ್ನು ಅಳೆಯುತ್ತಿದ್ದೇನೆ’ ಎಂದು ತೀರಾ ಅಪರೂಪದ, ಆಳದ ಧ್ವನಿಯಲ್ಲಿ ಹೇಳಿದರು. ಅವರ ಧ್ವನಿ ಕೇಳಿದರೇ ಪುಳಕಿತವಾಗುವ ಹಾಗೆ ಇತ್ತು.  ಆಮೇಲೆ ಅವರ ಜೊತೆ ರಾಜಯೋಗದ ಕುರಿತು, ಪತಂಜಲಿಯ ಕುರಿತು ಕೇಳಿದೆ. ಅವರ ಜೊತೆ ಮಾತನಾಡುತ್ತಾ ಈ ಮನುಷ್ಯ ಬಹಳ ದೊಡ್ಡವರು ಅನಿಸಿತು. ಹುಡುಗನಾಗಿರುವಾಗ ಬಹಳ ಕಷ್ಟಪಟ್ಟಿದ್ದಾರೆ ಅನಿಸಿತು. (more…)

ಹೂವಿನ ಕೊಲ್ಲಿಯ ಪೂರ್ವ ದಿಕ್ಕಿನಲ್ಲಿ

Filed under: ಹೂವಿನಕೊಲ್ಲಿ — Rasheed @ 2:24 pm

ನಿನ್ನೆ ಹೂವಿನ ಕೊಲ್ಲಿಯ ಹತ್ತಿರ ಹೋಗಿದ್ದೆ. ಅಮ್ಮನ ಹತ್ತಿರ ಇನ್ನಷ್ಟು ಹಳೆಯ ವಿವರಗಳನ್ನು ಕೇಳಬೇಕಿತ್ತು.ಆದರೆ ಯಾಕೋ ಆಕೆ ತೀರಿಹೋದ ನನ್ನ ಅಪ್ಪನನ್ನೂ ಸೇರಿಸಿ ನನ್ನನ್ನೂ ಎಲ್ಲರನ್ನೂ ಕಠುವಾಗಿ ಟೀಕಿಸುತ್ತಿದ್ದಳು.ಯಾಕೋ ಆಕೆ ತೀರಾ ಸಂಕಟದಲ್ಲಿದ್ದಂತೆ ಇತ್ತು.ಪೆಚ್ಚಾಗಿ ಹೂವಿನಕೊಲ್ಲಿಯ ಪೂರ್ವ ದಿಕ್ಕಿನಲ್ಲಿರುವ ಈ ಹೊಳೆಬದಿಗೆ ಹೋದೆ.

hoovinakolli-2.jpg

ನಾಳೆ ಹೂವಿನಕೊಲ್ಲಿಯ ೧೩ನೇ ಕಂತು ಬರೆಯಬೇಕು.ಏನೂ ಗೊತ್ತಾಗುತ್ತಿಲ್ಲ………….

hoovinakolli-1.jpg

Saturday May 26, 2007

ತೀರಿ ಹೋಗಿರುವ ಸೂಫಿ ಬ್ಯಾರಿಯವರ ಕುರಿತು

Filed under: ಮಾತಿಗೂ ಆಚೆ — Rasheed @ 8:56 pm

ಸೂಫಿ ಸಂತನ ಸಂಸಾರ ತೋಟ…

 

sufi1.jpg

ಹುಣ್ಣಿಮೆಯ ಮರುದಿನದ ಬೆಳದಿಂಗಳು. ಆ ದೊಡ್ಡ ಮಸೀದಿ ತೊಯ್ಯುತ್ತ ಮಲಗಿತ್ತು. ಚಂದ್ರನ ಕೆಳಗೆ ಚಂದಕ್ಕೆ ಹಾಸಿದಂತೆ ಒಂದು ತುಂಡು ಮೋಡ ಮುಸುಕಿಕೊಂಡು ಆಕಾಶದ ಅಳಿದುಳಿದ ಕತ್ತಲಿನ ಜಾಗದಲ್ಲಿ ಒಂದೊಂದು ನಕ್ಷತ್ರಗಳು ಮಿನುಗುತ್ತಿದ್ದವು. ಅಲ್ಲಲ್ಲಿ ಮಳೆಯ ಮೋಡಗಳು ನೀಲಿಗಟ್ಟಿಕೊಂಡು ಆ ಹೊತ್ತಲ್ಲಿ ಆ ಆಕಾಶ, ಈ ಭೂಮಿ ಮತ್ತು ಭೂಮಿಯ ಮೇಲಿರುವ ಈ ದೊಡ್ಡ ಮಸೀದಿ.

 ನೀನು ಯಾರೆಂದು ಯಾರಾದರೂ ಕೇಳಿದರೆ ನಾನು ಯಾರೆಂದು ಹೇಳಲಿ? ನಿನ್ನ ಹೆತ್ತವರು ಯಾರು, ನಿನ್ನ ಪಡೆದವನು ಯಾರು? ಎಂದು ಯಾರಾದರೂ ಕೇಳಿದರೆ ಯಾರೆಂದು ಹೇಳಲಿ? ಎಂದೂ ಕಾಣಿಸದ ಹಾಗೆ ಮಸೀದಿಯ ಪಕ್ಕಕ್ಕೆ ಒತ್ತಾಗಿ ಉದ್ದಕ್ಕೆ ಬೆಳೆದಿದ್ದ ಬಿದಿರು ಮೆಳೆಗಳು ಯಾವಾಗಲೋ ಹನಿದಿದ್ದ ಮಳೆಯ ಹನಿಗಳನ್ನು ಮೈಯ ಮೇಲೆ ಮುಡಿದುಕೊಂಡು ತಲೆದೂಗುತ್ತಾ ನೋಡುತ್ತಿದ್ದವು. ಮಸೀದಿಯ ಸುತ್ತ ಮೈದಾನ. ಆ ಕತ್ತಲೆ ಬೆಳಕಿನಲ್ಲೂ ಹಲವಾರು ಗೋರಿಗಳು. ಗೋರಿಗಳ ತಲೆ ಕಾಲುಗಳ ಭಾಗದಲ್ಲಿ ನೆಟ್ಟಿದ್ದ ಕಲ್ಲುಗಳು ಹೊಳೆಯುತ್ತಿದ್ದವು. ಎಷ್ಟು ವರ್ಷಗಳಿಂದ ತೆರೆಯುತ್ತ, ಮುಚ್ಚುತ್ತಾ, ಈ ಬೆಳದಿಂಗಳಿನಲ್ಲಿ ಹೀಗೆ ಹೊಳೆಯುತ್ತಾ ಮಲಗಿರುವ ಈ ಮಾನವನ ಮರಣ ಸಂಕೇತಗಳು,
 ಆ ರಾತ್ರಿಯಲ್ಲೂ ಹಸುವೊಂದು ಮೈದಾನದ ಗೋರಿಗಳ ಪಕ್ಕ ಬೆಳೆದಿದ್ದ ಹುಲು ಮೇಯುತ್ತಾ ಬಾಲವಾಡಿಸುತ್ತಾ ನಡೆಯುತ್ತಿತ್ತು. ಪಕ್ಕದಲ್ಲಿ ಸೂಫಿಬ್ಯಾರಿಯವರು ಮಾತನಾಡುತ್ತಾ ಕೂತಿದ್ದರು. ಸೂಫಿ ಬ್ಯಾರಿಯವರ ತಂದೆ ತಾಯಿಯರು ಮರಣವಾದ ಮಣ್ಣಾದ ಈ ಮೈದಾನದಲ್ಲಿ ನಾವಿಬ್ಬರು ಮಸೀದಿಯ ಕಟ್ಟೆಯ ಮೇಲೆ ಕೂತಿದ್ದೆವು. ಸೂಫಿಯವರು ಮನುಷ್ಯರ ಅವಿವೇಕಗಳ ಕುರಿತು ನಿಲ್ಲಿಸದೆ ಮಾತು ಮುಂದುವರಿಸಿದ್ದರು. (more…)

Thursday May 24, 2007

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

Filed under: ಅಲೆಮಾರಿಯ ದಿನಚರಿ — Rasheed @ 10:46 pm

 mallikarjun2.jpg

 ‘ಎನ್ನ ಕರದೊಳಗಿದ್ದು ಎನ್ನೊಳೇತಕೆ ಮುನಿವೆ?’ 

 ಮಲ್ಲಿಕಾರ್ಜುನ ಮನ್ಸೂರ್ ಹಾಡುತ್ತಿದ್ದಾರೆ.

‘ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ..ಕೇಳುತ್ತ ಕೇಳುತ್ತ ಮೈಮರೆತೊರಗಿದೆ ನೋಡವ್ವಾ.. ಹಾಸಿದ್ದ ಹಾಸಿಗೆಯಾ ಹಂಗಿಲ್ಲದೇ ಹೋಯಿತ್ತೂ..’ ಇನ್ನೊಂದು ಹಾಡು.

 ಸುಮ್ಮನೆ ಮುಚ್ಚಿಕೊಂಡು ಐದು ನೂರು ಪದಗಳನ್ನು ಬರೆಯಲು ಯಾಕಿಷ್ಟು ಸರ್ಕಸ್ಸು ಅನ್ನಿಸುತ್ತದೆ.ಬರೆಯುವುದು ಒಂದು ತರಹದ ದಿನನಿತ್ಯದ ವ್ಯಾಯಾಮದಂತಿರಬೇಕು.ದಿನಾ ಬೆಳಗಿನ ವಾಕಿಂಗಿನ ಹಾಗೆ.ಮಾಡುತ್ತಾ ಹೋಗಬೇಕು ಎಂದೆಲ್ಲಾ ಹೇಳಿದ್ದು ಎಲ್ಲ ಬರಹಗಾರರ ಗುರು ಸಮಾನನಾದ ಹೆಮಿಂಗ್ವೇ ಇರಬೇಕು.ಅಥವಾ ಇನ್ನೊಬ್ಬ ತೀರ್ಥರೂಪ ಸಮಾನರಾದ ಲಂಕೇಶ್!

 ’ಎನಗೆ ನಿಮ್ಮ ನೆನಹಾದಗಲೇ ಉದಯ, ಎನಗೆ  ಮರೆವಾದಾಗಲೇ ಅಸ್ತಮಾನ’ ಮನ್ಸೂರ್ ಈಗ ಬಸವಣ್ಣನವರನ್ನು ಎತ್ತಿಕೊಳ್ಳುತ್ತಿದ್ದಾರೆ.ನಾನಾದರೋ ಎಷ್ಟು ಇದ್ದರೂ ನೆಮ್ಮದಿಯೆಂಬುದು ಇಲ್ಲದ ಪ್ರಾಣಿಯಂತೆ ಚಡಪಡಿಸುತ್ತಿದ್ದೇನೆ.ನಮ್ಮಂತಹವರಿಗೆ ಯಾಕೆ ಚನ್ನಮಲ್ಲಿಕಾರ್ಜುನನೂ ಇಲ್ಲ ಕೂಡಲಸಂಗಮನೂ ಇಲ್ಲ ಎಂದೆನಿಸಿ ಪೆಚ್ಚಾಗುತ್ತದೆ.ಅಂತರಂಗ ಶುದ್ಧಿಯೂ ಇಲ್ಲದ ಬಹಿರಂಗ ಶುದ್ಧಿಯೂ ಇಲ್ಲದ ಈ ತಂತಿಯಮೇಲೆ ನಡೆಯುವ ದೊಂಬರಾಟದ ಬಾಲೆಯ ಹಾಗಿನ ದೈನಂದಿನ ಪಾಡು,ಅಲೆದಾಟ,ಕೀಟಲೆ ಮತ್ತೆ ನಡುರಾತ್ರಿ ಕಣ್ಣುಬಿಟ್ಟುಕೊಂಡು ಕೂರುವ ಈ ನಿಶಾಚರ ಬರಹ ನಗು ಬರುತ್ತದೆ.

mansur1.jpg (more…)

Wednesday May 23, 2007

ಈ ಚಿತ್ರ ತೆಗೆದ ಚಿತ್ರಗಾರನ ಹೆಸರೇನು?

Filed under: ಈ ತಾಣ ಎಲ್ಲಿ ಬಲ್ಲಿರೇನ — Rasheed @ 9:50 pm

ಮೈಸೂರಿನ ಜಗನ್ಮೋಹನ ಅರಮನೆಯ ಎದುರಿಗಿರುವ ಈ ಅಂಗಡಿಯಲ್ಲಿ ಹಳೆಯ ಕಲಾಕೃತಿಗಳೂ,ಅವುಗಳ ನಕಲು ಪ್ರತಿಗಳೂ ಸಿಗುತ್ತವೆ.

photo.jpg

ಈ ಚಿತ್ರ ತೆಗೆದ ಛಾಯಾಚಿತ್ರಗಾರನ ಚಿತ್ರ ಕೆಳಗಿದೆ

grapher.jpg

ಇವರು ಯಾರೆಂದು ಹೇಳುತ್ತೀರಾ? ಇವರನ್ನು ಕಂಡರೆ ನಿಮಗೆ  ಯಾಕೆ ಅಷ್ಟೊಂದು ಇಷ್ಟ?…ಹೇಳುತ್ತೀರಾ..

Monday May 21, 2007

ಪ್ರೊಫೆಸರ್ ವಿಕ್ರಂ ಹೇಳಿದ ‘ಚತುರಂಗ ಭವನ’ದ ಕಥೆ

Filed under: ಮೈಸೂರಿನಿಂದ ಅಂಕಣ — Rasheed @ 11:21 pm

chadurangaa.jpgನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವರ ನಿಜವಾದ ಹೆಸರು ಎಂ. ಸುಬ್ರಹ್ಮಣ್ಯ ರಾಜೇ ಅರಸ್ ಎಂಬುದು ಬಹಳ ಕಾಲದವರೆಗೆ ನನಗೆ ತಿಳಿದಿರಲಿಲ್ಲ. ಎಂ. ಅಂದರೆ ಮುದ್ದುರಾಜ ಅರಸ್. ಮುದ್ದುರಾಜ ಅರಸರು ಚದುರಂಗರ ತಂದೆ. ಅವರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದಾಗ ಇವರ ಹಿರಿಯರು ಅಲ್ಲಿಂದ ಸಮೀಪದ ಪಾಳ್ಯಕ್ಕೆ ಹೋಗಿ ನೆಲೆಸಿ ಪಾಳ್ಯದ ಚತುರಂಗ ಅರಸು ಮನೆತನದವರು ಅಂತ ಹೆಸರಾದವರು. ಈ ಮನೆತನದ ಅರಸರು ಚದುರಂಗ ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಆ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು.
ನಾನು ಬಹಳ ಕಾಲದವರೆಗೆ ಚದುರಂಗ ಎನ್ನುವುದು ಒಂದು ಕಾವ್ಯನಾಮ ಎಂದೇ ತಿಳಿದಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವಕನಾಗಿದ್ದ ನನ್ನನ್ನು ಬೆಂಗಳೂರಿನ ಚಾಮರಾಜಪೇಟೆಯ ಹಳೆಯ ಕಾಲದ ಪಬ್ ಒಂದರಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಚದುರಂಗರು ಕಥೆ ಬರೆಯುವುದು ಹೇಗೆ ಎಂದು ಸೊಗಸಾಗಿ ಪಾಠ ಹೇಳಿಕೊಟ್ಟಿದ್ದರು. ಅರೆಬಿಯನ್ ರಾತ್ರಿಗಳ ಶಹಜéಾದೆಯ ಕಥೆ ಹೇಳಿ `ಕಥೆಯೆಂದರೆ ಹೀಗಿರಬೇಕಯ್ಯ’ ಎಂದು ಬೆನ್ನು ತಟ್ಟಿದ್ದರು. ಜುಲೈಕಾ ಮತ್ತು ಯೂಸುಫ್ ಎಂಬ ಅಮರ ಪ್ರೇಮಿಗಳ ಕಥೆ ಹೇಳಿದ್ದರು. ನಾನು ನನ್ನ ಮೊದಲ ಕಥೆ ಬರೆದಾಗ ಅದರಲ್ಲಿ ಈ ಕತೆಯನ್ನೂ ಒಂದು ಚೂರು ಸೇರಿಸಿ ಖುಷಿ ಪಟ್ಟಿದ್ದೆ. ಅದನ್ನು ಓದಲು ಚದುರಂಗರಿಗೆ ಕೊಡಲು ಮರೆತುಬಿಟ್ಟಿದ್ದೆ. (more…)

ಈವತ್ತಿನ ಚಿತ್ರ

Filed under: ಈ ತಾಣ ಎಲ್ಲಿ ಬಲ್ಲಿರೇನ — Rasheed @ 9:30 am

 ಇವತ್ತು ಈ ಚಿತ್ರ ಸಾಕು.

chamundi-bettadlli.jpg

ಚಾಮುಂಡಿ ಬೆಟ್ಟದ ಮೆಟ್ಟಲ ಮೇಲೆ ಬತ್ತಿ ಮಾರುವ ಈತ

ಮತ್ತು ಸದಾ ಈತನ ಹಿಂದಿರುವ  ಈ ಆಕಳು

ಈವತ್ತು ಸೋಮವಾರ .

ಈ ದಿನ ದೂಡಲು ಇವರಿಬ್ಬರ ಮುಖದ ನೆನಪು ಸಾಕು

Sunday May 20, 2007

ವೈಕಂ ಮಹಮದ್ ಬಷೀರ್ ಎಂಬ ಕಾಲಜ್ಞಾನಿ

Filed under: ಮಾತಿಗೂ ಆಚೆ — Rasheed @ 1:33 am

basheer.jpg

‘ಸುಂದರವಾದ ಈ ಭೂಗೋಳದಲ್ಲಿ ನನಗೆ ಪಡೆದವನು ಅನುಮತಿಸಿದ್ದ ಸಮಯ ಪರಿಪೂರ್ಣವಾಗಿ ಅವಸಾನಿಸಿತು. ಇನ್ನು ಸಮಯ ಕೊಂಚವೂ ಇಲ್ಲ. ಆ ಪಡೆದವನ ಭಂಡಾರದಲ್ಲಿ ಮಾತ್ರ ಸಮಯವಿದೆ. ಎಂದಿಗೂ, ಎಂದೆಂದಿಗೂ ಮುಗಿಯದ ಸಮಯ ಅನಂತ ಅನಂತವಾದ ಸಮಯ’ ‘ನಾನು ತೀರಿಹೋದೆ.. ನನ್ನ ಇನ್ನು ಯಾರಾದರು ನೆನಪಿಸಬೇಕೆ? ನನ್ನ ಯಾರೂ ನೆನಪಿಸುವುದು ಬೇಡ ಎಂದು ನನಗೆ ಅನ್ನಿಸುತ್ತಿದೆ. ಯಾಕೆ ನೆನಪಿಸುವುದು? ಕೋಟ್ಯಾನುಕೋಟಿ ಅನಂತ ಕೋಟಿ ಸ್ತ್ರೀ ಪುರುಷರು ತೀರಿಹೋಗಿಲ್ಲವೇ? ಅವರನ್ನು ಯಾರು ನೆನಪಿಸುತ್ತಾರೆ?’ ‘ನನ್ನ ಪುಸ್ತಕಗಳೆಲ್ಲ ಎಷ್ಟು ಕಾಲ ನೆಲೆ ನಿಲ್ಲಬಹುದು? ಹೊಸಲೋಕ ಬರುವುದಲ್ಲವಾ? ಹಳೆಯದೆಲ್ಲ ಹೊಸದರಲ್ಲಿ ಮಾದು ಹೋಗಬೇಕಲ್ಲವಾ?’
ಮಲಯಾಳದ ಮಹಾಬರಹಗಾರ ವೈಕಂ ಮಹಮದ್ ಬಷೀರ್ ತನ್ನ ಕೊನೆಯ ಬರಹದಲ್ಲಿ ಬರೆಯುತ್ತಿದ್ದಾರೆ. (more…)

Saturday May 19, 2007

ಮಲೆನಾಡಿನ ತರಳೆಯೊಬ್ಬಳ ಕವಿತೆಗಳು

Filed under: Friends — Rasheed @ 12:59 pm

 ನಾನು ಸಾಗರದ ಶಿಲಾಬಾಲಿಕೆ ಅಂತ ಹೇಳಿ ಒಬ್ಬರು ಕವಿತೆಗಳನ್ನು ಮೇಲ್ ಮಾಡಿದ್ದಾರೆ. ಓದಲು ಚೆನ್ನಾಗಿಯೇ ಇರುವ ಈ ಕವಿತೆಗಳು ನಿಮ್ಮ ಸಂತೋಷಕ್ಕಾಗಿ:

 

poetry.jpg

 

 

1

ಇದು ತೀರಾ ಖಾಸಗಿ ಸಂಗತಿ ಎಂಬಂತೆ

 ಉರಿಯ ನಡುವೆ ಮಳೆ ಎರಡು ಹನಿ

 ಬೀಳಿಸಿ  ಹೋಯಿತು.ಮಣ್ಣೆಲ್ಲ ಘಂಅಂತ ಪುಲಕಗೊಂಡು

ನೀ ಬಂದಾಗ ನನಗೆ ಆಗುವ ಹಾಗೆ

ಬನದಲ್ಲಿ ನವಿಲುಗಳು ಕೇಕೆ ಹಾಕಲು ತೊಡಗಿತು.

poetry2.jpg

                     2

 ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ

ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ

ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ

ವರದಾ ನದಿಯ ನೀರು ನೀಲಿ

ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ!

poetry4.jpg

 

3

 ನೀನು ಸಣ್ಣಗಿದ್ದೀಯಆದರೂ  ಚನ್ನಾಗಿದ್ದೀಯ

ಯಾಕೆ ಸಣ್ಣಗೆ ಕಂಪಿಸುತ್ತೀಯ?

ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ

ನೀನು ಸಹೋದರೀಅಂದೆ

ಆದರೂ ನನಗೆ ಖುಷಿಯಾಯಿತು

ನೀ ಇನ್ನೆಂದು ಬರುವೆ?

poetry6.jpg

 

 

4

 ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು

ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್

ಸರಿಮಾಡಿಕೊಂಡು ಹೊರಟ

ಅಮ್ಮ ತುರಿಮಣೆ ಎಳಕೊಂಡು ಕುಳಿತಳು

ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ

ಕೃಷ್ಣ  ಬಂಗಾರ ವರ್ಣ

ಜೋಕಾಲಿಯಾಡುತ್ತಿದ್ದ!

poetrylast1.jpg

[ಬಹುಶಃ ನಿಮ್ಮ ಪ್ರತಿಕ್ರಿಯೆ ಈ ಕವಯತ್ರಿಯನ್ನು ಇನ್ನಷ್ಟು activate-motivate  ಮಾಡಬಹುದು]

Thursday May 17, 2007

ಅಲ್ಬರ್ಟ್ ಕಮು ಬರೆದ ಒಂದು ಹಳೆಯ ಕಾದಂಬರಿ

Filed under: ಮಾತಿಗೂ ಆಚೆ — Rasheed @ 7:56 am

ಪ್ಲೇಗ್ ಮಾರಿಯ ಮೇಲೆ ಮಾನವ ಭಾಷ್ಯ

plague1.jpg

ಎಂಟು ತಿಂಗಳ ಕಾಲ ಮರಣ ನರ್ತನ ನಡೆಸಿದ ಪ್ಲೇಗ್ ಮಾರಿ ಆಯಾಸಗೊಂಡಂತೆ ನಟಿಸುತ್ತಾ ಹಿಮ್ಮೆಟ್ಟಿದ್ದಾಳೆ. ಮರಣ ಭಯದಲ್ಲಿ ಕಳೆದ ಈ ನಗರ ಇದ್ದಕ್ಕಿದ್ದಂತೆ ಉಲ್ಲಾಸಗೊಳ್ಳುತ್ತಿದೆ. ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ನಗರದ ಬಾಗಿಲುಗಳು ತೆರೆದುಕೊಂಡಿವೆ. ಅಗಲಿ ಇದ್ದವರು ಒಂದಾಗುತ್ತಿದ್ದಾರೆ. ಪ್ರೇಮಿಗಳು, ಗಂಡ-ಹೆಂಡತಿಯರು ತೆರೆದ ತೋಳುಗಳಿಂದ ನಡು ಬೀದಿಯಲ್ಲೇ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ನಿಂತು ಹೋಗಿದ್ದ ರೈಲ್ವೆ ಎಂಜಿನ್‌ಗಳಿಂದ ಹೊಗೆ ಏಳುತ್ತಿದೆ. ಮುಚ್ಚಿದ್ದ ನಗರದ ಬಂದರಿಗೆ ಹಡಗುಗಳು ಬರತೊಡಗಿವೆ. ಪ್ಲೇಗಿನಿಂದ ಬದುಕಿ ಉಳಿದ ಜನ ಮೈಮರೆತು ಕೇಕೆ ಹಾಕುತ್ತಿದ್ದಾರೆ. ನಗರ ತನ್ನ ಸಹಜ ಓಟಕ್ಕೆ ಸಿದ್ಧವಾಗುತ್ತಿದೆ. ಎಲ್ಲವೂ ಎಲ್ಲರೂ ಅವರವರ ಖಾಸಗೀ ಕೋಣೆಗಳಿಗೆ ಮರಳುತ್ತಿದ್ದಾರೆ….

ಆದರೆ ನೂರಾರು ಜನ ರೈಲಿನಲ್ಲಿ ನಗರಕ್ಕೆ ಮರಳಿ ಬಂದವರು ನಿಲ್ದಾಣದಲ್ಲಿ ತಮ್ಮನ್ನು ಕಾದುನಿಲ್ಲಬೇಕಾಗಿದ್ದವರ ಮುಖ ಕಾಣದೆ ಎಲ್ಲ ಗೊತ್ತಾದವರಂತೆ ದಂಗು ಬಡಿದು ನಿಂತಿದ್ದಾರೆ. ಅವರ ಮನಸ್ಸಿನಲ್ಲಿ ಅನಿಸಿದ್ದು ನಿಜವಾಗಿದೆ. ಅವರಿಗೆ ಕಾಯಬೇಕಾಗಿದ್ದವರು ಈಗ ದೊಡ್ಡ ಮಣ್ಣಿನ ಹೊಂಡಗಳಲ್ಲಿ ಕ್ರಿಮಿನಾಶಗಳ ನಡುವೆ ಪದರ ಪದರಗಳಲ್ಲಿ ಹೆಣವಾಗಿ ಕೊಳೆತುಹೋಗುತ್ತಿದ್ದಾರೆ. ತಾಯಂದಿರು ಹೆಂಡತಿಯರು, ಪ್ರೇಮಿಗಳು ರೈಲ್ವೆ ನಿಲ್ದಾಣದಲ್ಲಿ ಹಾಗೇ ಗರಬಡಿದು ನಿಂತಿದ್ದಾರೆ. ಅವರಿಗೆ ಅಳು ಬರುತ್ತಿಲ್ಲ.

ಈ ಸುಖ ದುಃಖದ ಪ್ರೇಮದ ವಿರಹದ ನೂಕು ನುಗ್ಗಲಿನ ನಡುವೆ ಏಕಾಂಗಿಯಾಗಿ ಈ ಡಾಕ್ಟರ್ ಮನೆಯೊಂದರ ತಾರಸಿಯ ಮೇಲೆ ನಿಂತು ನಗರದ ಬೀದಿಗಳನ್ನೂ ಆಕಾಶವನ್ನೂ ಹಾಗೂ ಕಡಲನ್ನು ನೋಡುತ್ತಿದ್ದಾನೆ. ಅವುಗಳೆಲ್ಲವು ಏನೂ ಆಗದೆ ಹಾಗೆ ಹಾಗೇ ಇವೆ. ಆದರೆ ಈ ಡಾಕ್ಟರನಿಗೆ ಗೊತ್ತಿದೆ. ಆತ ಹೇಳ ಹೊರಟಿರುವ ಕಥೆ ವಿಜಯದ ಕಥೆಯಲ್ಲ. ಇದು ಭಯದ ವಿರುದ್ಧ ನಡೆಯುವ ಎಂದೆಂದೂ ಮುಗಿಯದ ಹೋರಾಟದ ಕಥೆ. ಅವರವರರ ಖಾಸಗೀ ನಂಬಿಕೆಗಳು ಏನೇ ಇದ್ದರೂ, ಸಂತರಾಗಲು ಸಾಧ್ಯವಾಗದೇ ಹೋದರೂ ಈ ಪ್ಲೇಗ್ ಎಂಬ ಮಾರಿಗೆ ತಲೆಬಾಗಲು ನಿರಾಕರಿಸಿ, ಆದಷ್ಟೂ ಜನರನ್ನು ಉಳಿಸಿಕೊಳ್ಳಲು ಹೆಣಗಿದ ಮಾನವಂತರ ಕಥೆ. (more…)

Wednesday May 16, 2007

ಒಂದು ದಶಕದ ಹಿಂದಿನ ಒಂದು ಪ್ರಬಂದ…..

Filed under: ಪ್ರಬಂಧ — Rasheed @ 1:01 am

 ಯಾಕೆ ಈ ಪ್ರೇಮದ ಜೀವಕೆ ಸಾವಿನ ಚಿಂತೆ…..

young3.jpg

  ಪುಟ್ಟ ಹುಡುಗಿಯಾಗಿದ್ದ ಈ ಚಂದದ ಹುಡುಗಿ ಈಗ ದೊಡ್ಡವಳಾದ ಮೇಲೂ ಮರೆಯದೆ ಸುಂದರವಾದ ರಾಖಿಯೊಂದನ್ನು ಅಂಚೆಯಲ್ಲಿ ಕಳುಹಿಸಿದ್ದಾಳೆ. ಪತ್ರದಲ್ಲಿ ಏನು ಏನೆಲ್ಲ ಹುಚ್ಚು ಹುಚ್ಚಾಗಿ ಮೊದ್ದು ಮೊದ್ದಾಗಿ ತುಂಟತನದಿಂದ ಬರೆದಿದ್ದಾಳೆ. ಅವಳು ಕಳುಹಿಸಿದ ಈ ಪಂಚವರ್ಣದ ರಾಖಿ ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ಕೈಯ ಮೊಣಗಂಟಿನ ಬಳಿಯಲ್ಲಿ ವಿಚಿತ್ರವಾದ ಚಿತ್ರಗಳನ್ನು ಮೂಡಿಸಿದೆ. ನಾನು ಇವಳ ವೈಖರಿಯ ಕುರಿತು ಯೋಚಿಸುತ್ತಿದ್ದೇನೆ. ಚಂದದ ಪುಟ್ಟ ಹುಡುಗಿಯಾಗಿದ್ದ ಇವಳು ಬೆಳೆದು ಪುಟ್ಟ ಹೆಂಗಸಾಗಿರುವುದು ಚಂದಕ್ಕೆ ಏನೆಲ್ಲ ಗೀಚುತ್ತಾ, ಏನೆಲ್ಲ ಹರಟುತ್ತಾ, ಗೆಳತಿಯರ ಜೊತೆ ಸಿನಿಮಾ ನೋಡಿಬಂದು ಅದರ ಕತೆಯ ಕುರಿತು ಅವರೊಡನೆ ಹರಟುತ್ತಿದ್ದ ಇವಳು ಈಗ ಬೆಳೆದಿರುವುದು. ಕವಿತೆ ಬರೆಯುತ್ತಿರುವುದು, ಹಲವು ಹುಡುಗರ ನಿದ್ದೆಗೆಡಿಸಿ ಏನೂ ಆಗಿಯೇ ಇಲ್ಲವೆಂಬಂತೆ ಮೊದ್ದು ಮೊದ್ದಾಗಿ ತೊದಲುವುದು, ಅವರು ಅವಳ ಕುರಿತು ಹಲವು ಮಾತನ್ನಾಡಿ ಬಸವಳಿದು ಹೋಗುವುದು ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿದೆ. ನನಗೆ ವಯಸ್ಸಾಗಿ ಹೋಗುತ್ತಿದೆ ಅನಿಸಿ ಸಣ್ಣಗೆ ಕಂಪಿಸುತ್ತೇನೆ.        ಹಾಗೇ ಇಲ್ಲ ಎಂದು ಜೋರಾಗಿ ನಕ್ಕುಬಿಡುತ್ತೇನೆ.

ದೂರದ ಊರಿಗೆ ಓದಲು ಹೋಗಿರುವ ಈ ಹುಡುಗಿ ಅಲ್ಲಿಂದ ನನಗೆ ಬರೆದಿದ್ದಾಳೆ: ‘ಇಲ್ಲಿ ನನಗೆ ತುಂಬಾ ಜನ ಗುರುತಾಗಿದ್ದಾರೆ. ಎಲ್ಲರೂ ನಾನು ಪ್ರಶ್ನೆಯಾಗಿ ಕಾಡಿದೀನೋ ಅನ್ನೋ ಹಾಗೆ ನಡೀತಾರೆ. ನಂಗೆ ಎಲ್ಲಾ ತಮಾಷೆ ಅನ್ಸುತ್ತೆ…. ಹೇಗಿದ್ದಿಯಾ? ಅತ್ತಿಗೆ ಹೇಗಿದ್ದಾರೆ. ಮತ್ತೇನು ವಿಶೇಷ ?…. ರಾಖಿ ಕಳಿಸ್ತಿದೀನಿ.  ರಾಖಿಯ ಬಣ್ಣಗಳು ನಿನ್ನ ಕೈಮೇಲೆ ಹರಡೋದನ್ನ ನೆನಸ್ಕೊಂಡ್ರೆ ಒಂಥರಾ ಮಜ’ ಎಂದು ಮುಗಿಸಿದ್ದಾಳೆ. ನಾನು ಅವಳು ಬರೆದ ಹಾಗೆ ಕೈಯ ಮೇಲೆ ರಾಖಿಯ ಬಣ್ಣ ಹರಡಿಕೊಂಡು ಎಲ್ಲ ಯೋಜಿಸಿಕೊಂಡು ಸುಸ್ತಾಗಿ ಕುಳಿತಿದ್ದೇನೆ. ಅಲ್ಲಿ ತಂಗಿ, ಅತ್ತಿಗೆ, ತಾಯಿ, ಮಗಳು, ಹೆಂಡತಿ ಹೀಗೆ ಈ ಹುಡುಗಿಯರ ಪಂಚವರ್ಣದ ಚಕ್ರ ಅಂಗೈಯಲ್ಲಿ ಗಿರ್ರನೆ ತಿರುಗಿ ಎಲ್ಲವೂ ದಿಗ್ಭ್ರಮೆಯಂತೆ ಕಾಣಿಸುತ್ತಿದೆ.

young2.jpg

ಈ ಹುಡುಗಿ ತಾನು ಓದುತ್ತಿರುವ ಕ್ಯಾಂಪಸ್ಸಲ್ಲಿ ಹಲವು ಹುಡುಗರ, ಹಲವು ಕವಿಗಳ, ಹಲವು ಪ್ರೇಮಿಗಳ, ಹಲವು ಮುದುಕು ಗಂಡಸರ, ಹಲವು ಒಂಟಿ ಹೆಂಗಸರ ನಡುವೆ ತಂಗಾಳಿಯಂತೆ, ನಿಟ್ಟುಸಿರಿನಂತೆ ಓಡಾಡುತ್ತಿದ್ದಾಳೆ. (more…)

Monday May 14, 2007

ಬೈಕು ಪಾಲಿಸುವ ಮರಳು ಗೋಪಾಲ

Filed under: ಮೈಸೂರಿನಿಂದ ಅಂಕಣ — Rasheed @ 10:47 pm

             gopalafirst.jpg

ಬೈಕಿನ ರಿಮ್ಮು ಒರೆಸುವ ಮರಳು ಗೋಪಾಲನ ಕುರಿತು ಗದ್ಯದಲ್ಲಿ ಬರೆಯುವುದೋ ಪದ್ಯದಲ್ಲಿ ಬರೆಯುವದೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಂದಿಗ್ಧತೆ ಎಂದೂ ಎದುರಾಗಿಯೂ ಇರಲಿಲ್ಲ. ನನ್ನ ಬೈಕಿನ ಬೇರೆ ಎಲ್ಲಾ ಭಾಗಗಳೂ ಕೊಳೆಯಿಂದ ತುಂಬಿದ್ದರೂ ಚಕ್ರಗಳ ನಡುವಿನ ಲೋಹದ ರಿಮ್ಮುಗಳು ಯಾವಾಗಲೂ ಪಳಪಳನೆ ಹೊಳೆಯುತ್ತಿರುವ ಹಿಂದಿನ ಗುಟ್ಟು ಈವತ್ತಿನವರೆಗೆ ನನ್ನ ಹೆಂಡತಿಗೂ ಗೊತ್ತಿರಲಿಲ್ಲ. ಈವತ್ತು ಬರೆಯುವ ಮೊದಲು ಈ ಕುರಿತು ನನ್ನೊಳಗೂ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಆಕೆಗೆ ಮರಳು ಗೋಪಾಲನ ಕತೆ ಹೇಳಿ ಮುಗಿಸಿ ಆತನ ಚಿತ್ರಗಳನ್ನು ತೋರಿಸಿ ಬರೆಯಲು ಕುಳಿತಿರುವೆ.

ದಿನವೂ ನನ್ನ ಬೈಕಿನ ರಿಮ್ಮನ್ನು ಮಾತ್ರ ಒರೆಸಿ ಪಳಪಳ ಮಾಡಿ ಒಂದು ರೂಪಾಯಿ ನಾಣ್ಯವನ್ನು ಇಸಕೊಂಡು ತನ್ನ ನಾಯಿ ಕರಿಯನ ಜೊತೆ ಮರೆಯಾಗುವ ಈ ಗೋಪಾಲ ಉಳಿದ ಸಮಯದಲ್ಲಿ ಎಲ್ಲಿರುತ್ತಾನೆ ಹೇಗಿರುತ್ತಾನೆ ಎಂಬುದು ಇದುವರೆಗೆ ನನಗೂ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದ ನಂತರ ಈತನನ್ನು ಹುಡುಕುತ್ತಾ ಒಂಟಿಕೊಪ್ಪಲಿನ ಓಣಿ ಓಣಿಗಳಲ್ಲಿ  ಆತನನ್ನೂ ಆತ ಸಾಕಿರುವ ಇತರ ನಾಲ್ಕು ನಾಯಿಗಳನ್ನು ನೋಡಿ ಆತನೊಡನೆ ಮಾತನಾಡಿ ಏನೂ ಗೊತ್ತಾಗದೆ ಬಂದು ಕೂತಿರುವೆ.

gopala-2.jpg

ಮೈಸೂರಿನ ಯಾದವಗಿರಿಯಲ್ಲಿರುವ ತ.ರಾ.ಸು. ವೃತ್ತದ ಒಂದು ಮೂಲೆಯಲ್ಲಿರುವ ಗೂಡಂಗಡಿಯ ಮುಂದೆ ಟೀ ಕುಡಿಯಲು, ಸಿಗರೇಟು ಸೇದಲು, ಲಾಟರಿ ಟಿಕೇಟುಗಳನ್ನು ಕೊಳ್ಳಲು ಹತ್ತಾರು ಜನ ಬರುತ್ತಾ ಹೋಗುತ್ತಾ ಇರುತ್ತಾರೆ. ಕೆಲವರು ದಿನವಿಡೀ ಅಲ್ಲಿ ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಾರೆ. ಬೆಳಗಿನ ಸುಮಾರು ಎಂಟು ಗಂಟೆಯಿಂದ ಹತ್ತುಗಂಟೆಯವರೆಗೆ ಈ ಗೋಪಾಲ ಕೈಯಲ್ಲಿ ಒಂದು ಮಾಸಿದ ಬಟ್ಟೆ ಹಿಡಿದುಕೊಂಡು ಬಾಯಲ್ಲಿ ಯಾರೋ ಎಳೆದು ಬಿಸಾಕಿದ ಸಿಗರೇಟು ತುಂಡನ್ನು ಕಚ್ಚಿಕೊಂಡು ಯಾರದಾದರೂ ಬೈಕಿನ ರಿಮ್ಮನ್ನು ಒರೆಸುತ್ತಾ ಕುಳಿತಿರುತ್ತಾನೆ. ಆತನ ಕರಿಯ ಎಂಬ ಹೆಸರಿನ ನಾಯಿ ಆತನ ಪಕ್ಕದಲ್ಲಿ ಧ್ಯಾನ ಮಾಡುವಂತೆ ಮಲಗಿರುತ್ತದೆ. ರಿಮ್ಮ ಒರೆಸುವ ಗೋಪಾಲ ಕೆಲವೊಮ್ಮೆ ವಿನಾಕಾರಣ ಕಿರುಚುತ್ತಾನೆ. ನಾಟಕದ ಹಾಡುಗಳನ್ನು ಹಾಡುತ್ತಿರುತ್ತಾನೆ. ತನ್ನಷ್ಟಕ್ಕೆ ಯಾರಾದರೂ ಜೊತೆ ವಾಗ್ವಾದದಲ್ಲಿ ತೊಡಗಿರುತ್ತಾನೆ. ಆತನ ಮುಖ ಸದಾ ವ್ಯಗ್ರವಾಗಿರುತ್ತದೆ. ಏನಾದರೂ ಮಾತನಾಡಿಸಿದರೆ ಎದ್ದು ಪರಚುವಂತೆ ಕಾಣುತ್ತಾನೆ. ಹಾಗಾಗಿ ಈತನ ಸಹವಾಸವೂ ಬೇಡ, ಈತನ ಕಥೆಯೂ ಬೇಡ ಎಂದು ಯಾವಾಗಲೂ ಈತ ಒರೆಸಿ ಮುಗಿಸಿದೊಡನೆ ಒಂದು ರುಪಾಯಿ ನಾಣ್ಯವನ್ನು ಕೈಗಿತ್ತು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ನಿನ್ನೆಯೂ ಹಾಗೆಯೇ ಮಾಡಲು ಹೊರಟಿದ್ದೆ. (more…)

ಲಂಕೇಶರ ಕೊನೆಯ ದಿನಗಳು

Filed under: ಅಲೆಮಾರಿಯ ದಿನಚರಿ — Rasheed @ 12:13 am

lankesh.jpg

[ಕಿ.ರಂ,ಲಂಕೇಶ್ ಜೊತೆಯಲ್ಲಿ]

ಬಹುಶಃ ಬದುಕಿದ್ದರೆ ಲಂಕೇಶರಿಗೆ  ೭೧ ವರ್ಷ ತುಂಬಿ ಎರಡು ತಿಂಗಳಾಗುತ್ತಿತ್ತು. ಈ ತುಂಬುತ್ತಿತ್ತು ಅನ್ನುವುದನ್ನು ಲಂಕೇಶ್ ಶೈಲಿಯಲ್ಲಿಯೇ ಯೋಚನೆ ಮಾಡುವುದಾದರೆ  ಅವರಿಗೆ ಈಗ ಮಕ್ಕಳಿಂದ ಒದ್ದು ಹೊರಗೆ ಹಾಕಿಸಿಕೊಳ್ಳುವ ವಯಸ್ಸು.

ಒಂದು ಸಲ ನಾನು ಸ್ವಲ್ಪ ಕೃತಕ ಭಾವುಕತೆ ತುಂಬಿಸಿಕೊಂಡು `ಸರ್,ನಿಮ್ಮ`ಅವ್ವ’ಕವಿತೆ… ಬಹುಶಃ ನಿಮ್ಮ ಅವ್ವ ಬದುಕಿದ್ದಿದ್ದರೆ..’ಅಂತೆಲ್ಲ ಹೇಳಿ ಅವರನ್ನು ಪೂಸಿ ಹೊಡೆಯಲು ನೋಡಿದ್ದೆ.

`ಅಯ್ಯೋ ಮಾರಾಯ ಅವಳೇನಾದರೂ ಈಗಲೂ ಬದುಕಿದ್ದರೆ ದೊಡ್ಡ ರಗಳೆಯಾಗಿರೋದು.ಯಾರುಯಾರು ಯಾವಯಾವ ಕಾಲದಲ್ಲಿ ಸಾಯಬೇಕೋ ಆಗ ಸಾಯಬೇಕು.ಇಲ್ಲದಿದ್ರೆ ಫಜೀತಿ ಯಾಗೋದು’ ಅಂತ ಅವರ ನಾಚುಕೆಯ ಹುಡುಗನ ಶೈಲಿಯಲ್ಲಿ ನಕ್ಕಿದ್ದರು.ಆಗ ಅವರು ತೀರಿಹೋಗಲಿಕ್ಕೆ ಕೆಲವೇ ತಿಂಗಳುಗಳು ಉಳಿದಿತ್ತು. (more…)

Saturday May 12, 2007

ಒಂದು ಸಣ್ಣ ಕವಿತೆ

Filed under: ಹಾಡು-ಪಾಡು — Rasheed @ 12:37 am
  • ನಿನ್ನ ವಾಸನೆ ಸೂಸಲಿ ಈ ಚಾದರದಲ್ಲಿ……

hebbar.jpg

 ನಿನ್ನ ಮೈವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಬೇಡ ಇರುವಾಗಲೇ…

ಹಾಗೆ ನೋಡಿದರೆ ನಾವು ಕೂಡಿದ್ದೇ ಇಲ್ಲ
ಕಂಡೇ ಇಲ್ಲ.ಎಣಿಸಿದ್ದು ಮಾತ್ರ
ಏನೆಲ್ಲಾ ನಡೆಸಿರುವೆವೆಂದು.

 ನೀನು ಬೆಳಕ ಪುತ್ಥಳಿ,ಒಂದು ಅನನ್ಯ ಪರಿಮಳ,
ಬೆಳಗೇ ತಲೆಕೆಳಗೆ ಬಿದ್ದ ಪಾರಿಜಾತ.
ನೀನು ನಕ್ಷತ್ರಮುಖಿ ಕೋಲು ಬೆಳಕು
 ಮೈಯ್ಯ ಕತ್ತಲೊಳಕ್ಕೆ ಬಾಚಿ ಎಳೆದು ನನ್ನ ಕಣ್ಣ ಮುಚ್ಚಿದವಳು.

 ಮಲೆಯ ಒರತೆಯಂತವಳು.

ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ.
ನೆನಪೆಂಬುದು ಯಾಕೆ ಇರುವಾಗಲೇ.

 ಜಿನುಗು ಜಿನುಗುತ್ತಲೇ ಸುಖ ಸಂಕಟ
ಇನ್ನು ಇನ್ನೇನೋ ಗೊತ್ತಿಲ್ಲದ ಸದ್ದ ಅದುಮಿ ಹಿಡಿದವಳು.
 ನೀನು ಕಳ್ಳಗುಟ್ಟಿನ ಹೆಣ್ಣು, ಹೆತ್ತ ಎದೆಯವಳು
ಚೂಟಾಟದ ಹುಡುಗಿ, ನಡುವೆ ಎದ್ದು ಮೈ ಕೊಡವಿ
 ಮತ್ತೆ ಅಣಿಯಾದವಳು.

ಏನೂ ಗೊತ್ತಿಲ್ಲ ಎಂದವಳು,
ಎಷ್ಟೆಲ್ಲ ಕಲಿಸಿ.

 ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಯಾಕೆ ನಾವು ಇರುವಾಗಲೇ.

 

 

ಅಚಲ್ ರಹೋ ರಾಜಾ : ದೇವತೆಯರಲ್ಲಿ ಒಂದು ಮೊರೆ

Filed under: ಅಲೆಮಾರಿಯ ದಿನಚರಿ — Rasheed @ 12:18 am

  achal2.jpg

ಈ ನಡುರಾತ್ರಿಯಲ್ಲಿ ಆ ಕೂಗು ಹಾಗೆಯೇ ಇನ್ನೂ ಕೇಳಿಸುತ್ತಿದೆ.ಕಾಲ ಇಷ್ಟು ಕಳೆದಿದ್ದರೂ ಆ ಕೂಗು ಇನ್ನೂ ಹಾಗೆಯೇ.ಕಾಫಿ ತೋಟದ ನಮ್ಮ ಬಿಡಾರದ ಮುಂದೆ ಸದಾ ಎರಡು ಮುತ್ತೈದೆಯರ ಹಾಗೆ ನಿಂತುಕೊಂಡಿದ್ದ ಜೋಡಿ ಪೇರಳೆ ಮರಗಳು.ಒಂದು ಬಟರ್ ಫ್ರೂಟಿನ ಅಸಹಾಯಕ ಮರ.ಪೇರಳೆ ಮರಗಳಿಗೆ ಜೋತು ಬಿದ್ದು ಪವಡಿಸಿದ್ದ ಮಲ್ಲಿಗೆಯ ಬಳ್ಳಿ.ಅದರಲ್ಲಿ ಆಗಾಗ ಕಂಡು ಬರುತ್ತಿದ್ದ ಪುಡಿ ಮಕ್ಕಳಂತಹ ಮಲ್ಲಿಗೆ ಮೊಗ್ಗುಗಳು.ಒಂದು ಕಂಬಳಿ ಹಣ್ಣಿನ ಗಿಡ.ಕೆಳಗೆ ಏಲಕ್ಕಿ ಕಾಡು.ಬತ್ತದ ಗದ್ದೆ.ಅಲ್ಲೇ ಎಲ್ಲೋ ಇದ್ದ ಒಂದು ಕೊಳ.ಅದರ ಸುತ್ತಲೂ ಏಡಿ ಮಣ್ಣಲ್ಲಿ ಏಡಿಗಳು ಗುಂಡಿ ತೋಡಿ ಮೇಲಕ್ಕೆ ಬಿಸಾಡಿದ್ದ ಒದ್ದೆ ಮಣ್ಣಿನ ಗೂಡು.ಬಿದ್ದ ಕೆಂಪು ಪಾಲವಾನದ ಹೂಗಳು.ನಾಚಿಕೆ ಮುಳ್ಳು.ಕೆಸರಲ್ಲಿ ಬೆಳೆದಿದ್ದ ಕೆಸದ ಕಾಡು. ಹಗಲಿಡೀ ಅದರೊಳಗೆ ಆಡಿ ಮುಗಿದು ಕತ್ತಲಾಗಿ ಮನೆಗೆ ಬಂದು ಆದರೆ ಪೇಟೆಗೆ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋದ ಅಣ್ಣ ಇನ್ನೂ ಕತ್ತಲಾದರೂ ಮನೆಗೆ ಬಂದಿಲ್ಲ ಎಂದು ನಾವೆಲ್ಲಾ ಕತ್ತಲಲ್ಲಿ ಕಾಯುತ್ತಾ ಕುಳಿತಿದ್ದರೆ ಆ ಕತ್ತಲಲ್ಲಿ ರಕ್ತ ಸಂಚಾರವಾದಂತೆ ಆ ಕೂಗು ಕೇಳಿ ಬರುತ್ತಿತ್ತು.

achal3.jpg

 ಅದು ಕಮ್ಯುನಿಷ್ಟ್ ಕಣ್ಣನ್  ತನ್ನ ಕೊಲೆಯಾದ ಮಗನ ತಲೆಯನ್ನು ಬೊಗಸೆಯಲ್ಲಿ ಎತ್ತಿಕೊಂಡು ರೋಧಿಸುತ್ತಾ ಕತ್ತಲಲ್ಲಿ ಅಲೆದಾಡುತ್ತಿರುವ ಸದ್ದು ಎಂದು ಎಲ್ಲರೂ ಹೇಳುತ್ತಿದ್ದರು. (more…)

Friday May 11, 2007

ಕಿ.ರಂ.ನಾಗರಾಜ್ ಎಂಬ ಗಾರುಡಿಗ

Filed under: ಮಾತಿಗೂ ಆಚೆ — Rasheed @ 1:27 am

 kiram.jpg

ಶ್ರಾವಣದ ಕೊನೆಯ ಶನಿವಾರ ಅಪರಾಹ್ನ. ಕೊತ್ತಂಬರಿ, ಮೆಂತೆ ಸೊಪ್ಪು, ಚೆಂಡು ಹೂ, ಸೇವಂತಿಗೆ. ಕುಂಕುಮ, ಅಗರಬತ್ತಿ ಮತ್ತು ಬೀದಿಯ ತುಂಬ ತಳ್ಳಾಡುತ್ತಾ ಹೆಗಲಿಗೆ ಒರೆಸಿ ಬೆವರುತ್ತ ನಡೆಯುತ್ತಿರುವ ಮಂದಿಯ ಮಿಶ್ರ ಪರಿಮಳ.

ಕಿ.ರಂ ನನ್ನನ್ನು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ತಾಗಿಕೊಂಡಿರುವ ರಸ್ತೆಗಳಲ್ಲಿ ನಡೆಸುತ್ತಿದ್ದರು. ಎಲ್ಲ ದೇವಾಲಯಗಳೂ, ದೇವ ದೇವತೆಗಳೂ ಹಳದಿಯ ಹೂಗಳಿಂದ ಅಲಂಕೃತಗೊಂಡು ಸಂಜೆಗೆ ಬರುವ ಭಕ್ತರನ್ನು ಕಾಯುತ್ತಿದ್ದವು.. ಈ ದೇವರುಗಳು, ಈ ದೇವತೆಗಳು, ಈ ತಳ್ಳುವ ಜನರು, ಈ ಅಗಾಧ ಮನುಷ್ಯವಾಸನೆ ಮತ್ತು ಹೂವುಗಳ ಪರಿಮಳ. ನಾವು ಅವೆನ್ಯೂ ರಸ್ತೆಯ  ಆ ಸಂಗೀತದ ಅಂಗಡಿಯನ್ನು ಅರಸಿಕೊಂಡು ನಡೆಯುತ್ತಿದ್ದೆವು. ಕಿ.ರಂ ಈ ಹಳೆಯ ಸಂಗೀತದ ಅಂಗಡಿಯ ಕಥೆಯನ್ನು ಹೇಳುತ್ತಿದ್ದರು. ಅವರು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ದೂರದ ಸೆಂಟ್ರಲ್ ಕಾಲೇಜಿಗೆ ದಿನವೂ ನಡೆಯುತ್ತಾ ದಾರಿಯಲ್ಲಿ ಸಿಗುವ ಈ ಸಂಗೀತದ ಅಂಗಡಿ, ಶೆಟ್ಟಿಯೊಬ್ಬ ಸಂಗೀತದ ಗ್ರಾಮೊಫೋನ್ ತಟ್ಟೆಗಳನ್ನು ಪೇರಿಸಿಟ್ಟು ಮಾರುತ್ತಾ, ಬಾಡಿಗೆಗೆ ನೀಡುತ್ತಾ ಕುಳಿತಿರುತ್ತಿದ್ದ. ಆತನ ಅಂಗಡಿಯ ಅಟ್ಟದಲ್ಲೊಂದು ಹಳೆಯ ಎಚ್ಎಂವಿ ಗ್ರಾಮೊಫೋನ್, ಹಿತ್ತಾಳೆಯ ಹಾನರ್ಿನ, ಎಪ್ಪತ್ತೇಳು ಆರ್.ಪಿ.ಎಂ. ವೇಗದ, ಕೈಯಿಂದ ಕೀಲಿ ತಿರುಗಿಸಿ ಹಾಡಿಸುವ ಈ ಗ್ರಾಮೊಫೋನ್ ಯಂತ್ರ ಆತನ ಅಂಗಡಿಯ ಅಟ್ಟದಲ್ಲಿ ದೇವತೆಯಂತೆ ಕೂತಿರುತ್ತಿತ್ತು. ಆತ ಕೇಳಿದವರಿಗೆ ಈ ಸಂಗೀತದ ತಟ್ಟೆಗಳನ್ನು ಬಿಕರಿ ಮಾಡುತ್ತಾ,  ಬಾಡಿಗೆಗೆ ಕೊಡುತ್ತಾ, ಕೊಳ್ಳಲಾಗದ ಹುಡುಗರಿಗೆ ಹಾಡಿಸಿ ಕೇಳಿಸುತ್ತಾ ಬೇಕಾದವರಿಗೆ ಗ್ರಾಮೊಫೋನಿನ ಮುಳ್ಳುಗಳ ಪೆಟ್ಟಿಗೆಯನ್ನು ಬೆಂಕಿ ಪೆಟ್ಟಿಗೆಯಂತೆ ಮಾರುತ್ತಾ ಅಂಗಡಿಯ ತುಂಬಾ ಓಡಾಡುತ್ತಾ ನಗುತ್ತಾ ಇರುತ್ತಿದ್ದ. ಈ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ದಿವಸ ಕಾಳಿಂಗರಾಯರು ಹಾಡಿದ ದೇಶಭಕ್ತಿ ಗೀತೆಗಳನ್ನು ಬೀದಿ ತುಂಬ ಕೇಳಿಸುವಂತೆ ಹಾಕುತ್ತಿದ್ದ. ಕಾಲೇಜಿಗೆ ಹೋಗುತ್ತಿದ್ದ ಕಿ.ರಂ ದಾರಿಯಲ್ಲಿ ಈ ಸಂಗೀತದ ಅಂಗಡಿಯಲ್ಲಿ ಅವಕ್ಕಾಗಿ ನಿಂತು, ಈ ತಟ್ಟೆಗಳನ್ನು ಮೋಹದಿಂದ ನೋಡಿ, ಪ್ರೀತಿಯಿಂದ ಸವರಿ, ದಿನಕ್ಕೊಂದರಂತೆ ಜೋಪಾನದಿಂದ ಕೊಂಡು ಹೋಗಿ ಕೇಳಿ ಹಿಂತಿರುಗಿಸಿ ಪುನಃ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಅಪರೂಪಕ್ಕೆ ಈ ಶೆಟ್ಟಿಯ ಸಂಗೀತದ ಅಂಗಡಿಯಿಂದ ಮೊಜಾರ್ಟನ  ಸಿಂಪೋನಿ ಕೇಳಿ ಬರುತ್ತಿತ್ತು. ಈ ಶೆಟ್ಟರು ಮೊಜಾರ್ಟನ ಸಂಗೀತ ಕೇಳುತ್ತಾ ಕುಳಿತಿರುತ್ತಿದ್ದರು.

ಕಿ.ರಂ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಈ ಅಂಗಡಿಯನ್ನು ನೆನಪಿಸಿಕೊಳ್ಳುತ್ತಾ ನಾವಿಬ್ಬರೂ ಆ ನೆನಪ ವಾಸನೆ ಹಿಡಿದುಕೊಂಡು ಬೆಂಗಳೂರಿನ ಈ ಅಸಾಧ್ಯ ರಂಗು ರಂಗಿನ ಶ್ರಾವಣ ಶನಿವಾರ ಮಧ್ಯಾಹ್ನ ನಡೆಯುತ್ತಿದ್ದೆವು. (more…)

Wednesday May 9, 2007

ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು

Filed under: ಅಲೆಮಾರಿಯ ದಿನಚರಿ — Rasheed @ 11:02 pm

waynad2.jpg

 ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು ಕುಳಿತಿರುವೆ.ಇಳಿಸಲಾಗುತ್ತಿಲ್ಲ.ಅಷ್ಟು ಘಾಟು.

ಇಳಿಸದಿರಲಾಗುವುದೂ ಇಲ್ಲ. ಹಳೆಯದನೆಲ್ಲ ಮರೆತಿರುವೆಯೇನು ಎನ್ನುವಂತೆ ಬಟ್ಟಲು ಎದುರು ಕೂತಿದೆ.ಒಮ್ಮೆ ಒಂದು ಸ್ವಪ್ನದಂತೆ,ಒಮ್ಮೆ ಒಂದು ಪ್ರಪಾತದಂತೆ,ಒಮ್ಮೆ ಹೆಂಗಸೊಬ್ಬಳ ದೀರ್ಘ ನಿಟ್ಟುಸಿರಂತೆ,ಒಮ್ಮೆ ತರಳೆಯೊಬ್ಬಳ ಬೆರಳು ಕಚ್ಚಿದ ನಾಚಿಕೆಯಂತೆ ಮೈಯೆಲ್ಲ ಹರಿದಾಡುವ ಮದ್ಯಸಾರ. ನಿನ್ನನ್ನುಹೇಗೆ ಸೇವಿಸದಿರಲಿ ಎಂದು ದಿಟ್ಟಿಸುತ್ತೇನೆ.

 ನಾನು ಪ್ರೀತಿಸಿದ ಹುಡುಗಿಯನ್ನು ಒಂದು ದೇವತೆಯ ಚಿತ್ರದ ಎದುರು ನಿಂತು ಮದುವೆ ಮಾಡಿಕೊಂಡು ಅವಳ ಹೆತ್ತವರು ಒಡಹುಟ್ಟಿದವರಿಂದ ತಲೆಮರೆಸಿಕೊಂಡು ಅದರ ನಡುವೆ ರೇಷನ್ ಕಾರ್ಡ್ ಬೇರೆ ಮಾಡಿಸ ಬೇಕಾಗಿ ಬಂದು ಸಣ್ಣ ವಯಸ್ಸಿನವನಾದ ನಾನು ಕುಟುಂಬದ ಯಜಮಾನ ಎಂದೂ ಅವಳು ಯಜಮಾನತಿಯೆಂದೂ ಫೊಟೋ ಹಾಕಿಸಿಕೊಂಡು ಅಕ್ಕಿ ಸಕ್ಕರೆ ತಂದು ಸಂಸಾರ ಮಾಡುವಾಗ ನಾವು ಸಣ್ಣದಾಗಿರುವಾಗ ಅಂಗಡಿ ಆಟ ಆಡುತ್ತಿದ್ದುದು ನೆನಪಾಗಿ ನಗು ಬಂದರೂ ವಿಷಯದ ಗಂಭೀರತೆಯನ್ನು ಅರಿತು ಸುಮ್ಮನಾಗುತ್ತಿದ್ದೆವು.

mr-and-mrs2.jpg

ಆಮೇಲೆ ಅವಳೇ ಧೈರ್ಯ ಹೇಳಿ ಅಪ್ಪ ಅಮ್ಮನ ಹತ್ತಿರ ಕರೆದು ಕೊಂಡು ಹೋಗಿದ್ದಳು.ನಾನು ಅಪರಾದಿಯಂತೆ ಹಿಂಬಾಲಿಸಿದ್ದೆ.

(more…)

Tuesday May 8, 2007

ಎಸ್. ಮನೋರಮಾ ಅವರು ಕಳ್ಳನನ್ನು ಹಿಡಿದ ಕಥೆ

Filed under: ಅಲೆಮಾರಿಯ ದಿನಚರಿ — Rasheed @ 6:19 pm

manorama.jpg

ತುರ ಗೆರಿಲ್ಲಾ ಹೋರಾಟಗಾರನ ಹಾಗೆ ಮೈಸೂರಿನ ಒಂದೊಂದು ರಸ್ತೆಯ ಮೇಲೆ ಒಂದೊಂದು ಸಂಜೆ ದಾಳಿ ನಡೆಸಿ ಸಾಲುಮರಗಳ ಸೊಂಟ ಮುರಿಯುತ್ತಿರುವ ಹಠಾತ್ ಮಳೆ. ರೆಂಬೆ ಕೊಂಬೆಗಳನ್ನು ಹೂವಿನ ಸಮೇತ ಕಳೆದುಕೊಂಡು ಆಕ್ರಂದಿಸುತ್ತಿರುವ ಗುಲ್ಮೊಹರ್ ಮರಗಳು. ಈ ಆಕ್ರಮಣದ ನಡುವೆ ಹೊಂಚು ಹಾಕಿಕೊಂಡು ಹೋಗಿ ಹಳೆಯ ಕಾಲದ ಮನೆಯೊಂದರಳಗೆ ಕುಳಿತು ನಾನು ಎಸ್. ಸಾವಿತ್ರಮ್ಮನವರು ಹಾಡುತ್ತಿರುವ ಹಳೆಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಮೈಸೂರಿನ ಪುರಾತನ ಎಲ್.ಎಂ.ಪಿ. ಡಾಕ್ಟರ್ ಶ್ರೀಕಂಠಯ್ಯನವರ ಮುದ್ದಿನ ಮಗಳು ಎಸ್. ಸಾವಿತ್ರಮ್ಮ  `come on come on my dear Krishna, sit down sit down my dear Krishna’ಎಂದು ಆ ಮಳೆಯಲ್ಲಿ ಹಾಡುತ್ತಿದ್ದರು. ಸಾವಿತ್ರಮ್ಮನವರಿಗೆ ತಮಗೆ ಈಗ ಎಷ್ಟು ವರ್ಷ ಎನ್ನುವುದು ಮರೆತು ಹೋಗಿದೆ. ಆದರೆ ಹುಟ್ಟಿದ್ದು ಶ್ರೀಮತಿ ಇಂದಿರಾ ಗಾಂಧಿ ಹುಟ್ಟಿದ ಒಂದು ದಿನ ಹಿಂದೆ ಅಥವಾ ಒಂದು ದಿನ ಮುಂದೆ ಅಂತ ಕರಾರುವಕ್ಕಾಗಿ ಹೇಳುತ್ತಾರೆ.

ಸಾವಿತ್ರಮ್ಮನವರು ಭಗವಾನ್ ಸಾಯಿಬಾಬಾರ ಭಕ್ತರು.’ನಿನ್ನೆ ತಾನೇ ರಾತ್ರಿ ಕನಸಿನಲ್ಲಿ ಸಾಯಿಬಾಬಾ ಬಂದಿದ್ದರು. ಬಂದು ನಕ್ಕು ಮಾತನಾಡಿಸಿದರು, ಪ್ರತೀ ಗುರುವಾರ ಆರರಿಂದ ಏಳರವರೆಗೆ ಭಜನೆಮಾಡು, ನಿನಗೆ ಇನ್ನೂ ಆಯಸ್ಸು ಬಹಳ ಇದೆ. ನಾಲ್ಕು ಜನರಿಗೆ ಒಳ್ಳೆಯದು ಮಾಡು ಎಂದು ಹೇಳಿ ಹೋದರು’ ಎಂದು ಸಾವಿತ್ರಮ್ಮನವರು ಹೇಳಿ ಇನ್ನೊಂದು ಭಜನೆ ಹೇಳಲು ಶುರುಮಾಡಿದರು ಬಹುಶಃ ಅದು ಶುಕ್ರವಾರ ಅನ್ನುವುದನ್ನು ಅವರು ಮರೆತಿದ್ದ ಹಾಗಿತ್ತು.

ಆದರೆ ನಾನು ಅಲ್ಲಿಗೆ ಹೋಗಿದ್ದು ಸಾವಿತ್ರಮ್ಮನವರನ್ನು ಮಾತನಾಡಿಸಲು ಆಗಿರಲಿಲ್ಲ. ನಾನು ಕಾಣಬೇಕಾಗಿದ್ದುದ್ದು ಸಾವಿತ್ರಮ್ಮನವರ ಮಗಳು ಮನೋರಮಾ ಅವರನ್ನು. ಮನೋರಮಾ ಅವರಿಗೆ ಈಗ 65 ವರ್ಷ. (more…)

Next Page »

Blog at WordPress.com.