
ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು.
ನಿಮ್ಮ ಬಕ್ಕತಲೆಯ ಒಳಗೆ ಸುಳಿದಾಡುತ್ತಿದ್ದ
ಮಿಂಚುಗಳು,ಅಳ್ಳೆದೆಯವರ ಮೇಲೆ ಸದಾ ಮಸೆಯುತ್ತಿದ್ದ ಸೃಜನಶೀಲ
ಮಚ್ಚು ಮತ್ತು ಎಲ್ಲ ಸುಂದರಿಯರ ಬೆವರಸೆಲೆ
ಹುಡುಕಿಕೊಂಡು ಅಂಡಲೆಯುತ್ತಿದ್ದ
ಮಹಾನಾಚುಗೆಬುರುಕ ವಿಧ್ವತ್ತು.
ನಡೆಯುತ್ತಿರುವುದು ಸದಾ ತಂತಿಯ ಮೇಲೆಂಬ
ದೊಂಬರ ಹುಡುಗಿಯ
ವಿನಾಕಾರಣ ಆಪತ್ತಿನ ಭಯ,ಅದಕ್ಕೂ ಮಿಗಿಲಾಗಿದ್ದ
ಅವ್ವನಂತಹ ಮೊಸರು ಮಾರುವ ನಿಯತ್ತು.
ನಾಚುಗೆಯ,ಲೆಕ್ಕಾಚಾರದ,ಪತರಗುಟ್ಟುವ,
ಕವಿತೆಯ,ಗದ್ಯದ,ಬೈಗುಳಗಳ
ಈ ಎಲ್ಲದರ ತಳದಲ್ಲಿ ಉಳಿಯುವ
ಅಲ್ಲೋಲಕಲ್ಲೋಲದಂತಹ ಏಕಾಂತದ ನಡುವೆಯೂ
ನೀವು ನೀಡುತ್ತಿದ್ದ ಕಠಿಣ ಏಟು.
ಅವುಗಳನು ಉಂಡೂ ಸುಖಿಸುತ್ತಿದ್ದ
ಮಹಾ ಪೋಕರಿ ಸಾಮಾಜಿಕ ಮನಸ್ಸು.
ಹಾದರದವಳ ಮಹಾ ಲೆಕ್ಕಾಚಾರ
ಮತ್ತು ಗರತಿಯ ಹುಚ್ಚುಕೋಡಿ ಮನಸ್ಸು
ಲಂಕೇಶ್ ನೀವು ಇದ್ದಿದ್ದರೆ ಕೌದಿಯೊಳಗೆ ಸದಾ
ತಾಪದಿಂದ ಕಾತರಿಸುತ್ತಿದ್ದ ನಿಮಗೆ ಬಹಳಷ್ಟು ಕಥೆಕಟ್ಟಿ
ಹೇಳ ಬಹುದಿತ್ತು.ಮತ್ತು ಬಹಳಷ್ಟು ಕೇಳಬಹುದಿತ್ತು
ಈ ಎಲ್ಲ ಬಿಕ್ಕಟ್ಟು ಯಾಕೆ ಬೇಕಿತ್ತು!
6 Comments
heganna ishtu chennagi barithi? naanu nin thangi.ninna churoo buddhi baralilla yaake?
ನಿಮ್ಮ ಅಣ್ಣನಿಗೆ ಕವಿತೆ, ಕತೆ, ಲೇಖನ ಬರೆಯುವ ಒಳ್ಳೆಯ ಬುದ್ಧಿಯ ಜತೆಗಿರುವ ಕೀಟಲೆ ಬುದ್ಧಿಯ ಬಗ್ಗೆಯೂ ನಿಮ್ಮ ಅಭಿಪ್ರಾಯ ದಾಖಲಿಸುತ್ತೀರಾ?
ನಿಮ್ಮಿಬ್ಬರ ಪ್ರತಿಕ್ರಿಯೆಗೆ ಬಹುಮಾನ ಈ ಕವಿತೆಯ ಅನುವಾದ
ರಶೀದ್, ನಿಮ್ಮ ಈ ಚುರುಕು ಪದ್ಯ ಇಷ್ಟವಾಯಿತು. ಮೈಸೂರು ಪೋಸ್ಟ ಓದಲು ಮಜಾ ಬರುತ್ತದೆ. ಜತೆಗೆ ಹಾಡುಪಾಡು ವಿಭಾಗ ಗಿಫ್ಟೇ ಸರಿ. ನಿಮ್ಮ ಕಳಕಳಿಗಳು ಕಾಲದಂತೇ ಕುಟುಕಿದರೆ, ನಿಮ್ಮ ಹಗುರ ಧಾಟಿ ಓದು ಓದು ಅನ್ನುತ್ತದೆ. ಮತ್ತೆ ಮತ್ತೆ ಬರುವೆ ಈ ಪೊಸ್ಟಿಗೆ.
ಕಮಲಾಕರ
ನನ್ನ ಅಣ್ಣ ಮಹಾ ಬುಧ್ಧಿವ೦ತನೂ,ಕೀಟಲೆಗೆ ಹೆಸರಾದವನೂ ಆಗಿದ್ದಾನೆ. ಹತ್ತು ವರ್ಷಗಳ ಹಿ೦ದೆ ನಾನು ರಮೆಶ್ ನನ್ನು ಮದುವೆಯಾಗುವ ಸುದ್ದಿ ಹೇಳಿದಾಗ, ಊಟ ಮಾಡ್ತಿದ್ದವನು ಎದ್ದು ಏನು ಎತ್ತ ಕೇಳ್ತಾ, ಗಾಭರಿಯಾಗಿದ್ದ. ನಾನು ರಮೆಶ್ ಲ೦ಬಾಣಿ ಬಿಜಾಪುರದವನು ಎ೦ದಿದ್ದೆ.ಆ ಕೂಡಲೆ ತಾನೆದ್ದ ಕುಶನಿನ ಸಣ್ಣ ದು೦ಡಗಿನ ಕನ್ನಡಿಯಿಟ್ಟು ಕಸೂತಿ ಮಾಡಿದ್ದ ಕವರನ್ನು ಎದೆ ಹೊಟ್ಟೆಗೆ ಬರುವ೦ತೆ ಕಟ್ಟಿ ಬರಿ ಬೆನ್ನು ತೋರಿಸುತ್ತಾ ನರ್ತಿಸಲು ತೊಡಗಿದ್ದ.ಮತ್ತೆ ತೆಗೆದೆಸೆದು ಬೇಡ, ಬೇಡ ವೆ೦ದು ಬೇಡಿಕೊ೦ದಿದ್ದ ನಾನು ವಿವಾಹನೋ೦ದಣಿಗೆ ಸಹಿ ಮಾಡುವವರೆಗೂ.ಈ ರೀತಿಯ ಚ೦ದದ ಕೀಟಲೆ ಇನ್ನಾರಿಗೆ ಸಾದ್ಯ?ಇನ್ನು ಮತ್ತೆ ಬರೆವೆ.
ಆಹಾ.. ಆ ಸುಂದರ ಗಳಿಗೆಯನ್ನು ನೆನಪಿಸಿದಕ್ಕೆ ಥಾಂಕ್ಸ್.ಇದಕ್ಕೆ ಬಹುಮಾನವಾಗಿ ನಾನು ಈ ಹಿಂದೆ ಬರೆದ ತುಣುಕೊಂದನ್ನ ಸದ್ಯದಲ್ಲೇ ಅಪ್ಲೋಡ್
ಮಾಡುವೆ.ನಿರೀಕ್ಷಿಸಿ.
One Trackback/Pingback
[...] ಲಂಕೇಶರ ಹುಟ್ಟುಹಬ್ಬಕ್ಕೆ ಒಂದು ಆಪ್ತತೆ ಸೂ…, The Mysore Postನಲ್ಲಿ. [...]