The Mysore Post

Monday February 26, 2007

ಅರಮನೆ, ಅಕ್ಕಸಾಲಿ ಮತ್ತು ಗುಡಿಸಲುಗಳು

Filed under: ಮೈಸೂರಿನಿಂದ ಅಂಕಣ — Rasheed @ 11:41 am

ಶಾಮಾಚಾರಿರವತ್ತು ವರ್ಷಗಳಿಗೂ ಹೆಚ್ಚುಕಾಲ ಅರಮನೆಯಲ್ಲಿ ಅಕ್ಕಸಾಲಿಗಳಾಗಿದ್ದ ಶಿರ್ವ ಮಂಚಕಲ್ಲಿನ ಶಾಮಾಚಾರಿಗಳು ನನ್ನ ಕನ್ನಡಕವನ್ನು ಕೇಳಿ ಪಡೆದು ತಮ್ಮ ನಿತ್ರಾಣವಾಗಿದ್ದ ಕಣ್ಣುಗಳಿಗೆ ಏರಿಸಿಕೊಂಡು ತಮ್ಮ ಬಲಗೈಯ ಹಸ್ತರೇಖೆ ಗಳನ್ನು ನೋಡಿ ಹಸ್ತರೇಖೆಗಳು ಕಾಣಿಸದೆ ಕಂಗಾಲಾಗಿ ನನ್ನ ಕನ್ನಡಕವನ್ನು ಮರಳಿ ನನಗೇ ಹಿಂದಿರುಗಿಸಿ ನಿಟ್ಟುಸಿರುಬಿಟ್ಟರು.
ನನ್ನ ಕನ್ನಡಕ ಬಿಸಿಲಿನ ಝಳಕ್ಕೆ ಹಾಕುವ ಕಪ್ಪು ಕನ್ನಡಕವೆಂದೂ ಅದರಲ್ಲಿ ಕಾಣದ ಏನೂ ಕಾಣುವುದಿಲ್ಲವೆಂದೂ ಅವರಿಗೆ ಹಸ್ತರೇಖೆಗಳನ್ನು ನೋಡಲು ಒಂದು ಭೂತ ಕನ್ನಡಕವನ್ನು ತಂದುಕೊಡುವೆನೆಂದೂ ಆದರೆ ಅದಕ್ಕೂ ಮೊದಲು ಅವರು ತಮ್ಮ ಅರವತ್ತು ವರ್ಷಗಳ ಕಾಲದ ಅರಮನೆಯ ಅಕ್ಕಸಾಲಿಗನ ಬದುಕನ್ನು ಕತೆ ಹೇಳುವಂತೆ ನನಗೆ ಹೇಳಬೇಕೆಂದೂ ನಾನು ಅವರಲ್ಲಿ ತುಳು ಭಾಷೆಯಲ್ಲಿ ಕೇಳಿಕೊಂಡೆ.

ಅದಕ್ಕೆ ಅವರು ನಗಾಡಿದರು. ಆಮೇಲೆ ಕನ್ನಡ ಭಾಷೆಯಲ್ಲಿ `ಸತ್ತವನ ತಿಕ ಅತ್ತ ತಿರುಗಿದ್ದರೇನು ಇತ್ತ ತಿರುಗಿದರೇನು? ಅದು ಎತ್ತ ಕಡೆ ತಿರುಗಿದರೂ ಸತ್ತವನಿಗೆ ಆಗಬೇಕಾದದ್ದೇನು? ಅಕ್ಕಸಾಲಿಗನೂ ಇಲ್ಲ. ಅರಮನೆಯೂ ಇಲ್ಲ. ಬದುಕಿನ ಕಥೆಯೂ ಇಲ್ಲ. ಮಹಾಭಾರತ ರಾಮಾಯಣವೂ ಇಲ್ಲ. ನೀನು ಅರಮನೆಗೆ ಬಂದ ಕೆಲಸವನ್ನು ಮುಗಿಸಿ ನಿನ್ನ ಪಾಡಿಗೆ ಸುಮ್ಮನೆ ಹೋಗು. ನನ್ನ ಜೊತೆ ಮಾತನಾಡಬೇಡ. ನನ್ನ ವಿಷಯ ಯಾರಿಗೂ ಹೇಳುವುದೂ ಬೇಡ. ಮಾನವ ಜನ್ಮವನ್ನು ಎತ್ತಿರುವ ಮೂಕಪ್ರಾಣಿಯಾದ ನನ್ನ ಪ್ರಾಚೀನ ಕರ್ಮವನ್ನು ನಾಗ ಕುಂಡಲನೇ ಪರಿಹರಿಸಬೇಕಲ್ಲದೆ ಇನ್ನು ಯಾರಿಗೂ ಏನೂ ಆಗುವುದಿಲ್ಲ. ನೀನು ಹೋಗಬಹುದು ಎಂದು ಕೈ ಮುಗಿದು ನನ್ನನ್ನು ಒತ್ತಾಯಪೂರ್ವಕವಾಗಿ ಹೊರಟು ಹೋಗುವಂತೆ ಕೇಳಿಕೊಂಡರು. (more…)

Friday February 23, 2007

ಅಂಬೇವಾಡ ಎಂಬುವುದು ಈ ಊರಿನ ಹೆಸರಾ……

Filed under: ಅಲೆಮಾರಿಯ ದಿನಚರಿ — Rasheed @ 3:08 pm

ಈಗ ಯಾಕೋ ಈ ಊರಿನ ಕುರಿತು ಬರೆಯಬೇಕೆನಿಸುತ್ತಿದೆ. ಈ ಊರಿನ ಹೆಸರು ಅಂಬೇವಾಡ. ಗುಲ್ಬರ್ಗಾ ಜಿಲ್ಲೆಯ ಆಳಂದಾ ತಾಲ್ಲೂಕಿನ ಸರಸಂಬಾ ಎಂಬ ಊರಿಂದ ಎಡಕ್ಕೆ ತಿರುಗಿದರೆ ಈ ಊರು ಬರುತ್ತದೆ.ನಾನು ಒಬ್ಬನೇ ನಡುಹಗಲು ಬೈಕು ಹತ್ತಿಕೊಂಡು ಕಂಡವರ ಬಳಿಯೆಲ್ಲ ದಾರಿ ಕೇಳುವ ನೆಪದಲ್ಲಿ ಮಾತನಾಡಿಸುತ್ತಾ, ಕತ್ತಲಲ್ಲಿ ಬೆಳಕಿಗೆ ಹುಡುಕುವವನಂತೆ ಸಿಗರೇಟು ಹತ್ತಿಸಲು ಬೆಂಕಿ ಕಡ್ಡಿ ಬೇಡುತ್ತಾ ಇನ್ನೂ ಅಂಬೇವಾಡ ತಲುಪಿರಲಿಲ್ಲ.

ದಾರಿಯಲ್ಲಿ ಗಾಣಗಾಪುರದ ಧತ್ತ ಕ್ಷೇತ್ರಕ್ಕೆ ಚಕ್ಕಡಿ ಹತ್ತಿ ಹೊರಟವರೊಂದಿಗೆ ಹರಟೆ ಹೊಡೆದಿದ್ದೆ.ಇನ್ನೊಂದು ಕಡೆ ರಸ್ತೆ ಬಿಟ್ಟು ಮೆಲಿ ದೂರ ಮಣ್ಣದಾರಿಯಲ್ಲಿ ಹೋಗಿ ಪಾಳು ಬಿದ್ದ ಸೂಫಿ ಸಂತನೊಬ್ಬನ ಗೋರಿಯೊಂದರ ಮುಂದೆ ಹುಚ್ಚುವಾಸಿಯಾಗಲು ಕಾಯುತ್ತಿದ್ದವರ ನಡುವಲ್ಲಿ ಹುಚ್ಚನಂತೆ ಕುಳಿತಿದ್ದೆ.ಅವರೆಲ್ಲರೂ ಯಾವಾಗಲೋ ಬರಬಹುದಾದ ಹುಚ್ಚು ಬಿಡಿಸುವ ಸಂತನೊಬ್ಬನ ಇಪ್ಪತ್ತನೇಯ ಪೀಳಿಗೆಯ ವಂಶಸ್ತ ಪೀರ್ಜಾದೆಯೊಬ್ಬನಿಗಾಗಿ ಕಾಯುತ್ತಾ ಕುಳಿತಿದ್ದರು.ಆತ ಆಗಮಿಸುವುದೂ ಇವರ ಹುಚ್ಚು ಬಿಡುವುದೂ ಎರಡೂ ಒಂದೇ ಅನಿಸಿ ಅಲ್ಲಿಂದ ಜಾಗ ಖಾಲಿ ಮಾಡಲು ಹೋದರೆ ಅವರಲ್ಲೇ ಪರವಾಗಿಲ್ಲ ಅನ್ನ ಬಹುದಾದ ಹುಚ್ಚನೊಬ್ಬ ಎಂಟು ನೂರಕ್ಕೂ ವರುಷಗಳಷ್ಟು ಹಳೆಯದಾದ ಈ ಹುಚ್ಚುಬಿಡಿಸುವ ಸೂಫಿ ಸಂತನ ಕತೆ ಹೇಳಲು ಶುರುಮಾಡಿ ಆಮೇಲೆ ಹೇಗೆ ಮುಗಿಸುವುದು ಎಂದು ಗೊತ್ತಾಗದೆ ತಾನೇ ಕಕ್ಕಾವಿಕ್ಕಿಯಾಗಿ ನನಗೆ ನಗುಬರುವಂತೆ ಮಾಡಿದ್ದ. (more…)

Tuesday February 20, 2007

ಮಗ ಬಾಪೂ ಸತ್ಯನಾರಾಯಣ ಮತ್ತು ತೀರ್ಥರೂಪ ಅಠಾಣ ರಾಮಣ್ಣ

Filed under: ಮೈಸೂರಿನಿಂದ ಅಂಕಣ — Rasheed @ 11:56 am

ಹಾ.ರಾ. ಬಾಪು ಸತ್ಯನಾರಾಯಣರಿಗೆ ಈಗ ಹತ್ತಿರ ಹತ್ತಿರ ಎಪ್ಪತ್ತೈದು ವರ್ಷ. ಅವರು ಭಾರತದ ಹೆದ್ದಾರಿಗಳಅಠಾಣಾ ರಾಮಣ್ಣ ಮತ್ತು ಬಾಪೂ ಸತ್ಯನಾರಾಯಣ ಬಲುದೊಡ್ಡ ಇಂಜಿನಿಯರ್‌ ಆಗಿ ನಿವೃತ್ತಿ ಹೊಂದಿ ಈಗ ಮೈಸೂರಿನಲ್ಲಿ ಜೀವಿಸುತ್ತಿದ್ದಾರೆ. ಗುಜರಾತು, ನವದೆಹಲಿ, ಷಿಲ್ಲಾಂಗು, ಕೊಹಿಮಾ, ಲಕ್ನೋ, ತಾಂಜಾನಿಯಾ, ವಿಶ್ವಸಂಸ್ಥೆ ಹೀಗೆ ಬಹಳ ಕಡೆಗಳಲ್ಲಿ ಹೆದ್ದಾರಿ ಇಂಜಿನಿಯರ್‌ ಆಗಿ ಶ್ರದ್ಧೆ ಪ್ರಾಮಾಣಿಕತೆಗಳಿಂದ ಕೆಲಸ ಮಾಡಿ ಈ ಇಳಿವಯಸ್ಸಿನಲ್ಲೂ ಮೈಸೂರಿನಲ್ಲಿ ಪಾದರಸದಂತೆ ಓಡಾಡುತ್ತಾ, ಯೋಚನೆ ಮಾಡುತ್ತಾ, ಪತ್ರಿಕೆಗಳಿಗೆ ಬರೆಯುತ್ತಾ ಬಲು ಚಟುವಟಿಕೆಯಿಂದ ಇರುತ್ತಾರೆ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ಅವರು ಯಾವ ಮುಲಾಜಿಗೂ ಒಳಗಾಗುವುದಿಲ್ಲ ಎಂಬುದನ್ನು ಅವರ ತೀಕ್ಷ್ಣ ಕಣ್ಣುಗಳು ಸಾರಿ ಹೇಳುತ್ತವೆ.

ಇವರು ಹೇಳಿದ ಸಮಯಕ್ಕೆ ಒಂದು ನಿಮಿಷವೂ ತಡವಾಗಬಾರದು ಒಂದು ಕ್ಷಣವೂ ಮೊದಲಾಗಬಾರದು ಎಂದು ನನಗೆ ನಾನೇ ಹೇಳಿಕೊಂಡು ನಿನ್ನೆ ಸಮಯಕ್ಕೆ ಸರಿಯಾಗಿ ಹೋಗಿ ಅವರ ಮನೆಯ ಕದವ ತಟ್ಟಲು ಹೋದರೆ ಬಾಗಿಲು ತೆರೆದುಕೊಂಡೇ ಇತ್ತು. ಅವರು ನನ್ನ ಕಾಯುತ್ತಿದ್ದಂತೆ ಇತ್ತು. ನಾನು ತಡ ಮಾಡಿಲ್ಲದಿರುವುದರಿಂದ ತಡ ಮಾಡಿದ್ದಕ್ಕೆ ಕ್ಷಮೆ ಕೋರುವ ಹಾಗೂ ಇರಲಿಲ್ಲ. ಕುಳಿತುಕೊಳ್ಳಲು ಹೇಳಿದರು. ಕುಳಿತುಕೊಳ್ಳಲು ಜಾಗವನ್ನು ಹುಡುಕುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಸೋಫಾದಲ್ಲಿ ಕುಳಿತಿರುವ ಬಾಪು ಸತ್ಯನಾರಾಯಣ ಅವರ ನೂರ ಐದು ವರ್ಷ ವಯಸ್ಸಿನ ತೀರ್ಥರೂಪರಾದ ಅಠಾಣಾ ರಾಮಣ್ಣನವರು ಕಾಣಿಸಿದರು. (more…)

Saturday February 17, 2007

ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ

Filed under: ಹಾಡು-ಪಾಡು — Rasheed @ 10:28 am

raju.jpg

ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,
ವಿಟನಂತಹ ಬೇಜವಾಬ್ಧಾರಿಯ ಗಂಡಸು, ಹಾಗೆಲ್ಲಾ
ಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದು
ಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ. (more…)

Thursday February 15, 2007

ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದಲ್ಲಿ

Filed under: ಅಲೆಮಾರಿಯ ದಿನಚರಿ — Rasheed @ 9:33 am

ಅರಬಿ ಚಹರೆಯ ಆ ನಡುವಯಸ್ಸಿನ ಗಗನಸಖಿ ನನ್ನ ತಳಹರಿದ ಬೂಟನ್ನು ನೋಡಿ ಮನಸ್ಸಿನಲ್ಲೇ ನಗುತ್ತಿದ್ದಳು. ಅವಳು ಇನ್ನಷ್ಟು ನಗಲಿ ಎನ್ನುವ ಹುನ್ನಾರದಿಂದ ನಾನು ಹರಿದ ಬೂಟನ್ನು ಇನ್ನಷ್ಟು ಮುಂದಕ್ಕೆ ಕಾಣುವಂತೆ ಕಾಲು ಉದ್ದ ಮಾಡಿ ಕೂತೆ. ಎರಡನೇ ಮಹಾಯುದ್ಧದಲ್ಲಿ ಸೈನಿಕರನ್ನು ಒಯ್ಯುತ್ತಿದ್ದ ಹಡಗಿನ ಮಾದರಿಯ ಆ ವಿಮಾನ ಸಿರಿಯಾ ದೇಶದ ರಾಜಧಾನಿ ದಮಾಸ್ಕಸ್ನಿಂದ ಆಕಾಶಕ್ಕೆ ಏರಿ ಅರೇಬಿಯಾದ ಮರುಭೂಮಿಯ ಮೇಲೆ ಕತ್ತಲಲ್ಲಿ ನಕ್ಷತ್ರದಂತೆ ಭಾರತದ ಕಡೆ ಹಾರುತ್ತಿತ್ತು. ನಾವು ಭಾರತದ ನಾಲ್ಕು ಮಂದಿ ಬರಹಗಾರರು ಕಳೆದ ವರ್ಷ ರಂಜಾನ್ ತಿಂಗಳ ನಡುವಿನ ಹತ್ತು ದಿನಗಳ ಕಾಲ ಸಿರಿಯಾ ಎಂಬ ಅರಬ್ ಗಣರಾಜ್ಯದಲ್ಲಿ ಓಡಾಡಿ ವಾಪಸಾಗುತ್ತಿದ್ದೆವು.

ನನಗೆ ಮನಸ್ಸಿನಲ್ಲೇ ನಗುಬರುತ್ತಿತ್ತು. ಒಂದು ಕಾಲದಲ್ಲಿ ಪರಮ ಸುಂದರಿಯಾಗಿರಬಹುದಾಗಿದ್ದ ಆ ಅಗಲ ಹೆಗಲಿನ, ದೊಡ್ಡ ಕಣ್ಣುಗಳ, ಉದ್ದಾನುದ್ದ ಅರೇಬಿಯನ್ ಗಗನಸುಖಿ. ಬಹುಶಃ ಯೌವನವಿಡೀ ಕಣ್ಣು ಮಿಟುಕಿಸಿ, ಮಿಟುಕಿಸಿ ಈಗ ಬೇಡವೆಂದು ಕೊಂಡರೂ ಅವಳ ಕಣ್ಣುಗಳು ಮಿಟುಕಿಸುವಂತೆ ನಾಟಕವಾಡಿ ಸುಮ್ಮನಾಗುತ್ತಿದ್ದವು. ಬಹುಶಃ ತಳಹರಿದ ನನ್ನ ಶೂಗಳನ್ನು ಕಂಡ ಆಕೆ ಈತ ಯಾವನೋ ವಿಸಾ ಇಲ್ಲದೆ ತನ್ನ ದೇಶದಿಂದ ಹೊರದಬ್ಬಲ್ಪಟ್ಟಿರುವ ಭಾರತೀಯ ನಿರಾಶ್ರಿತನಿರಬಹುದು ಎಂದು ಗದರಿಸಿ ಮಜಾ ಪಡೆದುಕೊಳ್ಳುವ ಹುನ್ನಾರದಲ್ಲಿರುವಂತೆ ಕಂಡಿತು. (more…)

Tuesday February 13, 2007

ಮೈಸೂರು ಸುಬ್ರಹ್ಮಣ್ಯ ಚಂದ್ರಶೇಖರ್ ಅಯ್ಯರ್ ಮತ್ತು ಹೋರಾಶಾಸ್ತ್ರ

Filed under: ಮೈಸೂರಿನಿಂದ ಅಂಕಣ — Rasheed @ 11:47 am

ಚಂದ್ರಶೇಖರ ಅಯ್ಯರ್‘ಗಡಿಯಾರಗಳು ಮುರಿದು ಹೋದಷ್ಟು ಮನುಷ್ಯದೊಡ್ಡ ಕಾಲಜ್ಞಾನಿಯಾಗುತ್ತಾನೆ, ಆಸ್ಟತ್ರೆಗಳಲ್ಲಿ ಮನುಷ್ಯ ಹೆಚ್ಚು ತೀರಿಹೋದಷ್ಟೂ ಮಾನವ ಶರೀರ ಶಾಸ್ತ್ರ ಬೆಳೆಯುತ್ತಾ ಹೋಗುತ್ತದಲ್ಲಾ ಹಾಗೆ’ ಎಂದು ನನಗೆ ನನ್ನ ಅಜ್ಜ ಕುಳಿತಲೈ ಸುಬ್ರಹ್ಮಣ್ಯ ಅಯ್ಯರ್ ಲಕ್ಷಣ ಅಯ್ಯರ್ ಬುದ್ದಿವಾದ ಹೇಳಿ ಗಡಿಯಾರ ರಿಪೇರಿ ಮಾಡು ಕೂರಿಸುತ್ತಿದ್ದರು ಎಂದು ಮೈಸೂರಿನ ಪೌಂಟೈನ್ ಸರ್ಕಲ್ ಹತ್ತಿರವಿರುವ ಶಿವಾಜಿ ರಸ್ತೆಯ ಹೊರಾಲಜಿಸ್ಟ್ ಎಂ. ಎಸ್. ಚಂದ್ರಶೇಖರ್ ಅಯ್ಯರ್ ಆ ಕತ್ತಲಲ್ಲಿ ಕ್ಯಾಂಡರ್ ಹಚ್ಚಿ ನನಗೆ ವಿವರಿಸಿ ಹೇಳುತ್ತಿದ್ದರು. (more…)

Friday February 9, 2007

ರಿಲ್ಕ್ ನ ಎಲಿಜಿಯ ಕೆಲವು ಸಾಲುಗಳು

Filed under: ಅನುವಾದಗಳು — Rasheed @ 11:02 am

rilke1.jpg

ಕೂಗಿ ಕರೆದರೆ ಕೇಳುವರು ಯಾರು ದೇವ ದೇವತೆಯರ ಸಾಲಿನಲ್ಲಿ
ಎಲ್ಲಾದರು ಒತ್ತಿಕೊಂಡರೆ ತೀರಿ ಹೋಗುವೆನು ಆ ತುಂಬು ಇರವಿನಲ್ಲಿ
ಚೆಲುವೆಂಬುದು ಅಲ್ಲ ಬೇರೇನೂ ಅದು ಭಯದ ಮೊದಲು
ಕೇವಲ ತಾಳಿಕೊಳ್ಳಬಲ್ಲೆವು ಮಾತ್ರ ಅದನು
ಚಕಿತಾರಾಗುವೆವು ಅಷ್ಟು..ತಣ್ಣಗೆ ಸಂಚಲ್ಲಿ ತೊಡಗುವುದು ಅದು,
ಮುಗಿಸಿಬಿಡಲು..ಪ್ರತಿದೇವತೆಯೂ ಭಯವ ಹುಟ್ಟಿಸುವುದು

ತಡೆ ತಡೆದು ಹಿಡಿದು ನುಂಗಿಕೊಳ್ಳುವೆನು ನನ್ನ ಅಳಲ,ಇರುಳ ಆಳುವ..
ಹಾ, ಯಾರ ಕಡೆ ತಿರುಗುವುದು? ದೇವತೆಗಳಲ್ಲ ನರರಲ್ಲ
ಅರಿತಿರುವ ಮೃಗಗಳಿಗು ತಿಳಿದಿರುವುದು ನಾವು
ಸಹಜವಾಗಿಲ್ಲ ಈ ಆಖ್ಯಾನಿತ ಲೋಕದಲ್ಲಿ.
ಇರಬಹುದು ಅಲ್ಲಿ ಉಳಿದಿರಬಹುದು ನಮಗೆ
ಒಂದು ಮರ ಮಲೆಯ ತುದಿಯಲ್ಲಿ ಅನುದಿನವು ಕಣ್ಣಲ್ಲಿ ತುಂಬಿಕೊಳ್ಳಲಿಕ್ಕೆ,
ಉಳಿದಿರಬಹುದು ನಮಗೆ ನಿನ್ನೆಯ ದಾರಿ
ಎಂದಿನ ಹಾಗಿನ ಒಂದು ಸಲೀಸಿನ ಹಾದಿ ನಮ್ಮಲ್ಲಿ ಉಳಿದದ್ದು
ಜೊತೆ ಸೇರಿದ್ದು ಎಂದೂ ಹೊರಟು ಹೋಗದ್ದು……… (more…)

Tuesday February 6, 2007

ಸಿಂಹಾಸನವೂ ಹಣೆಯ ಬರೆಹವೂ

Filed under: ಮೈಸೂರಿನಿಂದ ಅಂಕಣ — Rasheed @ 11:26 am

buttikorava-4a.jpgನಿನ್ನೆಯ ಇರುಳು ಭರತನ ಹುಣ್ಣಿಮೆ. ಮಾಂತ್ರಿಕ ಕವಿ ಬೇಂದ್ರೆ ಹುಟ್ಟಿದ ದಿನ ಕಳೆದು ಮೂರನೆಯ ರಾತ್ರಿ. ಹದುಳದಲ್ಲಿ ಮೂಡಿದ ಹುಣ್ಣಿಮೆ ಮುಖಕ್ಕೆ ರಾಚುತ್ತಿತ್ತು.

`ಬರೀ ಕಷ್ಟ ಹೇಳಬೇಡಿ ಕಥೆ ಹೇಳಿ, ಸುಖ ಹೇಳಿ, ತಮಾಷೆ ಹೇಳಿ. ನಾನೂ ನಿಮ್ಮ ಹಾಗೆ ಸಾರಾಯಿ ಕುಡಿದಿರುವೆನೆಂದು ಅಂದುಕೊಂಡು ಮಾತನಾಡಿ. ಈ ಲೋಕ ಹುಟ್ಟುವ ಮೊದಲೇ ಹುಟ್ಟಿದಂತಿರುವ ನಿಮ್ಮ ಬುಟ್ಟಿಕೊರಚ ಕುಲ ಹೇಗೆ ಉಂಟಾಯಿತು ಎಂದು ತಿಳಿಸಿ’ ಎಂದು ನಾನು ಅವರ ಬಳಿ ಗೋಗರೆಯುತ್ತಿದ್ದೆ. ಅವರು ಹೇಳ ದಿದ್ದರೂ, ಅಳದಿದ್ದರೂ ಅವರ ಸಂಕಟ ಆ ಬೆಳದಿಂಗಳಿನಂತೆ ನಿಚ್ಚಳ ವಾಗಿತ್ತು. ಮೈಸೂರಿನ ಸಂಸ್ಕೃತಿ, ಸಂಗೀತ, ಸುಖ, ಸಮೃದ್ಧಿ, ಇತಿಹಾ ಎಲ್ಲವನ್ನೂ ಒಟ್ಟಿಗೆ ಸೇರಿಸಿ ತೂಕಕ್ಕೆ ಹಾಕಿದರೂ ಅದು ಏನೇನೂ ಅಲ್ಲ ವೆಂಬಂತೆ ಆ ಬುಟ್ಟಿಕೊರಚರ ಹಸಿವು, ಬೇಸರ, ಏಕಾಂಗಿತನ, ಅಸಹಾಯ ಕತೆ ಕೆನ್ನೆಗೆ ಹೊಡೆದಷ್ಟು ಸ್ಪಷ್ಟವಾಗಿ ಭಾಸವಾಗುತ್ತಿತ್ತು. (more…)

Blog at WordPress.com.